ಬೆಂಗಳೂರು: ‘ಕನ್ನಡ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಲೇಖಕಿ ಮುದ್ದು ತೀರ್ಥಹಳ್ಳಿ ಅವರ ಕಾದಂಬರಿ ಆಧಾರಿತ ‘ಕಾಡಹಾದಿಯ ಹೂಗಳು’ ಚಲನಚಿತ್ರವನ್ನು ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಫೆ.3ರಂದು ಬಿಡುಗಡೆ ಮಾಡಲಾಗುವುದು’ ಎಂದು ಚಿತ್ರದ ನಿರ್ದೇಶಕ ಎಲ್.ಎನ್.ಮುಕುಂದರಾಜ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನದ ಮುಕ್ತಾಯದ ದಿನ ಚಿತ್ರದ ಮೊದಲ ಪ್ರದರ್ಶನಏರ್ಪಡಿಸಲಾಗಿದೆ’ ಎಂದರು.
‘ಕನ್ನಡ ಮಾಧ್ಯಮ ಶಾಲೆಗಳು ಪೋಷಕರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈ ಸಿನಿಮಾ ನೋಡಿದ ನಂತರ ಕನ್ನಡ ಮಾಧ್ಯಮ ಶಾಲೆಗಳ ಬಗೆಗಿನ ಪೋಷಕರ ಭಾವನೆ ಬದಲಾಗಲಿದೆ’ ಎಂದರು.
‘ಇಂದಿನ ಶೈಕ್ಷಣಿಕ ವ್ಯವಸ್ಥೆ ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸಿದೆ. ಇಂಗ್ಲಿಷ್ ಮಾಧ್ಯಮವನ್ನು ಬಲವಂತವಾಗಿ ಹೇರಿ ಮಕ್ಕಳನ್ನು ಕೃತಕ ಸ್ಪರ್ಧೆಗೆ ಒಡ್ಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣ ಮಾಡಲಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಹಣ ಗಳಿಸುವ ಉದ್ದೇಶ ಹಾಗೂ ಪ್ರಶಸ್ತಿ ಆಸೆಗಾಗಿ ಈ ಸಿನಿಮಾ ಮಾಡಿಲ್ಲ. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಸಂದೇಶ ಕೊಡಲು ಈ ಚಿತ್ರ ಮಾಡಲಾಗಿದೆ. ಹಲವು ಶಿಕ್ಷಕರು ಈ ಸಿನಿಮಾಗೆ ಆರ್ಥಿಕ ನೆರವು ನೀಡಿದ್ದಾರೆ. ನಾಗತಿಹಳ್ಳಿ ಕ್ರಿಯೇಷನ್ಸ್ ಹಾಗೂ ಟೀಚರ್ಸ್ ಸಿನಿಮಾ ವತಿಯಿಂದ ಈ ಚಿತ್ರ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.
‘ಕಲಾವಿದರಾದ ಬಿ.ಸುರೇಶ್, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ರಾಯಚೂರು, ಕೋಲಾರ, ಮಂಡ್ಯ, ತುಮಕೂರು ಭಾಗಗಳ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶಿಸಿದ ನಂತರ ಸರ್ಕಾರದ ಅನುಮತಿ ಪಡೆದು ಎಲ್ಲ ಶಾಲೆಗಳಲ್ಲಿಯೂ ಸಿನಿಮಾ ಪ್ರದರ್ಶಿಸಲಾಗುವುದು’ ಎಂದರು.
ಕಲಾವಿದ ಪ್ರಕಾಶ್ ಅರಸ್ ಮಾತನಾಡಿ, ‘ಭಾಷೆಗಿಂತ ವಿಷಯ ಮುಖ್ಯ ಎಂದು ಬಹುತೇಕರು ಭಾವಿಸಿದ್ದಾರೆ. ಎಲ್ಲ ಭಾಷೆಗಳನ್ನೂ ಕಲಿಯ ಬೇಕು. ಆದರೆ, ಮಾತೃ ಭಾಷೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಈ ಸಿನಿಮಾ ಜನರ ಕಣ್ಣು ತೆರೆಸುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.