ಈ ಬಾರಿಯ ಬಜೆಟ್ ಗಂಗೆಯ ಒಡಲಲ್ಲಿ ಬೆಂಕಿಯನ್ನೇನೂ ಹೊತ್ತಿಸಲಿಲ್ಲ. ಆಯಾ ಕಾಲದ ಹಣಕಾಸು ಸಚಿವರನ್ನು ಓಲೈಸುವ ಕೈಗಾರಿಕಾ ರಂಗದ ಮುಂದಾಳುಗಳು ರಕ್ಷ ಣಾತ್ಮಕವಾಗಿ, ಬಜೆಟ್ ಕುರಿತು ಹೊಗಳಿಕೆಯ ಮಾತು ಆಡಿದರು.
ಆದರೆ ಈ ಬಜೆಟ್ ಯುಪಿಎ ಸರ್ಕಾರ ಮಂಡಿಸಿದ ಬಜೆಟ್ಗಿಂತ ಭಿನ್ನವಾಗಿಲ್ಲ, ಉತ್ಸಾಹ ಮೂಡಿಸುವಂತೆಯೂ ಇಲ್ಲ ಎಂದು ಅರ್ಥಶಾಸ್ತ್ರಜ್ಞರು ಹೇಳಿದರು. ‘ಇದು ಪಿ. ಚಿದಂಬರಂ ಮಂಡಿಸಿದ ಬಜೆಟ್ಗೆ ಕೇಸರಿ ಬಣ್ಣ ಬಳಿದು ಪುನಃ ಮಂಡಿಸಿದಂತಿದೆ’ ಎಂದು ಅರ್ಥಶಾಸ್ತ್ರಜ್ಞರೊಬ್ಬರು ಹೇಳಿದರು. ಜೇಟ್ಲಿ ಅವರು ಬಜೆಟ್ ಮಂಡಿಸಿದ ನಂತರ ಅಸ್ಪಷ್ಟವಾದ ತಲ್ಲಣ, ಅತೃಪ್ತಿ ಮತ್ತು ಅಶುಭದ ಮುನ್ಸೂಚನೆಯೊಂದು ದೇಶದಲ್ಲಿ ವ್ಯಾಪಿಸಿ ದಂತಿದೆ. ತಮ್ಮ ಪಕ್ಷದ ನಿರುತ್ಸಾಹಿ ರಾಜಕಾರ ಣಿಗಳು ಮತ್ತು ಬದಲಾವಣೆಗೆ ಒಪ್ಪದ ಅಧಿಕಾರಶಾಹಿಯ ಒತ್ತಡಕ್ಕೆ ನರೇಂದ್ರ ಮೋದಿ ಮಣಿದರೇ? ಶಕ್ತಿಶಾಲಿ ಭಾರತದ ಕನಸು ನುಚ್ಚಾಯಿತೇ?
ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ದೊರೆತಿರುವುದು ಮೋದಿ ಅವರಿಗೆ. ಜನ ಎಲ್ಲ ರಾಜಕೀಯ ಪಕ್ಷಗಳ ಬಗ್ಗೆಯೂ ಸಿನಿಕ ಭಾವ ಬೆಳೆಸಿಕೊಂಡಿರುವ ಕಾರಣ, ಜನಾದೇಶ ದೊರೆತಿದ್ದು ಬಿಜೆಪಿಗಂತೂ ಅಲ್ಲ. ಜನರಲ್ಲಿ ನಿರಾಸೆ ಮನೆ ಮಾಡಿತ್ತು. ತಮ್ಮನ್ನು ಮುನ್ನಡೆಸಬಲ್ಲ ನಾಯಕನಿಗಾಗಿ ಜನ ಎದುರು ನೋಡುತ್ತಿದ್ದರು. ನಿರ್ಣಯಗಳನ್ನು ಧೈರ್ಯವಾಗಿ ಕೈಗೊಳ್ಳಬಲ್ಲ ನಾಯಕ ಎಂಬ ಹಿರಿಮೆ ಮೋದಿ ಅವರ ಕೈಹಿಡಿಯಿತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿ ಅವರು, ಹೊಸಹಾದಿಯ ದಿಟ್ಟ ಸುಧಾರಣಾ ಕ್ರಮಗಳ ಭರವಸೆ ನೀಡಿದ್ದರು. ಹಳೆಯ ಪದ್ಧತಿಯನ್ನು ಬದಲಾಯಿಸುವ ಮಾತಾಗಿತ್ತು ಅದು. ಬಡತನ ನಿರ್ಮೂಲನೆಯ ಮಾತನ್ನು ಮಾತ್ರ ಆಡುವ ಜನಪ್ರಿಯ ಘೋಷಣೆಗಳು ಹಾಗೂ ಉದ್ಯಮಿ–ಅಧಿಕಾರಿ ಸಂಬಂಧದ ವ್ಯವಸ್ಥೆಯನ್ನು ತೊಡೆಯುವ ಮಾತು ಅದಾಗಿತ್ತು. ಮೋದಿ ಅವರ ಮಾತು ಎಲ್ಲರ ಅಭಿವೃದ್ಧಿಯ ಕುರಿತಾಗಿತ್ತು.
ಮೋದಿ ಅವರು ಕಹಿ ಮಾತ್ರೆಯ ಚಿಕಿತ್ಸೆಯನ್ನು ತಮ್ಮದೇ ಪಕ್ಷದ ಮುಖಂಡರಿಗೆ ಮೊದಲು ನೀಡಬೇಕು. ಅರವಿಂದ ಕೇಜ್ರಿವಾಲ್
ಹೇಳಿದಂತೆ ಬಿಜೆಪಿ ಮುಖಂಡರೂ ಇತರ ಪಕ್ಷಗಳ ಮುಖಂಡರಿಗಿಂತ ಯಾವ ರೀತಿಯಲ್ಲೂ ಭಿನ್ನರಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿನ ನೀತಿಗಳು ಮತ್ತು ಅಲ್ಲಿನ ಮುಖಂಡರು ಕಾಂಗ್ರೆಸ್ಸಿಗರಷ್ಟೇ ಭ್ರಷ್ಟ. ಆದರೆ ಮೋದಿ ವಿಭಿನ್ನರಾಗಿ ಕಂಡರು. ಯಾವ ಸಂದರ್ಭದಲ್ಲೂ ಭ್ರಷ್ಟನಾಗದ ನಾಯಕನಂತೆ ಮೋದಿ ಕಂಡರು. ಮೋದಿ ತಮ್ಮ ರಾಜ್ಯದಲ್ಲಿ ಶಕ್ತಿವಂತನಾಗಿ ಮೆರೆದವರು. ಅಭಿವೃದ್ಧಿಯ ವಿಚಾರದಲ್ಲಿ ಗುಜರಾತ್ ಮಾದರಿಯಾಗಿತ್ತು. ಮೋದಿ ಕುರಿತ ವಿವಾದಗಳು ಏನೇ ಇರಬಹುದು, ದೇಶದ ನ್ಯಾಯಾಂಗ ಅವರನ್ನು ನಿರ್ದೋಷಿ ಎಂದಿದೆ, ಬಹುಸಂಖ್ಯೆಯ ಜನ ಕೂಡ ಅದೇ ಮಾತು ಹೇಳಿದ್ದಾರೆ. ಮೋದಿ ಅವರ ‘ಚರಿಷ್ಮಾ’ ವಿಶ್ವದ ಇತರೆಡೆಯಲ್ಲೂ ಇಮ್ಮಡಿಸಿದೆ.
ಮೋದಿ ಅವರ ಗೆಲುವಿನ ಕುರಿತು ಜನರ ಸಂಭ್ರಮ ಇನ್ನೂ ಮುಗಿದಿಲ್ಲ. ಈ ಸಂದರ್ಭದಲ್ಲಿ ಬಜೆಟ್ ಮೇಲೆ ತಮ್ಮ ಮುದ್ರೆ ಒತ್ತಿ, ತಮ್ಮ ಯೋಜನೆಗಳ ಸಾಕಾರಕ್ಕೆ ಅಧಿಕಾರಿಗಳು ಮತ್ತು ಮಂತ್ರಿಗಳನ್ನು ಮೋದಿ ಒಗ್ಗೂಡಿಸಬೇಕಿತ್ತು. ಬಜೆಟ್ಗೆ ರೂಪುರೇಷೆ ನೀಡುವ ಸಂದರ್ಭದಲ್ಲಿ ಮೋದಿ ಅವರು ತಮ್ಮ ಸ್ಥೈರ್ಯವನ್ನು ನಂಬಿ ಮುನ್ನಡೆಯಬೇಕಿತ್ತು.
ಹಳೆಯ ಚಿಂತನಾ ಶೈಲಿಯನ್ನೇ ನಂಬಿಕೊಂಡಿರುವ ಮೋದಿಯವರ ಕೆಲವು ಸಹೋದ್ಯೋಗಿಗಳು ಸಂಪ್ರದಾಯವಾದಿ, ಧೈರ್ಯ ಶಾಲಿಗಳಲ್ಲದ ಅಧಿಕಾರಿಗಳ ಬೆಂಬಲಕ್ಕಿದ್ದಾರೆ. ಅವರಿಗೆ ಬಜೆಟ್ ಮೇಲೆ ಅಧಿಕಾರ ಚಲಾಯಿಸುವ ಅವಕಾಶ ನೀಡಿದ್ದೇಕೆ?
ಚುನಾವಣೆ ಸಂದರ್ಭದಲ್ಲಿ ಪಶ್ಚಿಮದ ಹಲವು ವಿದ್ವಾಂಸರು ಮೋದಿ ಅವರನ್ನು ರೊನಾಲ್ಡ್ ರೇಗನ್ ಮತ್ತು ಮಾರ್ಗರೆಟ್ ಥ್ಯಾಚರ್ ಅವರಿಗೆ ಹೋಲಿಸಿದರು. ಇವರಿಬ್ಬರೂ ಅರ್ಥಶಾಸ್ತ್ರಜ್ಞ ರಾಗಿರಲಿಲ್ಲ. ರೇಗನ್ ಅವರು ಹಾಲಿವುಡ್ ನಟರಾಗಿದ್ದರು. ಥ್ಯಾಚರ್ ಅವರು ರಸಾಯನ ವಿಜ್ಞಾನಿ ಮತ್ತು ವಕೀಲರಾಗಿದ್ದರು. ಅವರು ತಮ್ಮ ಹೃದಯದ ಮಾತಿಗೆ ಕಿವಿಗೊಟ್ಟರು. ದೇಶದ ಪಥ ಬದಲಾಯಿಸಿದರು. ದಿಟ್ಟ ಸುಧಾರಣಾ ಕ್ರಮಗಳ ಮೂಲಕ ಅಧಿಕಾರಶಾಹಿಯ ಹಿಡಿತದಿಂದ ದೇಶವನ್ನು ಪಾರು ಮಾಡಿದರು. ಅವರು ಸರ್ಕಾ ರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅರ್ಥವ್ಯವಸ್ಥೆ ಸ್ಥಿರವಾಗಿರಲಿಲ್ಲ. ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಂತ ರೇಗನ್, ಹೊಸ ಸ್ವರೂಪದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗೆ ನಾಂದಿ ಹಾಡಿದರು.
ರೇಗನ್ ಅವರು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ತೆರಿಗೆ ಕಡಿತದ ಪರವಾಗಿದ್ದರು, ಹಣದುಬ್ಬರ ಏರಿಕೆ ಕಡಿವಾಣಕ್ಕೆ ಹಣದ ಪೂರೈಕೆ ಮೇಲೆ ನಿಯಂತ್ರಣ, ಆರ್ಥಿಕ ವ್ಯವಸ್ಥೆಯ ಮೇಲಿನ ನಿಯಂತ್ರಣ ತೆಗೆಯುವುದು ಮತ್ತು ಸರ್ಕಾರದ ವೆಚ್ಚಗಳನ್ನು ಕಡಿತಗೊಳಿಸುವ ಪರವಾಗಿದ್ದರು. ಇದು ಮುಂದೆ ‘ರೇಗನಾಮಿಕ್ಸ್’ (ರೇಗನ್ ಅರ್ಥಶಾಸ್ತ್ರ) ಎಂದೇ ಖ್ಯಾತವಾಯಿತು. ಈ ಬಾರಿಯ ಬಜೆಟ್ ಮೂಲಕ ಮೋದಿ ಅವರು ಸಮಗ್ರ ಬದಲಾವಣೆ ತರುತ್ತಾರೆ ಎಂದು ಬಹುತೇಕರು ಭಾವಿಸಿದ್ದರು.
ಬಜೆಟ್ನ ತಾಂತ್ರಿಕ ಸೂಕ್ಷ್ಮ ಅಂಶಗಳತ್ತ ನೋಟ ಹರಿಸದೆಯೂ ಮೋದಿ ಅವರು ಬಜೆಟ್ಗೆ ಒಂದು ದಿಕ್ಕು–ದೆಸೆ ನೀಡುವಂಥ ನಿರ್ದೇಶನಗಳನ್ನು ನೀಡಬಹುದಿತ್ತು. ಇದು ಆರಂಭ ಮಾತ್ರ ಎಂದು ಜೇಟ್ಲಿ ಅವರು ಮತ್ತೆ ಮತ್ತೆ ಹೇಳುತ್ತಿದ್ದಾರಾದರೂ, ಹಳೆಯ ಪದ್ಧತಿಯಿಂದ ಹೊರಬರುವ ಬಜೆಟ್ ಇದು ಎನ್ನಲು ಯಾವ ಆಧಾರವೂ ಸಿಗುತ್ತಿಲ್ಲ. ಮೋದಿ ಅವರು ಇಲ್ಲಿ ಹೇಳಿರುವ ನಾಲ್ಕು ಅಂಶಗಳ ಕುರಿತು ನಿರ್ದೇಶನ ನೀಡಬೇಕಿತ್ತು.
ಮೊದಲನೆಯದು: ಮೋದಿ ಮಂತ್ರವಾದ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬುದು ಉತ್ತಮ ಘೋಷಣೆ ಮಾತ್ರವಲ್ಲ, ಅದರಲ್ಲಿ ಒಳ್ಳೆಯ ಅರ್ಥಶಾಸ್ತ್ರೀಯ ಅಂಶವೂ ಇದೆ. ಈ ಘೋಷಣೆಯಲ್ಲಿ, ಸರ್ಕಾರ ಸದಾ ಜನರ ಬೆನ್ನಿಗಿರಬೇಕು ಎಂಬ ಮಾತು ಮಾತ್ರವಲ್ಲ, ದೇಶದ ಅಧಿಕಾರಿ ವರ್ಗದ ಗಾತ್ರವನ್ನು ಕಡಿತಗೊಳಿಸುವ ಮಾತೂ ಇದೆ. ಒಟ್ಟು ಆದಾಯದ ಅಂದಾಜು ಶೇಕಡ 25ರಷ್ಟು ಭಾಗ ಸರ್ಕಾರಿ ನೌಕರರ ವೇತನ ಮತ್ತು ಅವರಿಗೆ ಸಂಬಂಧಿಸಿದ ಇತರ ಖರ್ಚುಗಳಿಗೆ ಬಳಕೆಯಾಗುತ್ತಿದೆ. ಸರ್ಕಾರದ ಗಾತ್ರವನ್ನು ಶೇಕಡ 10ರಷ್ಟು ಕಡಿತ ಮಾಡಲು ಮೋದಿ ಅವರು ಜೇಟ್ಲಿ ಅವರಿಗೆ ಸೂಚಿಸಬೇಕಿತ್ತು. ಇದರಿಂದ ಅಂದಾಜು 22 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗುತ್ತಿತ್ತು.
ಎರಡನೆಯದು: ಸಬ್ಸಿಡಿ ಹೊರೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯನ್ನು ಇಡಬಹುದಿತ್ತು. ಸಬ್ಸಿಡಿಗಾಗಿ ನೀಡಲಾಗುತ್ತಿರುವ ₨ 3.65 ಲಕ್ಷ ಕೋಟಿಯಲ್ಲಿ ಶೇಕಡ 20ರಷ್ಟನ್ನು ಕಡಿತಗೊಳಿಸುವ ಗುರಿಯನ್ನು ಮೋದಿ ನೀಡಬಹುದಿತ್ತು. ಇದರಿಂದ ಅಂದಾಜು ₨ 70 ಸಾವಿರ ಕೋಟಿ ಉಳಿತಾಯ ಆಗುತ್ತಿತ್ತು. ಸಬ್ಸಿಡಿ ಹಣದ ಸೋರಿಕೆ ತಡೆಗಟ್ಟಿದರೆ, ಆ ಹಣದಿಂದ ಲಾಭ ಪಡೆಯುವ ವರ್ಗದ ಜನರ ಮೇಲೆ ಯಾವುದೇ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಬಹುದು. ಸಬ್ಸಿಡಿಗಾಗಿ ಮೀಸಲಿಡುವ ಹಣದಲ್ಲಿ ಶೇಕಡ 50ರಷ್ಟಕ್ಕಿಂತ ಹೆಚ್ಚು ಸೋರಿಹೋಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಹೇಳಿರುವಂತೆ, ₨ 1 ಸಬ್ಸಿಡಿ ಹಣದಲ್ಲಿ ಜನರನ್ನು ತಲುಪುವ ಮೊತ್ತ 15 ಪೈಸೆ ಮಾತ್ರ. ಈ ಅಂಕಿ–ಅಂಶವನ್ನು ಸ್ವತಂತ್ರವಾಗಿ ನಡೆಸಿದ ಅನೇಕ ಲೆಕ್ಕಪರಿಶೋಧನೆಗಳು ದೃಢಪಡಿಸಿವೆ. ಒಳ್ಳೆಯ ಆಡಳಿತ ನೀಡುವುದಾಗಿ ಮೋದಿ ಅವರೇ ಭರವಸೆ ನೀಡಿರುವ ಕಾರಣ, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಸೋರಿಕೆ ತಡೆಯುವುದು ಜೇಟ್ಲಿ ಅವರ ಜವಾಬ್ದಾರಿಯೂ ಆಗಿದೆ.
ಮೂರನೆಯದು: ಸಾರ್ವಜನಿಕ ರಂಗದ ಉದ್ದಿಮೆಗಳಿಂದ ಇನ್ನೂ ಹೆಚ್ಚಿನ ಪ್ರಮಾಣದ ಬಂಡವಾಳವನ್ನು ಹಿಂತೆಗೆಯಲು ಮೋದಿ ಮನಸ್ಸು ಮಾಡಬೇಕಿತ್ತು. ‘ಸಾರ್ವಜನಿಕರು ಸರ್ಕಾರದ ಮೂಲಕ ಸಾರ್ವಜನಿಕ ರಂಗದ ಉದ್ದಿಮೆಗಳ ಮಾಲೀಕರಾಗಿದ್ದಾರೆ. ಈಗ ಬಂಡವಾಳ ಹಿಂತೆಗೆತದ ಮೂಲಕ, ಆ ಉದ್ದಿಮೆಗಳಲ್ಲಿ ತಾವು ನೇರ ಪಾಲುದಾರರಾಗಲು ಸಾರ್ವಜನಿಕರಿಗೆ ಅವಕಾಶ ದೊರೆತಿದೆ’ ಎಂದು ಜೇಟ್ಲಿ ಅವರು ಸರಿಯಾಗಿಯೇ ಹೇಳಿದ್ದಾರೆ.
ಕೊನೆಯದು: ತೆರಿಗೆ ವ್ಯವಸ್ಥೆ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (ಎಫ್ಡಿಐ) ದೊಡ್ಡ ಪ್ರಮಾಣದ ಬದಲಾವಣೆ ಬೇಕಿತ್ತು. ಉದಾಹರಣೆಗೆ ತೆರಿಗೆ ತಪ್ಪಿಸುವುದನ್ನು ನಿಯಂತ್ರ ಣದಲ್ಲಿಡುವ ಜಿಎಎಆರ್ ಮತ್ತು ಪೂರ್ವಾನ್ವಯ ತೆರಿಗೆ ಪದ್ಧತಿ ಕೈಬಿಡಬೇಕಿತ್ತು. ತಮ್ಮ ವಿರುದ್ಧ ಬಂದ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಂತೆ ‘ಕೇಂದ್ರ ನೇರ ತೆರಿಗೆ ಮಂಡಳಿ’ (ಸಿಬಿಡಿಟಿ) ತೆರಿಗೆ ಅಧಿಕಾರಿಗಳಿಗೆ ಸೂಚಿಸಬಹುದಾದರೆ, ಅದೇ ಸಲಹೆಯನ್ನು ಸರ್ಕಾರ ಏಕೆ ಆಲಿಸಬಾರದು?
ವೊಡಾಫೋನ್ ಕಂಪೆನಿ ವಿಚಾರದಲ್ಲಿ ಸರ್ಕಾರದ ನಿಯಮವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತು. ಸುಪ್ರೀಂ ಕೋರ್ಟ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಆಗದ ಕಾರಣ, ಸರ್ಕಾರ ನಿಯಮವನ್ನೇ ಬದಲಾಯಿಸಿತು. ದೇಶದಲ್ಲಿ ಬಂಡವಾಳ ಹೂಡಲು ಸಿದ್ಧವಿರುವ ವ್ಯಕ್ತಿಗೆ ಇದಕ್ಕಿಂತ ಕೆಟ್ಟ ಸುದ್ದಿ ಇನ್ನೇನಿದೆ?
ತೆರಿಗೆ ಕಡಿತ ಮತ್ತು ತೆರಿಗೆ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದಂಥ ಕೆಲವು ದಿಟ್ಟ ಕ್ರಮಗಳನ್ನು ಘೋಷಿಸಬೇಕಿತ್ತು. ಕಳೆದ 30 ವರ್ಷಗಳಲ್ಲಿ ರಚನೆಯಾದ ಪ್ರತಿಯೊಂದು ಸಮಿತಿಯೂ ಈ ಮಾತು ಹೇಳಿದೆ. ಇದರಿಂದ ವರಮಾನ ವೃದ್ಧಿಯೂ ಆಗುತ್ತಿತ್ತು.
ದೇಶ ಆಮದು ಮಾಡಿಕೊಳ್ಳುತ್ತಿರುವ ಪ್ರತಿಯೊಂದು ರಕ್ಷಣಾ ಸಾಮಗ್ರಿಯನ್ನು ಖಾಸಗಿ ಕಂಪೆನಿಗಳು ತಯಾರಿಸುತ್ತಿವೆ. ಬೋಯಿಂಗ್, ಬೊಫೋರ್ಸ್, ಡಸಾಲ್ಟ್, ಏರ್ಬಸ್, ಲಾಕ್ಹೀಡ್ ಮಾರ್ಟಿನ್ ಇವೆಲ್ಲ ಖಾಸಗಿ ಕಂಪೆನಿಗಳು. ಹಾಗಾಗಿ, ದೇಶದಲ್ಲಿ ವಿದೇಶಿ ರಕ್ಷಣಾ ಸಾಮಗ್ರಿ ಉತ್ಪಾದನಾ ಕಂಪೆನಿ ಆರಂಭಿಸಲು ಅವಕಾಶ ನೀಡುವುದು, ಅವುಗಳಿಗೆ ಶೇಕಡ 100ರಷ್ಟು ಪಾಲುದಾರಿಕೆ ಹೊಂದಲು ಅವಕಾಶ ನೀಡುವುದು ದೇಶದ ಭದ್ರತಾ ವ್ಯವಸ್ಥೆಗೆ ಒಳ್ಳೆಯದು.
ಬಹು ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್ಡಿಐಗೆ ಅವಕಾಶ ನೀಡುವ ವಿಚಾರದಲ್ಲೂ ಇದೇ ಆಗಿದೆ. ಆರ್ಥಿಕ ಚಟುವಟಿಕೆಗೆ ಇಂಬು ನೀಡುವಂತಿದ್ದ ಕ್ರಮವೊಂದನ್ನು ಸರ್ಕಾರ ಕೈಬಿಟ್ಟಂತೆ ಕಾಣುತ್ತಿದೆ. ಶೇ 49ರಷ್ಟು ಹೂಡಿಕೆಗೆ ಅವಕಾಶ ನೀಡುವುದು ಬಂಡವಾಳ ಹೂಡುವ
ವರನ್ನು ಆಕರ್ಷಿಸುವುದಿಲ್ಲ.
ಭಾರತದಲ್ಲಿ ಬಜೆಟ್ ಮಂಡನೆ ಎಂಬುದು ದೊಡ್ಡ ವಿದ್ಯಮಾನ. ಸ್ಪಷ್ಟ ಸಂದೇಶವೊಂದನ್ನು ರವಾನಿಸಲು ಮೋದಿ ಅವರಿಗೆ ಇದು ಸರಿಯಾದ ಅವಕಾಶ ಆಗಿತ್ತು. ಸುಧಾರಣೆ ಎಂಬುದು ನಿರಂತರ ಪ್ರಕ್ರಿಯೆ. ಜನಾಭಿಪ್ರಾಯ ತಮ್ಮ ಪರ ವಾಗಿರುವ ಸಂದರ್ಭವನ್ನು ಬಳಸಿಕೊಂಡು ಮೋದಿ ಅವರು ಭರವಸೆಗಳ ಸಾಕಾರಕ್ಕೆ ಹೆಜ್ಜೆ ಇಡಬೇಕು. ಜನ ಮೋದಿ ಅವರನ್ನು ಬದಲಾವಣೆಯ ಹರಿಕಾರನನ್ನಾಗಿ ಕಂಡಿದ್ದಾರೆ, ಬಿಜೆಪಿಯನ್ನಲ್ಲ. ಇದನ್ನು ಮೋದಿ ಅವರೂ ಮರೆಯಬಾರದು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.