ಚನ್ನಪಟ್ಟಣ: ‘ಪ್ಲಾಸ್ಟಿಕ್ ಬಳಕೆಯಿಂದ ಜನರಲ್ಲಿ ಹಲವು ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಇದನ್ನು ತಡೆಯಲು ಸಮಾಜವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಗಾಂಧಿ ಭವನದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೇಶವನ್ನು ಪ್ಲಾಸ್ಟಿಕ್ ಮುಕ್ತ ಸಮಾಜವಾಗಿ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಶಿವಮಾದು ಮಾತನಾಡಿ, ನಮ್ಮ ದೇಶವನ್ನು ಪ್ಲಾಸ್ಟಿಕ್ ಮತ್ತು ಕಸದ ಪಿಡುಗುಗಳು ನಿರಂತರ ಕಾಡುತ್ತಿವೆ. ಇವುಗಳಿಂದಾಗುವ ಅನಾಹುತವನ್ನು ಮನಗಂಡು ಈಗಲೇ ನಿವಾರಿಸಿಕೊಳ್ಳಬೇಕು ಎಂದರು.
ಜಾಗೃತಿ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿತು.
ಈ ಸಂದರ್ಭದಲ್ಲಿ ಸಿಂ.ಲಿಂ.ನಾಗರಾಜು, ರವಿಕುಮಾರ್ಗೌಡ ಎಚ್.ಕೃಷ್ಣೇಗೌಡ, ರಾಧಿಕಾ, ಲಕ್ಷ್ಮೀಪತಿ, ವಿಜಯ್ ರಾಂಪುರ, ಶ್ರೀನಿವಾಸ ರಾಂಪುರ, ಚೌ.ಪು.ಸ್ವಾಮಿ, ಡಿ.ರಾಜಶೇಖರ್, ಪುಟ್ಟಸ್ವಾಮಿಗೌಡ, ಮಂಜೇಶ್ಬಾಬು, ಶಂಕರ್ಬಾಬು, ಚಲುವರಾಜು, ಸಿ.ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು.