ಬೆಂಗಳೂರು: ಹೆಬ್ಬಾಳದ ಕೆಂಪಾಪುರ ಜಂಕ್ಷನ್ನಲ್ಲಿ ಸ್ಕೈವಾಕ್ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ವರ್ಷವೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ವಿವರವಾದ ಪ್ರಸ್ತಾವವನ್ನು ಸಲ್ಲಿಸಿತ್ತು. ಆದರೆ, ಅದನ್ನು ಎನ್ಎಚ್ಎಐ ತಿರಸ್ಕರಿಸಿತ್ತು.
ಸ್ವತಃ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಶುಕ್ರವಾರ ಕೌನ್ಸಿಲ್ ಸಭೆಗೆ ಈ ಮಾಹಿತಿ ನೀಡಿದರು. ‘ಜಂಕ್ಷನ್ನಿಂದ ಮುಂದಿರುವ ಮೇಲ್ಸೇತುವೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸುಪರ್ದಿಯಲ್ಲಿದೆ. ಕೆಳಭಾಗದ ರಸ್ತೆ ಎನ್ಎಚ್ಎಐ ವ್ಯಾಪ್ತಿಗೆ ಒಳಪಡುತ್ತದೆ. ಅಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಲು ಎನ್ಎಚ್ಎಐ ಅನುಮತಿ ಅಗತ್ಯವಾಗಿದೆ. ಈ ಹಿಂದೆ ಪ್ರಸ್ತಾವ ಸಲ್ಲಿಸಿದ್ದಾಗ ಪ್ರಾಧಿಕಾರ ಅದನ್ನು ತಿರಸ್ಕರಿಸಿತ್ತು’ ಎಂದು ವಿವರಿಸಿದರು.
‘ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸ್ಕೈ ವಾಕ್ ನಿರ್ಮಿಸಲು ಸಿದ್ಧವಿತ್ತು. ಆದರೆ, ಅನುಮತಿ ಸಿಗದ ಕಾರಣ ಪ್ರಸ್ತಾವವನ್ನು ಕೈಬಿಡಲಾಯಿತು. ಎನ್ಎಚ್ಎಐ ವತಿಯಿಂದಲೇ ಅಲ್ಲೊಂದು ಸ್ಕೈ ವಾಕ್ ನಿರ್ಮಾಣ ಮಾಡುವ ಭರವಸೆ ಅಲ್ಲಿನ ಅಧಿಕಾರಿಗಳಿಂದ ಸಿಕ್ಕಿದೆ’ ಎಂದು ತಿಳಿಸಿದರು.
ಬ್ಯಾಟರಾಯನಪುರ ವಾರ್ಡ್ನ ಇಂದಿರಾ ಹಾಗೂ ಕೊಡಿಗೆಹಳ್ಳಿ ವಾರ್ಡ್ನ ಅಶ್ವತ್ಥನಾರಾಯಣ ಗೌಡ, ‘ಇನ್ನೂ ಎಷ್ಟು ಬಲಿಗಳನ್ನು ಪಡೆದ ಮೇಲೆ ಅಲ್ಲಿ ಸ್ಕೈ ವಾಕ್ ನಿರ್ಮಾಣ ಮಾಡಲಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎನ್ಎಚ್ಎಐ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ. ಬಿಬಿಎಂಪಿಯಿಂದ ಪತ್ರ ಬರೆದು ಕೂಡಲೇ ಸ್ಕೈ ವಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು’ ಎಂದು ಆಯುಕ್ತರು ಉತ್ತರಿಸಿದರು.
ತಿರಸ್ಕರಿಸಲು ಕಾರಣ...
‘ಎನ್ಎಚ್ಎಐಗೆ ಸೇರಿದ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗೆ ಸ್ಕೈ ವಾಕ್ ನಿರ್ಮಿಸಲು ಅವಕಾಶ ಮಾಡಿಕೊಟ್ಟು, ಅಲ್ಲಿ ಜಾಹೀರಾತು ಫಲಕ ಅಳವಡಿಸುವ ಯೋಜನೆ ಹೊಂದಿದ್ದರಿಂದ ಪ್ರಸ್ತಾವ ತಿರಸ್ಕಾರ ಮಾಡಲಾಗಿತ್ತು’ ಎಂದು ಎನ್ಎಚ್ಎಐ ಅಧಿಕಾರಿಗಳು ಮಾಹಿತಿ ನೀಡಿದರು.