ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದು, ಅದಕ್ಕೆ ಚುನಾವಣೆ ಮೂಲಕವೇ ಉತ್ತರ ನೀಡಲಾಗುವುದು ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಮೆರವಣಿಗೆ ನಡೆಸಿ ಮತಯಾಚಿಸಿದ ಅವರು, ಚುನಾವಣಾ ಕಣದಲ್ಲಿಳಿದು ಸವಾಲಿಗೆ ಸವಾಲು ಎಂಬಂತೆ ಸ್ಪರ್ಧಿಸುವ ಬದಲು ಬಚ್ಚೇಗೌಡರು ಜಾತಿ ರಾಜಕಾರಣ ಮಾಡುವುದರಲ್ಲಿ ನಿರತರಾಗಿದ್ದಾರೆ. ಇದು ಕೀಳುಮಟ್ಟದ ರಾಜಕಾರಣ ಎಂದು ದೂರಿದರು.
ಬಚ್ಚೇಗೌಡ ಮತ್ತು ಅವರ ಬೆಂಬಲಿಗರು ಬೇರೆ ಅಭ್ಯರ್ಥಿಗಳ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದು, ಪ್ರಜ್ಞಾವಂತ ಮತದಾರರ ದಾರಿ ತಪ್ಪಿಸುತ್ತಿದ್ದಾರೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಅವರು ಅವಕಾಶ ಮಾಡಿಕೊಡುತ್ತಿಲ್ಲ ಎಂದರು.
ನನ್ನ ವಿರುದ್ಧ ಟೀಕೆ ಮಾಡಲು ಯಾವುದೇ ವಿಷಯವಿರದ ಕಾರಣ ನಾನು ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಜೊತೆ ಸೇರಿಕೊಂಡು ಒಳಒಪ್ಪಂದ ಮಾಡಿಕೊಂಡಿರುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ.
ಮೊಯಿಲಿ ಜತೆ ನೂರಾರು ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿರುವುದಾಗಿ ಮತ್ತು ದ್ವೇಷದ ರಾಜಕಾರಣ ಮಾಡುವುದಾಗಿ ಬಚ್ಚೇಗೌಡ ಆರೋಪಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಬಚ್ಚೇಗೌಡ ಮತ್ತು ಅವರ ಬೆಂಬಲಿಗರು ಇಲ್ಲಸಲ್ಲದ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದು, ಇದು ಖಂಡನೀಯ ಎಂದರು.
ಕ್ಷೇತ್ರದಲ್ಲಿ ನೀರು ಮತ್ತು ನೀರಾವರಿ ಸಮಸ್ಯೆ ಗಂಭೀರವಾಗಿರುವುದು ಗಮನಕ್ಕೆ ಬಂದಿದ್ದು, ಸೂಕ್ತ ಪರಿಹಾರ ಕಂಡು ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾದಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇನೆ. ಇಲ್ಲಿನ ಜನರ ನೀರಿನ ಬವಣೆ ತೀರಿಸುತ್ತೇನೆ ಎಂದು ಭರವಸೆ ನೀಡಿದರು.
ನಗರದ ಬಿ.ಬಿ.ರಸ್ತೆ ಒಕ್ಕಲಿಗರ ಭವನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆಯು ಎಂ.ಜಿ.ರಸ್ತೆ, ತಿಪ್ಪೇನಹಳ್ಳಿಯವರೆಗೆ ನಡೆಯಿತು. ತಿಪ್ಪೇನಹಳ್ಳಿ, ಪೋಶೆಟ್ಟಿಹಳ್ಳಿ, ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿಯಲ್ಲೂ ಕುಮಾರಸ್ವಾಮಿ ಮತಯಾಚಿಸಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಂಚೇನಹಳ್ಳಿಯಲ್ಲಿ ಎಚ್ಡಿಕೆ ಮತಯಾಚನೆ
ಗೌರಿಬಿದನೂರು: ನನ್ನ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಣ್ಣಿನ ಮಗನಾಗಿ ಬಾಳಬೇಕೆಂದು ಹೇಳಿಕೊಟ್ಟಿದ್ದಾರೆಯೇ ವಿನಃ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ರೀತಿ ಜಾತಿ ರಾಜಕಾರಣ ಮಾಡಲು ಹೇಳಿಕೊಟ್ಟಿಲ್ಲ. ಜಾತಿ ರಾಜಕಾರಣ ಮಾಡುವವರು ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಸುಳ್ಳು ಹೇಳುವ ಮೂಲಕ ಜನರನ್ನು ಹೇಗೆಲ್ಲಾ ಮರುಳು ಮಾಡಬೇಕೆಂಬುದನ್ನು ಕರಗತವಾಗಿಸಿಕೊಂಡಿದ್ದಾರೆ ಎಂದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸಲೆಂದೇ ಅನ್ಯಪಕ್ಷದವರು ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಹಣ, ಹೆಂಡ, ಆಸೆ–ಆಮಿಷ ಒಡ್ಡಲು ಪ್ರಯತ್ನಿಸುತ್ತಿದ್ದಾರೆ. ಇದ್ಯಾವುದಕ್ಕೂ ಮರುಳಗಾದೇ ಜನರು ಜೆಡಿಎಸ್ ಪರ ಮತ ಚಲಾಯಿಸಬೇಕು ಎಂದರು.
ಮುಖಂಡರಾದ ಕೆ.ಪ್ರಭಾ ನಾರಾಯಣಗೌಡ, ಎಚ್.ಎಂ.ಶಿವಶಂಕರ್, ಪಿ.ಎನ್.ಜಗನ್ನಾಥ್, ಎಚ್.ಸಿ ನಾರಾಯಣಗೌಡ, ಎಸ್.ಸಿ.ನಾರಾಯಣ ರೆಡ್ಡಿ, ಜಿ.ವಿರಾಜಶೇಖರ್, ಪಿ.ಎನ್.ಮುನಿಕೃಷ್ಣೇಗೌಡ, ಸಾದೇನಹಳ್ಳಿ ಶ್ರೀಧರ್, ಬಿ.ಕೆ. ಮಧು ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.