ಹೈದರಾಬಾದ್ (ಪಿಟಿಐ): ವಿಜಯವಾಡ ಮೂಲದ ಡಾ. ಎನ್ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಘಟಿಸಿದ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮದ ಹಿಂದಿನ ಪ್ರಮುಖ ಸಂಚುಕೋರ ಎ. ಶ್ರೀಕಾಂತ, ದಾವಣಗೆರೆಯ ಅಮೀರ್ ಅಹಮ್ಮದ್ ಮತ್ತು ಡಾ. ಅವಿನಾಶ್ ಅವರನ್ನು ಆಂಧ್ರಪ್ರದೇಶದ ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
16 ದಲ್ಲಾಳಿಗಳು, ಒಬ್ಬ ವೈದ್ಯ, ಇಬ್ಬರು ಸಹಾಯಕರು ಮತ್ತು 27 ವಿದ್ಯಾರ್ಥಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಇಲ್ಲಿಯ ವರೆಗೆ ನಡೆದಿರುವ ತನಿಖೆಯಿಂದ ತಿಳಿದು ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಿಐಡಿ) ಟಿ. ಕೃಷ್ಣ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಮಣಿಪಾಲ ಮುದ್ರಣಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ಎನ್ಟಿಆರ್ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪ್ರಸಾದ ಹೇಳಿದರು.