ಮುಂಬೈ (ಪಿಟಿಐ): ಇಲ್ಲಿಯ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ (44) ಅವರು ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮೋದಿ ಸಂಪುಟದ ಹಿರಿಯ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಪಕ್ಷದ ರಾಷ್ಟ್ರೀಯ ನಾಯಕರು, ಚಿತ್ರತಾರೆಯರು, ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಸಾವಿರಾರು ಜನರು ಈ ಸಮಾರಂಭಕ್ಕೆ ಸಾಕ್ಷಿಯಾರು. ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಫಡ್ನವೀಸ್ ಅವರಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಪ್ರಮಾಣವಚನ ಬೋಧಿಸಿದರು.
ಮುನಿಸು ಮರೆತು ಬಂದ ಉದ್ಧವ್: ಬಿಜೆಪಿಯಿಂದ ಪದೇಪದೇ ಮುಜುಗರವಾಗುತ್ತಿದೆ ಎಂದು ದೂರಿದ್ದ ಶಿವಸೇನಾ, ಪ್ರಮಾಣ ವಚನ ಸಮಾರಂಭ ಬಹಿಷ್ಕರಿಸಲು ನಿರ್ಧರಿಸಿತ್ತು. ಇದರಿಂದಾಗಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಸಮಾರಂಭಕ್ಕೆ ಹಾಜರಾಗುವ ಬಗ್ಗೆ ಕೊನೆಯ ಕ್ಷಣದವರೆಗೂ ಸಂದೇಹವಿತ್ತು.
ಆದರೆ, ಅಂತಿಮ ಹಂತದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉದ್ಧವ್ ಅವರನ್ನು ಆಹ್ವಾನಿಸಿ ಸಮಾರಂಭಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಸಮಾರಂಭಕ್ಕೆ ಉದ್ಧವ್ ಬರುತ್ತಿದ್ದಂತೆ ಮೋದಿ ಹಾಗೂ ಉದ್ಧವ್ ಪರಸ್ಪರ ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲರ ಕಣ್ಣುಗಳು ಈ ಇಬ್ಬರು ನಾಯಕರ ಮೇಲೆಯೇ ನೆಟ್ಟಿದ್ದವು.
ಉದ್ಧವ್ ಠಾಕ್ರೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಬಿಜೆಪಿ ಮತ್ತು ಶಿವಸೇನಾ ಮಧ್ಯೆ ಸಂಧಾನದ ಸಾಧ್ಯತೆಯ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫಡ್ನವೀಸ್ ಜತೆ 9 ಸಚಿವರ ಪ್ರಮಾಣ
ಮುಂಬೈ(ಪಿಟಿಐ): ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡ ದೇವೇಂದ್ರ ಫಡ್ನವೀಸ್ ಜತೆ 9 ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದರು. ದಿವಂಗತ ನಾಯಕ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ, ಹಿರಿಯ ನಾಯಕ ಏಕನಾಥ್ ಖಡ್ಸೆ, ಸುಧೀರ್ ಮುಂಗಂಟಿವಾರ್, ವಿನೋದ್ ತಾವ್ಡೆ, ಪ್ರಕಾಶ್ ಮೆಹ್ತಾ, ಚಂದ್ರಕಾಂತ್ ಪಾಟೀಲ, ವಿಷ್ಣು ಸಾವರಾ ಸಂಪುಟ ದರ್ಜೆಯ ಸಚಿವರಾಗಿ ಮತ್ತು ದಿಲೀಪ್ ಕಾಂಬ್ಳೆ ಹಾಗೂ ವಿದ್ಯಾ ಠಾಕೂರ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಫಡ್ನವೀಸ್ ಮಹಾರಾಷ್ಟ್ರದ 27ನೇ ಮುಖ್ಯಮಂತ್ರಿ. ಬಿಜೆಪಿ ಹಾಗೂ ಮಿತ್ರಪಕ್ಷದ ಮುಖ್ಯಮಂತ್ರಿಗಳಾದ ಆನಂದಿಬೆನ್ ಪಟೇಲ್, ಮನೋಹರ್ ಪರಿಕ್ಕರ್, ವಸುಂಧರಾರಾಜೇ, ರಮಣಸಿಂಗ್, ಪ್ರಕಾಶ್ ಸಿಂಗ್ ಬಾದಲ್, ಚಂದ್ರಬಾಬು ನಾಯ್ಡು ಸಮಾರಂಭದ ಮೆರಗು ಹೆಚ್ಚಿಸಿದರು.
11ರಂದು ವಿಶ್ವಾಸಮತ: ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನ.೧೧ರಂದು ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಕೋರಲಿದ್ದಾರೆ. ಶನಿವಾರ ನಡೆಯಲಿರುವ ರಾಜ್ಯ ಸಂಪುಟ ಸಭೆ ಬಳಿಕ ಈ ಸಂಬಂಧ ಅಧಿಕೃತ ಹೇಳಿಕೆ ಹೊರಬೀಳಲಿದೆ. ಮೂರು ದಿನಗಳವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.