ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ಫೆ.11ರ ಆಸುಪಾಸಿನಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 74 ನಿಕ್ಷೇಪಗಳ ಮಂಜೂರಾತಿ ನಡೆಯಲಿದೆ. ಇದರಿಂದ ವಿದ್ಯುತ್ ದರ ದುಬಾರಿಯಾಗುವುದನ್ನು ತಪ್ಪಿಸುವ ಸಲುವಾಗಿ ಹರಾಜಿನಲ್ಲಿ ಭಾಗಿಯಾಗುವ ಕಂಪೆನಿಗಳಿಗೆ ಕೆಲವು ನಿಬಂಧನೆಗಳನ್ನು ವಿಧಿಸಲು ಕೂಡ ಸರ್ಕಾರ ತೀರ್ಮಾನಿಸಿದೆ.
ವಿದ್ಯುತ್ ಉತ್ಪಾದನೆಗೆ ಮಾತ್ರವೇ ಕಲ್ಲಿದ್ದಲು ಬಳಸಬೇಕು, ಒಂದೇ ಕಂಪೆನಿ ಪಡೆಯಬಹುದಾದ ನಿಕ್ಷೇಪಗಳ ಗರಿಷ್ಠ ಸಂಖ್ಯೆಗೆ ಮಿತಿ ಹಾಕಬೇಕು ಎಂಬುದು ಸೇರಿದಂತೆ ಇನ್ನು ಕೆಲವು ನಿಬಂಧನೆಗಳನ್ನು ವಿಧಿಸಬೇಕು ಎಂಬುದು ಸರ್ಕಾರದ ಚಿಂತನೆಯಾಗಿದೆ.
ಮೊದಲ ಹಂತದಲ್ಲಿ ಹರಾಜಿಗೆ ಒಳಪಡುವ 74 ಗಣಿಗಳ ಪೈಕಿ 42 ನಿಕ್ಷೇಪಗಳಲ್ಲಿ ಈಗಾಗಲೇ ಗಣಿಗಾರಿಕೆ ನಡೆಯುತ್ತಿದೆ. ಈ 42 ಗಣಿಗಳಲ್ಲಿ ಮಾರ್ಚ್ 31ರವರೆಗೆ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ 42 ಗಣಿಗಳು ವಾರ್ಷಿಕ 9 ಕೋಟಿ ಟನ್ ಉತ್ಪಾದಿಸುತ್ತಿದ್ದರೆ ಹೊಸದಾಗಿ ಪಟ್ಟಿಯಲ್ಲಿರುವ 32 ಗಣಿಗಳು ವರ್ಷಕ್ಕೆ 12 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ.