ನಿರ್ಮಾಪಕರು: ರವಿಕುಮಾರ್, ರಮೇಶ್ ಎಚ್.ಕೆ.
ನಿರ್ದೇಶನ: ಸೂರ್ಯ ಕಿರಣ್
ತಾರಾಗಣ: ಸೂರ್ಯ ಕಿರಣ್, ಎಸ್ತರ್ ನರೋನಾ, ವಿದ್ಯಾ, ಶರತ್ ಲೋಹಿತಾಶ್ವ, ರಮೇಶ್ ಭಟ್, ರಾಮಕೃಷ್ಣ, ನಾಗಿಣಿ ಭರಣ, ಸಂಕೇತ್ ಕಾಶಿ, ಮತ್ತಿತರರು
ಏಳು ವರ್ಷಗಳ ಹಿಂದೆ ತಮ್ಮ ಸ್ನೇಹಿತನೊಬ್ಬನ ಬದುಕಿನಲ್ಲಿ ಘಟಿಸಿದ ದುರಂತ ಪ್ರೇಮಕಥೆಯನ್ನು ‘ಉಸಿರಿಗಿಂತ’ ಶೀರ್ಷಿಕೆಯಡಿ ಚಿತ್ರರೂಪಕ್ಕಿಳಿಸಿದ್ದಾರೆ ನಿರ್ದೇಶಕ ಸೂರ್ಯ ಕಿರಣ್. ಇದು ಅವರ ಮೊದಲ ನಟನೆ–ನಿರ್ದೇಶನದ ಚಿತ್ರ. ಪ್ರೇಮದ ಉನ್ಮಾದ ಸ್ಥಿತಿ ತಲುಪಿ ಹುಚ್ಚನಾದ ಪ್ರಿಯಕರನೊಬ್ಬನ ಸ್ಥಿತಿ–ಗತಿಯ ಚಿತ್ರಣವೇ ‘ಉಸಿರಿಗಿಂತ’. ಎಷ್ಟರ ಮಟ್ಟಿಗೆ, ಯಾವ ಪ್ರಮಾಣದಲ್ಲಿ ನೈಜ ಘಟನೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ; ಕಾಲ್ಪನಿಕ ಅಂಶಗಳೆಷ್ಟು ಎನ್ನುವುದನ್ನು ನಿರ್ದೇಶಕರು ಮಾತ್ರ ಬಲ್ಲರು. ‘ಹುಚ್ಚು ಕೋಡಿ ಮನಸ್ಸು ಇದು ಹದಿನಾರರ ಹರೆಯ’ ಎನ್ನುವಂತೆ ಕಾಲೇಜು ಹಂತದಲ್ಲಿನ ವಯೋಸಹಜವಾದ ಪ್ರೀತಿ–ಪ್ರೇಮ, ಆಶಾಭಂಗ, ನೋವಿನ ತಲ್ಲಣಗಳು ಇಲ್ಲಿ ನಿರೂಪಿತವಾಗಿವೆ.
ಶೀರ್ಷಿಕೆಯ ಕಾರಣದಿಂದ ಪ್ರೀತಿಯ ಮಧುರ ಅನುಭೂತಿಯ; ಯಶಸ್ವಿ ಪ್ರೇಮಕಥೆಯ ಚಿತ್ರ ಎಂದುಕೊಂಡು ಚಿತ್ರಮಂದಿರದೊಳಗೆ ಪ್ರವೇಶಿಸುವ ಪ್ರೇಕ್ಷಕನಿಗೆ ಉಸಿರಿಗಿಂತ ‘ತಲೆಭಾರ’ವಾಗಿ ಕಾಣಿಸುತ್ತದೆ. ರಕ್ತ ಹರಿಯುವಂತೆ ಹೊಡೆದಾಡುವ, ಎಲ್ಲಿಂದ ಎಲ್ಲೆಲ್ಲಿಗೋ ಓಡುವ, ಅನಗತ್ಯವಾಗಿ ಬರುವ ಸನ್ನಿವೇಶಗಳೇ ಇದಕ್ಕೆ ಕಾರಣ. ಕೆಲವೆಡೆಗಳಲ್ಲಿ ಸನ್ನಿವೇಶಗಳನ್ನು ತುರುಕಿರುವುದು ನೇರವಾಗಿಯೇ ಅನುಭವಕ್ಕೆ ಬರುತ್ತದೆ. ಈಗಾಗಲೇ ತೆರೆಯಲ್ಲಿ ಕಂಡಿರುವ ದುರಂತ ಪ್ರೇಮಕಥೆ ಸಿನಿಮಾಗಳ ಸಾಲಿಗೆ ಇದನ್ನೂ ಸೇರಿಸಬಹುದು.
ಶ್ರೀಮಂತರ ಮನೆಯ ಹುಡುಗ ಸೂರ್ಯ, ಬಡತನದ ಹುಡುಗಿ ರಶ್ಮಿಯನ್ನು ಪ್ರೀತಿಸುವನು. ಆಕೆಗೆ ನೆರವಾಗುವನು. ಈ ನಡುವೆ ತನ್ನನ್ನು ಪ್ರೇಮಿಸುವ ಬಾಲ್ಯದ ಗೆಳತಿಯ ಒಲವುಗಳನ್ನು ನಿರಾಕರಿಸುವನು. ಈ ಹಂತದ ಸಿನಿಮಾದಲ್ಲಿ ಕಾಣುವುದು ತ್ರಿಕೋನ ಪೇಮಕಥೆಯ ತಿರುಳು. ದೇವದಾಸಿಯ ಮಗಳನ್ನು ಪರಿಶುದ್ಧ ಮನಸ್ಸಿನ ಸೂರ್ಯ ಮದುವೆಯಾಗುವುದು ಒಳಿತಲ್ಲ ಎನ್ನುವ ಭಾವದಲ್ಲಿ ರಶ್ಮಿಯ ತಾಯಿ ತಾನು ಸಾಯುವಾಗ ಭಾಷೆಯನ್ನು ತೆಗೆದುಕೊಳ್ಳುವಳು.
ತಾಯಿಗೆ ಕೊಟ್ಟ ಮಾತಿನಿಂದ ರಶ್ಮಿಯ ಮನಸ್ಸು ಕದಡಿ ಸೂರ್ಯನನ್ನು ದೂರ ಮಾಡಲು ಯತ್ನಿಸುವಳು. ನಿದ್ದೆಯಲ್ಲಿ ನಡೆಯುವ ರೋಗವುಳ್ಳ ಸೂರ್ಯ ಪ್ರೀತಿಯ ಅಮಲಿನಲ್ಲಿ ಹುಚ್ಚನಾಗುವನು. ಈ ‘ಪಾಗಲ್’ ಸ್ಥಿತಿಯಿಂದ ಆತನನ್ನು ಹೊರತರುವುದು ಬಾಲ್ಯದ ಗೆಳತಿ!
ಸೂರ್ಯ ಪುನಃ ರಶ್ಮಿಯ ಪ್ರೇಮವನ್ನು ಅರಸುವನು. ರಶ್ಮಿ ಮತ್ತೊಬ್ಬನನ್ನು ವಿವಾಹವಾದಾಗ ಮತ್ತದೆ ಹುಚ್ಚನ ಸ್ಥಿತಿ! ಹೀಗೆ ಅನಗತ್ಯ ಸನ್ನಿವೇಶಗಳ ನಡುವೆ ಒಂದು ನೈಜಕಥೆಯನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ಗಂಭೀರವಾದ ‘ದೇವದಾಸಿ’ ಸಮಸ್ಯೆಯನ್ನೂ ಒಳಗೊಳ್ಳುತ್ತದೆ.
ಆದಿಯಿಂದ ಅಂತ್ಯದವರೆಗೂ ಕಾಣಿಸುವ ‘ಒಂದು ಕ್ಷಣ ನಿನ್ನ ಮಿಸ್ ಮಾಡ್ಕೊಂಡ್ರೆ ಅಳು ಬಂದು ಬಿಡುತ್ತೆ’, ‘ನಿನ್ನ ಕೊನೆ ಉಸಿರು ಇರೋವರೆಗೂ ಪ್ರೀತಿ ಮಾಡುತ್ತೇನೆ’ ಇಂಥ ಸವಕಲು, ಕ್ಲೀಷೆಯ ಸಂಭಾಷಣೆಗಳು ಚಿತ್ರದುದ್ದಕ್ಕೂ ತುಂಬಿರುವುದರಿಂದ ಸಂಭಾಷಣೆ ಹಿತ ಎನಿಸುವುದಿಲ್ಲ.
ನಾಯಕ ಸೂರ್ಯ ಕಿರಣ್ ಸಾಹಸ ದೃಶ್ಯಗಳಲ್ಲಿ ಮಿಂಚುವರೇ ಹೊರತು ನಟನೆಯಲ್ಲಿ ಅಲ್ಲ. ನಾಯಕಿ ಎಸ್ತರ್ ನರೋನಾ ನಾಯಕನ ಮನನೋಯಿಸಲು ಹೇಳುವ ಸಂಭಾಷಣೆಗಳಲ್ಲಿ ಚುರುಕಾಗಿ ಕಾಣುವರೇ ಹೊರತು ನಟನೆಯಲ್ಲಿ ಅಲ್ಲ. ಸಾಮಾನ್ಯವಾಗಿ ಪ್ರೇಮಕಥೆಗಳಲ್ಲಿ ಹಾಡುಗಳಿಗೆ ಪ್ರಾಧಾನ್ಯವಿರುತ್ತದೆ. ಇಲ್ಲಿ ಪ್ರೇಕ್ಷಕನ ಉಸಿರನ್ನು ಆಹ್ಲಾದಗೊಳಿಸುವ ಸಾಹಿತ್ಯ–ಸಂಗೀತವೂ ಗೌಣ. ಅದೇ ಹಳೆಯ ಭಗ್ನಪ್ರೇಮಕಥೆಗೆ ಹೊಸ ಲೇಬಲ್ ಅಂಟಿಸಿದ್ದಾರೆ ನಿರ್ದೇಶಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.