ನವದೆಹಲಿ (ಪಿಟಿಐ): ಮುಸ್ಲಿಂ ಧಾರ್ಮಿಕ ನಾಯಕರು ನಡೆಸುವ ಶರಿಯತ್ ನ್ಯಾಯಪಂಚಾಯ್ತಿಗಳಿಗೆ (ದಾರುಲ್ಖ್ವಾಜಾ) ಹಾಗೂ ಅವು ಹೊರಡಿಸುವ ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆದರೆ, ಫತ್ವಾ ಹೊರಡಿಸುವ ಪದ್ಧತಿಯನ್ನು ಕಾನೂನುಬಾಹಿರ ಎಂದು ಘೋಷಿಸಲು ಕೋರ್ಟ್ ನಿರಾಕರಿಸಿದೆ. ಸಂವಿಧಾನದ ಅಡಿ ವ್ಯಕ್ತಿಗೆ ನೀಡಲಾದ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದಾದಲ್ಲಿ ಫತ್ವಾ ಹೊರಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ದಾರುಲ್ಖ್ವಾಜಾಗಳು ಮನಸ್ತಾಪಕ್ಕೆ ಒಳಗಾದ ಎರಡು ಬಣಗಳ ನಡುವೆ ರಾಜೀ ಪಂಚಾಯ್ತಿ ಮಾಡಿಸುವ ಅನೌಪಚಾರಿಕ ನ್ಯಾಯಾಂಗ ವ್ಯವಸ್ಥೆಯಾಗಿರುತ್ತದೆ. ಅದನ್ನು ಸ್ವೀಕರಿಸುವುದು, ನಿರ್ಲಕ್ಷಿಸುವುದು ಅಥವಾ ತಿರಸ್ಕರಿಸುವುದು ಆಯಾ ವ್ಯಕ್ತಿಗಳಿಗೆ ಬಿಟ್ಟದ್ದು ಎಂದೂ ಕೋರ್ಟ್ ಹೇಳಿದೆ.
ಹಾಗೆಯೇ ದಾರುಲ್ಖ್ವಾಜಾದಂತಹ ಮುಸ್ಲಿಂ ಧಾರ್ಮಿಕ ಮಂಡಳಿಗಳು ಅವುಗಳ ಮುಂದೆ ಹಾಜರಾಗದ ಮೂರನೇ ವ್ಯಕ್ತಿಯ ವಿರುದ್ಧ
ತೀರ್ಪಿನಲ್ಲಿ ಏನಿದೆ...? *ಖಾಜಿ ಅಥವಾ ಮುಫ್ತಿಗೆ ಇನ್ನೊಬ್ಬರ ಮೇಲೆ ತಮ್ಮ ಅನಿಸಿಕೆಗಳನ್ನು ಹೇರುವ ಅಧಿಕಾರ ಇಲ್ಲ *ಫತ್ವಾ ಜಾರಿಗೊಳಿಸಲು ಬಲವಂತವಾಗಿ ಯತ್ನಿಸಿದಲ್ಲಿ ಕಾನೂನು ಕ್ರಮ *** ಮೊಘಲ್ ಅಥವಾ ಬ್ರಿಟಿಷ್ ಆಳ್ವಿಕೆಯಲ್ಲಿ ಫತ್ವಾಗಳ ಪ್ರಾಮುಖ್ಯ ಏನೇ ಇದ್ದಿರಲಿ, ಸ್ವತಂತ್ರ ಭಾರತದಲ್ಲಿ ಇದಕ್ಕೆ ಸ್ಥಾನವಿಲ್ಲ. ಅವುಗಳಿಗೆ ಸಂವಿಧಾನದ ಮಾನ್ಯತೆಯೂ ಇಲ್ಲ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮವೂ ಮುಗ್ಧರನ್ನು ಶಿಕ್ಷಿಸುವುದಿಲ್ಲ. ಧರ್ಮವೊಂದು ಸಂತ್ರಸ್ತರ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುವಂತಿಲ್ಲ *** ಫತ್ವಾ ಅಂದರೇನು? ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ಮುಫ್ತಿಗಳು (ಮುಸ್ಲಿಂ ಧಾರ್ಮಿಕ ನಾಯಕರು) ನೀಡುವ ಅರ್ಥವಿವರಣೆ ಅಥವಾ ಅಭಿಪ್ರಾಯಕ್ಕೆ ಫತ್ವಾ ಎನ್ನುತ್ತಾರೆ. |
ಫತ್ವಾ ಹೊರಡಿಸುವಂತಿಲ್ಲ ಎಂದೂ ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ಮತ್ತು ಪಿನಾಕಿ ಚಂದ್ರ ಘೋಷ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕಾನೂನುಕ್ರಮ: ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲದ ಕಾರಣ ಅವುಗಳನ್ನು ಜಾರಿಯಲ್ಲಿ ತರಲು ಬಲ ಪ್ರಯೋಗಿಸುವಂತಿಲ್ಲ. ಯಾರಾದರೂ ಫತ್ವಾಗಳನ್ನು ಜಾರಿಗೊಳಿಸಲು ಬಲವಂತವಾಗಿ ಯತ್ನಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ 20 ಪುಟಗಳ ತೀರ್ಪಿನಲ್ಲಿ ವಿವರಿಸಿದೆ.
ಶರಿಯತ್ ನ್ಯಾಯಪಂಚಾಯ್ತಿಗಳ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ವಕೀಲ ವಿಶ್ವಲೋಚನ್ ಮದನ್ ಅವರು 2005ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಇತ್ಯರ್ಥಗೊಳಿಸುವಾಗ ಕೋರ್ಟ್ ಹೀಗೆ ಹೇಳಿದೆ.
ಈ ಶರಿಯತ್ ನ್ಯಾಯಪಂಚಾಯ್ತಿಗಳು ದೇಶದಲ್ಲಿ ಪರ್ಯಾಯ ನ್ಯಾಯ ವ್ಯವಸ್ಥೆಯಾಗಿವೆ. ಇವು ಫತ್ವಾ ಹೊರಡಿಸುವ ಮೂಲಕ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುವ, ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಅರ್ಜಿದಾರರು ದೂರಿದ್ದರು.
ತನ್ನ ಮೇಲೆ ಅತ್ಯಾಚಾರ ಎಸಗಿದ ಮಾವನ ಜತೆಗೆ ವಾಸಿಸುವಂತೆ ಮತ್ತು ಗಂಡ ಮತ್ತು ಮಕ್ಕಳನ್ನು ತೊರೆಯುವಂತೆ ಮುಸ್ಲಿಂ ಮಹಿಳೆಯೊಬ್ಬರಿಗೆ ಶರಿಯತ್ ಪಂಚಾಯ್ತಿ ಫತ್ವಾ ಹೊರಡಿಸಿದ್ದನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ವಿಚಾರಣೆ ಆರಂಭದಲ್ಲಿ ನ್ಯಾಯಪೀಠಕ್ಕೆ ಪ್ರತಿಕ್ರಿಯೆ ಸಲ್ಲಿಸಿದ್ದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ‘ಫತ್ವಾ ಪಾಲನೆ ಕಡ್ಡಾಯವೇನೂ ಅಲ್ಲ. ಇದು ಮುಫ್ತಿ (ಮೌಲ್ವಿ) ಅವರ ಅಭಿಪ್ರಾಯವಷ್ಟೆ. ಅವರಿಗೆ ಇದನ್ನು ಅನುಷ್ಠಾನಕ್ಕೆ ತರುವ ಯಾವುದೇ ಅಧಿಕಾರ ಇಲ್ಲ’ ಎಂದು ಹೇಳಿತ್ತು.
ಕೋರ್ಟ್ ಹೇಳಿದ್ದೇನು?: ಮುಗ್ಧ ವ್ಯಕ್ತಿಗಳನ್ನು ಶಿಕ್ಷಿಸಲು ಫತ್ವಾ ಹೊರಡಿಸುವಂತಿಲ್ಲ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮವೂ ಮುಗ್ಧರನ್ನು ಶಿಕ್ಷಿಸುವುದಿಲ್ಲ. ಯಾವುದೇ ಶಾಸಕಾಂಗ ರೂಪಿಸಿರುವ ಕಾನೂನಿನ ಅಡಿ ದಾರುಲ್ಖ್ವಾಜಾ ರಚಿಸಿಲ್ಲ. ಹಾಗಾಗಿ ಖಾಜಿ ಅಥವಾ ಮುಫ್ತಿ ತನ್ನ ಅಭಿಪ್ರಾಯವನ್ನು ಬಲವಂತವಾಗಿ ಹೇರುವಂತಿಲ್ಲ. ಶರಿಯತ್ ನ್ಯಾಯಪಂಚಾಯ್ತಿ ಸ್ಥಾಪನೆಯ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ, ಅವುಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಫತ್ವಾ ಪ್ರತಿಕ್ರಿಯೆಗಳು
ಷರಿಯತ್ಗೆ ಸಂವಿಧಾನ ಹಕ್ಕು
ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಕಾರ್ಯನಿರ್ವಹಿಸಲು ಮುಸ್ಲಿಂರಿಗೆ ಸಂವಿಧಾನದತ್ತವಾದ ಹಕ್ಕು ಇದೆ.
– ಜಫರ್ಯಾಬ್ ಜಿಲಾನಿ ಸದಸ್ಯ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ವ್ಯಾಜ್ಯ ಇತ್ಯರ್ಥ ಅಂತಿಮ ಗುರಿ
ನ್ಯಾಯಾಂಗ ವ್ಯವಸ್ಥೆಗೆ ಸಮಾನಾಂತರವಾಗಿ ನಾವು ಏನನ್ನೂ ಮಾಡುತ್ತಿಲ್ಲ. ಖಾಜಿಗಳು ನೀಡಿದ ಆದೇಶ ಎಲ್ಲರಿಗೂ ಅನ್ವಯಿಸುತ್ತವೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಎರಡೂ ಕಡೆಯ ವ್ಯಕ್ತಿಗಳ ಒಪ್ಪಿಗೆ ಪಡೆದ ನಂತರವೇ ವ್ಯಾಜ್ಯ ಇತ್ಯರ್ಥಗೊಳಿಸುತ್ತೇವೆ.
– ಖಾಲಿದ್ ರಶೀದ್ ಫರಂಗಿ, ಮುಸ್ಲಿಂ ವಿದ್ವಾಂಸ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.