ನವದೆಹಲಿ (ಪಿಟಿಐ): ಬೆಂಗಳೂರು ಮತ್ತು ಚೆನ್ನೈನಲ್ಲಿರುವ ಇಸ್ರೇಲ್ ಮತ್ತು ಅಮೆರಿಕ ಕಾನ್ಸಲೇಟ್ ಕಚೇರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆಪಾದನೆ ಮೇಲೆ ಮಲೇಷ್ಯಾ ಪೊಲೀಸರು ಬಂಧಿಸಿರುವ ಶ್ರೀಲಂಕಾ ಮೂಲದ ಮೊಹಮ್ಮದ್ ಹುಸೈನಿಯನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ.
ಈ ಸಂಬಂಧ ಆರೋಪಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಂಟರ್ಪೋಲ್ಗೆ (ಅಂತರರಾಷ್ಟ್ರೀಯ ಪೊಲೀಸ್ ಸಂಘಟನೆ) ಮನವಿ ಮಾಡಿಕೊಂಡಿದೆ.
ಹುಸೈನಿ ಬಂಧನಕ್ಕೆ ತಮಿಳುನಾಡು ಪೊಲೀಸರು ಪಡೆದುಕೊಂಡಿರುವ ಜಾಮೀನು ರಹಿತ ವಾರಂಟ್ನ ಪ್ರತಿಯನ್ನು ರಾಜತಾಂತ್ರಿಕ ಕಚೇರಿ ಮೂಲಕ ಫ್ರಾನ್ಸ್ನಲ್ಲಿರುವ ಇಂಟರ್ಪೋಲ್ ಮುಖ್ಯ ಕಚೇರಿಗೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಮಧ್ಯೆ, ಹುಸೈನಿ ವಿಚಾರಣಾ ವರದಿಯನ್ನು ಹಂಚಿಕೊಳ್ಳುವಂತೆ ಮಲೇಷ್ಯಾಕ್ಕೆ ಭಾರತ ಅಧಿಕೃತವಾಗಿ ಮನವಿ ಪತ್ರ ಕಳುಹಿಸಿದೆ.
ಕಾನ್ಸಲೇಟ್ ಕಚೇರಿಗಳ ಮೇಲಿನ ಉದ್ದೇಶಿತ ದಾಳಿಗೆ ಇಬ್ಬರು ವ್ಯಕ್ತಿಗಳಿಗೆ ಸಹಕರಿಸುವಂತೆ ತನಗೆ ಸೂಚನೆ ಬಂದಿತ್ತು ಎಂಬ ಮಾಹಿತಿಯನ್ನು ಹುಸೈನಿ ಮಲೇಷ್ಯಾ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.
ಮಲೇಷ್ಯಾ ಪೊಲೀಸರು ಎರಡು ವಾರಗಳ ಹಿಂದೆ ಕ್ವಾಲಾಲಂಪುರ ಬಳಿಯ ಕೆಪಾಂಗ್ನಲ್ಲಿ ಮೊಹಮ್ಮದ್ ಹುಸೈನಿಯನ್ನು ಬಂಧಿಸಿದ್ದರು. ಈತ ಬೆಂಗಳೂರಿನಲ್ಲಿರುವ ಇಸ್ರೇಲ್, ಚೆನ್ನೈನಲ್ಲಿರುವ ಅಮೆರಿಕ ಕಾನ್ಸಲೇಟ್ ಕಚೇರಿಗಳ ಮೇಲೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಈತನನ್ನು ಭಾರತದ ಪೋಲಿಸರು ಕೂಡ ಹುಡುಕುತ್ತಿದ್ದರು.