ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಕನಸಿನಲ್ಲಿ ಸರ್ದಾರ್‌ ಸಿಂಗ್‌ ಬಳಗ

ಅಜ್ಲಾನ್‌ ಷಾ ಕಪ್‌ ಹಾಕಿ: ಇಂದು ಮಲೇಷ್ಯಾ ವಿರುದ್ಧ ‘ಮಾಡು ಇಲ್ಲವೇ ಮಡಿ’ ಹೋರಾಟ
Last Updated 14 ಏಪ್ರಿಲ್ 2016, 20:01 IST
ಅಕ್ಷರ ಗಾತ್ರ

ಇಪೊ, ಮಲೇಷ್ಯಾ (ಪಿಟಿಐ): ಹಿಂದಿನ ಪಂದ್ಯದಲ್ಲಿ ಎದುರಾದ ಸೋಲಿನಿಂದ ಮೈಕೊಡವಿ ನಿಂತಿರುವ ಭಾರತ ತಂಡ ಇಲ್ಲಿ ನಡೆಯುತ್ತಿರುವ ಸುಲ್ತಾನ್‌ ಅಜ್ಲಾನ್‌ ಷಾ ಕಪ್‌ ಹಾಕಿ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ.

ಇದಕ್ಕಾಗಿ ಸರ್ದಾರ್‌ ಸಿಂಗ್‌ ಬಳಗ ಶುಕ್ರವಾರ ನಡೆಯುವ ರೌಂಡ್‌ ರಾಬಿನ್‌ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ  ಆಡಿದ ಐದೂ ಪಂದ್ಯಗಳಲ್ಲಿ ಗೆದ್ದಿದ್ದು 15 ಪಾಯಿಂಟ್ಸ್‌ ಸಂಗ್ರಹಿಸಿ ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಇನ್ನೊಂದು ಸ್ಥಾನಕ್ಕಾಗಿ ನ್ಯೂಜಿಲೆಂಡ್‌ ಮತ್ತು ಭಾರತದ ನಡುವೆ  ಪೈಪೋಟಿ ಏರ್ಪಟ್ಟಿದೆ.

ಕಿವೀಸ್‌ ಬಳಗ ಆರು ಪಂದ್ಯಗಳಿಂದ 11 ಪಾಯಿಂಟ್ಸ್‌ ಹೊಂದಿದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಕಾಂಗರೂಗಳ ನಾಡಿನ ಬಳಗದ ನಂತರದ ಸ್ಥಾನ ಹೊಂದಿದೆ. ಐದು ಪಂದ್ಯಗಳನ್ನು ಆಡಿರುವ ಸರ್ದಾರ್ ಬಳಗದ ಖಾತೆಯಲ್ಲಿ  ಒಂಬತ್ತು ಪಾಯಿಂಟ್ಸ್‌ ಇದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.  ಭಾರತ ತಂಡ ಶುಕ್ರವಾರದ ಹೋರಾಟದಲ್ಲಿ ಜಯ ಪಡೆದರೆ ಸುಲಭವಾಗಿ ಫೈನಲ್‌ ತಲುಪಲಿದೆ.

ಮಲೇಷ್ಯಾ ತಂಡಕ್ಕೂ ಪ್ರಶಸ್ತಿ ಸುತ್ತು ತಲುಪುವ ಅವಕಾಶ ಇದೆ. ಇದಕ್ಕಾಗಿ ಆತಿಥೇಯರು ಭಾರತದ ವಿರುದ್ಧ 7–0 ಗೋಲುಗಳ ಅಂತರದಿಂದ ಗೆಲುವು ಪಡೆಯುವುದು ಅಗತ್ಯ.

ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತ ಆ ಬಳಿಕ ಜಪಾನ್‌ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗೆದ್ದು ಭರವಸೆ ಮೂಡಿಸಿತ್ತು. ಆದರೆ  ಹಿಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯದ ಅವಕಾಶ ಕೈಚೆಲ್ಲಿತ್ತು.

ಒಂದು ವೇಳೆ ಬುಧವಾರದ ಪಂದ್ಯದಲ್ಲಿ ಸರ್ದಾರ್‌ ಬಳಗ ನ್ಯೂಜಿಲೆಂಡ್‌ ವಿರುದ್ಧ ಜಯ ಪಡೆದಿದ್ದರೆ ನಿರಾತಂಕವಾಗಿ ಫೈನಲ್‌ಗೆ ಅರ್ಹತೆ ಗಳಿಸುತ್ತಿತ್ತು. ಆ ಪಂದ್ಯದಲ್ಲಿ ಸೋತಿರುವ ಕಾರಣ ಭಾರತದ ಪಾಲಿಗೆ ಮಲೇಷ್ಯಾ ವಿರುದ್ಧದ ಪಂದ್ಯ ‘ಮಾಡು ಇಲ್ಲವೆ ಮಡಿ’ ಹೋರಾಟ  ಎನಿಸಿದೆ.

ಹೋದ ವರ್ಷ ಬೆಲ್ಜಿಯಂನ ಆ್ಯಂಟ್‌ವರ್ಪ್‌ನಲ್ಲಿ ನಡೆದಿದ್ದ ವಿಶ್ವ  ಹಾಕಿ ಲೀಗ್‌ ಸೆಮಿಫೈನಲ್ಸ್‌ ಟೂರ್ನಿಯ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆಗ ಭಾರತ  3–2 ಗೋಲುಗಳಿಂದ ಗೆದ್ದು ಮಲೇಷ್ಯಾ ತಂಡದ ಒಲಿಂಪಿಕ್ಸ್‌ ಅರ್ಹತೆ ಕನಸನ್ನು ನುಚ್ಚುನೂರು ಮಾಡಿತ್ತು. ಇದು ಭಾರತದ ವಿಶ್ವಾಸವನ್ನು ಇಮ್ಮಡಿಸಿದೆ.

ಸರ್ದಾರ್ ಬಳಗ ಪ್ರತಿಭಾನ್ವಿತರ ಕಣಜ ಎನಿಸಿದೆ.  ಕರ್ನಾಟಕದ ಎಸ್‌.ವಿ. ಸುನಿಲ್‌, ಮನದೀಪ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಹರ್ಮನ್‌ ಪ್ರೀತ್‌ ಸಿಂಗ್‌ ಮತ್ತು ನಾಯಕ ಸರ್ದಾರ್‌ ತಂಡದ ಆಧಾರ ಸ್ತಂಭಗಳಾಗಿದ್ದಾರೆ.

ಪಾಕಿಸ್ತಾನದ ವಿರುದ್ಧ ಸುನಿಲ್‌ ಎರಡು ಗೋಲು ದಾಖಲಿಸಿ ಮಿಂಚಿದ್ದರು. ಉತ್ತಮ ಲಯದಲ್ಲಿರುವ ಕರ್ನಾಟಕದ ಆಟಗಾರ ತಮ್ಮ ವೇಗದ ಆಟದ ಮೂಲಕ ಮಲೇಷ್ಯಾ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ ರಕ್ಷಣಾ ವಿಭಾಗದಲ್ಲಿ ರೋಲಂಟ್‌ ಓಲ್ಟಮಸ್‌ ಮಾರ್ಗದರ್ಶನ ದಲ್ಲಿ ತರಬೇತುಗೊಂಡಿರುವ ತಂಡದಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ. ನ್ಯೂಜಿಲೆಂಡ್‌ ವಿರುದ್ಧ ತಂಡ ಆಡಿದ ರೀತಿ ಇದಕ್ಕೆ ಸಾಕ್ಷಿ.

ವಿಶ್ವಾಸದಲ್ಲಿ ಮಲೇಷ್ಯಾ: ತವರಿನ ಅಭಿಮಾನಿಗಳ ಬೆಂಬಲದೊಂದಿಗೆ  ಕಣಕ್ಕಿಳಿಯಲಿರುವ ಮಲೇಷ್ಯಾ ತಂಡ ಶುಕ್ರವಾರದ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಲು ಸಜ್ಜಾಗಿದೆ.

ಹೋದ ವರ್ಷ ಇದೇ ಅಂಗಳದಲ್ಲಿ ನಡೆದಿದ್ದ ಅಜ್ಲಾನ್‌ ಷಾ ಕಪ್‌ ಟೂರ್ನಿಯ ಪಂದ್ಯದಲ್ಲಿ ಮಲೇಷ್ಯಾ  3–2 ಗೋಲು ಗಳಿಂದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಭಾರತವನ್ನು ಪರಾಭವಗೊಳಿಸಿತ್ತು. ಇದು ಆಟಗಾರರ ಮನೋಬಲ ಹೆಚ್ಚಿಸಿದೆ.

ವಿಶ್ವ ಲೀಗ್‌ ಸೆಮಿಫೈನಲ್‌ನಲ್ಲಿ ಎದುರಾದ ಸೋಲು ಈ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಶುಕ್ರವಾರ ಭಾರತವನ್ನು ಮಣಿಸಿ ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಆತಿಥೇಯರು ಹವಣಿಸುತ್ತಿದ್ದಾರೆ.

ಪೆನಾಲ್ಟಿ ಕಾರ್ನರ್‌ ಪರಿಣತ ಹಾಗೂ ನಾಯಕ ರಜೀ ರಹೀಮ್‌ ಗಾಯಗೊಂಡಿದ್ದು ಈ ಪಂದ್ಯದಲ್ಲಿ ಆಡುವುದು ಅನುಮಾನ . ಒಂದು ವೇಳೆ ಅವರು ಕಣಕ್ಕಿಳಿಯದಿದ್ದರೆ ಆತಿಥೇಯ ರಿಗೆ ಭಾರಿ ಹಿನ್ನಡೆ ಉಂಟಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT