ನವದೆಹಲಿ (ಐಎಎನ್ಎಸ್): ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲು ಕಂಡಿರುವ ಕಾರಣ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಭಾನುವಾರ ನೀರವ ಮೌನ ಆವರಿಸಿತ್ತು.
‘ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ದೊಡ್ಡ ಜವಾಬ್ದಾರಿ ಕೊಡಬೇಕು’ ಎಂದು ಅಲ್ಲಿ ಸೇರಿದ್ದ ಸುಮಾರು 100 ಕಾರ್ಯಕರ್ತರಿದ್ದ ಗುಂಪೊಂದು ಆಗ್ರಹಿಸಿತು.
ಆದರೆ, ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನ ಕಚೇರಿಯಲ್ಲಿ ಯಾವೊಬ್ಬ ಮುಖಂಡರೂ ಇರಲಿಲ್ಲ. ವಕ್ತಾರ ಅಜಯ್ ಮಾಕನ್ ಭಾನುವಾರ ಬೆಳಿಗ್ಗೆ ಕಚೇರಿಗೆ ಬಂದಿದ್ದರು. ಆದರೆ ಪಕ್ಷಕ್ಕೆ ಸೋಲು ಖಚಿತವಾಗಿದ್ದೇ ತಡ ಅಲ್ಲಿಂದ ನಿರ್ಗಮಿಸಿದರು.
ಘೋಷಣೆ: ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿ ಮುಂದೆ ಸೇರಿದ್ದ ಸುಮಾರು ೧೦೦ ಕಾರ್ಯಕರ್ತರು ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ಪ್ರಮುಖ ಹೊಣೆ ಕೊಡುವಂತೆ ಆಗ್ರಹಿಸಿದರು. ಕಾರ್ಯಕರ್ತರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
‘ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಉಳಿಸಿ’ (ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಬಚಾವೊ), ‘ಪ್ರಿಯಾಂಕಾ ಅವರನ್ನು ಕರೆತಂದು ದೇಶವನ್ನು ಉಳಿಸಿ’ ( ಪ್ರಿಯಾಂಕಾ ಲಾವೊ ದೇಶ್ ಬಚಾವೊ) ಎಂಬ ಘೋಷಣೆಯ ಭಿತ್ತಿಪತ್ರಗಳನ್ನು ಅವರು ಹಿಡಿದಿದ್ದರು.
‘ಕಾರ್ಯಕರ್ತರು ಹಾಗೂ ನಾಯಕತ್ವದ ನಡುವೆ ಸರಿಯಾದ ಸಂಪರ್ಕವೇ ಇಲ್ಲ. ಸೋಲಿಗೆ ಇದೇ ಕಾರಣವಾಯಿತು’ ಎಂದು ಸ್ಥಳೀಯ ಕಾರ್ಯಕರ್ತ ಜಗದೀಶ್ ಶರ್ಮಾ ಹೇಳಿದರು.
‘ಪಕ್ಷವನ್ನು ಮತ್ತೆ ಕಟ್ಟುವುದಕ್ಕೆ ಪ್ರಿಯಾಂಕಾ ಅವರು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೆರವು ನೀಡಬೇಕು’ ಎಂದೂ ಒತ್ತಾಯಿಸಿದರು.