ನವದೆಹಲಿ/ಜಮ್ಮು (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್ಆರ್ಎಫ್) ಉದಾರ ದೇಣಿಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಲ್ಲಿ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.
‘ದೇಶದ ಪ್ರಜೆಗಳೇ, ಜಮ್ಮು–ಕಾಶ್ಮೀರವು ಭೀಕರ ಪ್ರವಾಹಕ್ಕೆ ನಲುಗಿರುವುದು ನಿಮಗೆಲ್ಲ ಗೊತ್ತೇ ಇದೆ. ಅನೇಕರು ಜಲಸಮಾಧಿಯಾಗಿದ್ದಾರೆ. ಎಷ್ಟೋ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಇಂಥ ದುರ್ಬರ ಸನ್ನಿವೇಶದಲ್ಲಿ ಕಾಶ್ಮೀರದ ಜನರಿಗೆ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೆ ನಮ್ಮೆಲ್ಲರ ಸಹಾಯ ಹಸ್ತ ಬೇಕಾಗಿದೆ’ ಎಂದು ಮೋದಿ ತಮ್ಮ ಮನವಿಯಲ್ಲಿ ಹೇಳಿದ್ದಾರೆ.
ಪಿಎಂಎನ್ಆರ್ಎಫ್ಗೆ ಆನ್ಲೈನ್ ಹಾಗೂ ಪಿಎಂಒ ವೈಬ್ಸೈಟ್ ಮೂಲಕ ಹಣ ಕಳಿಸಬಹುದು. ‘ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ’ ಹೆಸರಿನಲ್ಲಿ ಚೆಕ್/ ಡ್ರಾಫ್ಟ್/ ನಗದು ಕಳಿಸಬಹುದು. ಈ ಕುರಿತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ನಿರ್ದೇಶನ ನೀಡಿರುವುದರಿಂದ ದೇಣಿಗೆ ಕಳಿಸುವುದಕ್ಕೆ ಬ್ಯಾಂಕುಗಳು ಯಾವುದೇ ಶುಲ್ಕ ವಿಧಿಸು ವುದಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರಿಹಾರ ಪ್ಯಾಕೇಜ್ ಘೋಷಣೆ: ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಜಮ್ಮು ವಲಯಕ್ಕೆ ರೂ.೨೦೦ ಕೋಟಿ ಹಾಗೂ ಕಾಶ್ಮೀರ ಕಣಿವೆಯಲ್ಲಿ ಸಂತ್ರಸ್ತರ ಕುಟುಂಬಕ್ಕೆ ತಲಾ ರೂ.೩.೫ ಲಕ್ಷ ಘೋಷಿಸಲಾಗಿದೆ.
ಚಳಿಗಾಲದ ಭಯ: ಪ್ರವಾಹ ತಗ್ಗುತ್ತಿದ್ದಂತೆಯೇ ಕಣಿವೆ ರಾಜ್ಯದ ಜನರಿಗೆ ಚಳಿಗಾಲದ ಭಯ ಕಾಡುತ್ತಿದೆ. ‘ತಿನ್ನಲು ಏನೂ ಇಲ್ಲ. ನಮ್ಮ ಮನೆಗಳು ಜಲಸಮಾಧಿಯಾಗಿವೆ. ಎಲ್ಲಿಗೆ ಹೋಗಬೇಕೋ ತಿಳಿಯುತ್ತಿಲ್ಲ. ಬದುಕುಳಿದಿರುವುದು ನಮ್ಮ ಅದೃಷ್ಟ. ಆದರೆ ಮುಂದೆ ಎಲ್ಲಿ ನೆಲೆಸಬೇಕು ಎಂಬ ಚಿಂತೆ ಕಾಡುತ್ತಿದೆ’ ಎಂದು ಶ್ರೀನಗರದ ನಿವಾಸಿ ಗುಲಾಂ ಕಾದಿರ್್ ಹೇಳುತ್ತಾರೆ.
‘109 ವರ್ಷಗಳಲ್ಲೇ ಭೀಕರ ಪ್ರವಾಹ’: ಜಮ್ಮು–ಕಾಶ್ಮೀರದಲ್ಲಿ ೧೦೯ವರ್ಷಗಳಲ್ಲೇ ಭೀಕರ ಪ್ರವಾಹ ಇದಾಗಿದೆ. ಪರಿಹಾರ ಕಾರ್ಯಕ್ಕೆ ಕೆಲವು ಪ್ರತ್ಯೇಕತಾವಾದಿಗಳು ಅಡ್ಡಿ ಮಾಡುತ್ತಿದ್ದಾರೆ. ಆದರೂ ಅದಕ್ಕೆ ಸೊಪ್ಪು ಹಾಕದೇ ಕಾಶ್ಮೀರದ ಜನರಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ’ ಎಂದು ಗೃಹ ಸಚಿವರು ಹೇಳಿದ್ದಾರೆ.
‘ಕಾಶ್ಮೀರಿ ವಲಸಿಗರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಸರ್ಕಾರ ರೂ.೫೦೦ ಕೋಟಿ ತೆಗೆದಿಟ್ಟಿದೆ. ಕಾಶ್ಮೀರ ಕಣಿವೆಗೆ ಮರಳುವಂತೆ ವಲಸಿಗರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ಸಮಾಲೋಚನೆ ನಡೆಯುತ್ತಿದೆ’ ಎಂದೂ ತಿಳಿಸಿದ್ದಾರೆ.
ಪರಿಹಾರ ಕಾರ್ಯಕ್ಕೆ ಏಕೀಕೃತ ಸಂಸ್ಥೆ: ಸುಪ್ರೀಂ ಸೂಚನೆ
ನವದೆಹಲಿ (ಐಎಎನ್ಎಸ್): ಪ್ರವಾಹ ಪೀಡಿತ ಜಮ್ಮು–ಕಾಶ್ಮೀರದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ಸಹಕಾರ ನೀಡಲು ಏಕೀಕೃತ ಸಂಸ್ಥೆ ಯೊಂದನ್ನು ರಚಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸಂತ್ರಸ್ತರ ಪುನರ್ವಸತಿ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಕೋರಿ ವಸುಂಧರಾ ಪಾಠಕ್ ಮಸೂದಿ ಹಾಗೂ ಜಮ್ಮು–ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್ ಈ ಸೂಚನೆ ನೀಡಿದೆ. ಸರ್ಕಾರ ಕೈಗೊಂಡ ಪರಿಹಾರ ಕಾರ್ಯಾಚರಣೆಯ ವಿವರವನ್ನು ಸೋಮವಾರ ಸಲ್ಲಿಸುವಂತೆಯೂ ಕೋರ್ಟ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.