ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದಲ್ಲಿ ವಿಶ್ವವಿದ್ಯಾಲಯ: ಕುಲಪತಿ

Last Updated 17 ಮಾರ್ಚ್ 2014, 9:41 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯಗಳು ಅಗತ್ಯ ಸಂಪನ್ಮೂಲ, ಹಣದ ಕೊರತೆಯಿಂದ ಬಡತನ ಎದುರಿಸುತ್ತಿವೆ ಎಂದು  ಕುಲಪತಿ ಡಾ.ಎ.ಎಚ್‌.­ರಾಜಾ­ಸಾಬ್‌ ಭಾನುವಾರ ಇಲ್ಲಿ ಹೇಳಿದರು.

ತುಮಕೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘದ ವತಿಯಿಂದ ‘ಉನ್ನತ ಶಿಕ್ಷಣದಲ್ಲಿ ಗುಣಾತ್ಮಕ ಆಯಾಮಗಳು’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಹಿಂದೆ ವೈದ್ಯಕೀಯ, ಎಂಜಿನಿಯರಿಂಗ್‌, ಕಾನೂನು ಮೊದ­ಲಾದ ವೃತ್ತಿಪರ ಕೋರ್ಸ್‌ಗಳು ಒಂದೇ ವಿಶ್ವವಿದ್ಯಾಲಯದಡಿ ಇರುತ್ತಿದ್ದವು. ಇದರಿಂದ ಹಣದ ಕೊರತೆ ಅಷ್ಟಾಗಿ ಇರಲಿಲ್ಲ. ಈಗ ಬಿಇಡಿ ಹೊರತುಪಡಿಸಿ ಬಹುತೇಕ ಅನ್ವಯಿಕ ಶಾಸ್ತ್ರ ಕೋರ್ಸ್‌­ಗಳಿಗೆ ಖಾಸಗಿ, ಡೀಮ್ಡ್‌, ವಿದೇಶಿ ವಿಶ್ವವಿದ್ಯಾಲಯಗಳು ಲಗ್ಗೆ ಇಡುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಇರುವ ಹಣದಲ್ಲೇ ಉತ್ತಮ ಶಿಕ್ಷಣ ನೀಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಸರ್ಕಾರಿ ವಿಶ್ವವಿದ್ಯಾಲಯಗಳು ಶುಲ್ಕ­ವನ್ನು ಸಾವಿರದಲ್ಲಿ ಎಣಿಸಿದರೆ, ಖಾಸಗಿ ವಿಶ್ವವಿದ್ಯಾಲಯಗಳು ಲಕ್ಷ­ದಲ್ಲಿ ಎಣಿಸುತ್ತಿವೆ. ಈಚೆಗೆ ರಾಜ್ಯ ಸರ್ಕಾರವು 21 ಖಾಸಗಿ ವಿಶ್ವ­ವಿದ್ಯಾ­ಲಯ ಆರಂಭಿಸಲು ಒಪ್ಪಿಗೆ ನೀಡಿದೆ ಎಂದು ಸೂಚ್ಯವಾಗಿ ಹೇಳಿದರು.

ಇತ್ತೀಚೆಗೆ ಖಾಸಗಿ ವಿಶ್ವವಿದ್ಯಾ­ಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಯಾವುದೇ ಮೂಲವಿಜ್ಞಾನದಲ್ಲಿ ಪದವಿ ನೀಡುತ್ತಿರಲಿಲ್ಲ. ಕೇವಲ ಅಗತ್ಯ­ವಿರುವ ಕೋರ್ಸ್‌ಗಳಲ್ಲಿ ಮಾತ್ರ ಶಿಕ್ಷಣ ನೀಡಲಾಗುತಿತ್ತು. ಇಲ್ಲಿ ಬಡವರು, ಕೆಳವರ್ಗದವರು ಪ್ರವೇಶ ಪಡೆಯಲು ಸಾಧ್ಯವೇ? ಶಿಕ್ಷಣ ಸಂಸ್ಥೆ ಜವಾಬ್ದಾರಿ ಏನು ಎನ್ನುವುದನ್ನು ಅರಿಯಬೇಕಾಗಿದೆ ಎಂದರು.

ಜ್ಞಾನ ಆಯೋಗದ ಪ್ರಕಾರ ದೇಶಕ್ಕೆ 1,500 ವಿಶ್ವವಿದ್ಯಾಲಯಗಳ ಅಗತ್ಯ­ವಿದೆ. ಆದರೆ ಪ್ರಸ್ತುತ ಸರ್ಕಾರಿ, ಖಾಸಗಿ, ಡೀಮ್ಡ್‌ ಸೇರಿದಂತೆ ಒಟ್ಟು 672 ವಿ.ವಿ.ಗಳಿವೆ. ಇನ್ನು 828 ವಿ.ವಿ ತೆರೆಯಬೇಕಾಗಿದೆ. ಆದರೆ ಈಗಿರುವ ವಿಶ್ವವಿದ್ಯಾಲಯಗಳನ್ನು ನಾವು ಎಷ್ಟರಮಟ್ಟಿಗೆ ಸುಧಾರಿಸಿದ್ದೇವೆ ಎನ್ನು­ವುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಪಟ್ಟಭದ್ರರು: ವಿಶ್ವವಿದ್ಯಾಲಯಗಳಿಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ಧಕ್ಕೆ­ಯಾಗುತ್ತಿದೆ. ಶಿಕ್ಷಣ ಸಂಸ್ಥೆ ಎನ್ನುವುದು ಜನಸಾಮಾನ್ಯರಿಗೆ ಮುಕ್ತವಾಗಿ ತೆರೆ­ದಿರ­ಬೇಕು. ಜನಸಾಮಾನ್ಯರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿ.ವಿ.ಗಳು ಚಿಂತಿಸಬೇಕು ಎಂದು ಹೇಳಿದರು.

2014ರ ಅಂತ್ಯಕ್ಕೆ ಗುಲ್ಬರ್ಗ ವಿ.ವಿ.ಯಲ್ಲಿ ಬಹುತೇಕರು ನಿವೃತ್ತಿ ಅಂಚಿಗೆ ತಲುಪುತ್ತಾರೆ. ಕೊನೆಗೆ ಅತಿಥಿ ಉಪನ್ಯಾಸಕರಿಂದ ವಿ.ವಿ.ಯಲ್ಲಿ ಬೋಧನೆ ನಡೆಸಬೇಕಾಗುತ್ತದೆ. ಕೇವಲ ಅಗತ್ಯ ಸೌಕರ್ಯ, ಸಿಬ್ಬಂದಿ, ಹೆಚ್ಚಿನ ಸಂಬಳದಿಂದ ಶಿಕ್ಷಣದಲ್ಲಿ ಅಗಾಧ ಬದಲಾವಣೆ ಆಗುತ್ತದೆ ಎಂಬುದನ್ನು ಒಪ್ಪುವುದಿಲ್ಲ. ಗುಣಮಟ್ಟದ ಶಿಕ್ಷಣ ಎನ್ನುವುದು ಬುದ್ಧಿ ಮತ್ತು ಮನಸ್ಸಿಗೆ ಸಂಬಂಧಿಸಿದ್ದು. ಇದನ್ನು ಉಪ­ನ್ಯಾಸ­ಕರು ಅರಿಯಬೇಕಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯ ಎನ್ನುವುದು ಕೇವಲ ವಿದ್ಯಾರ್ಥಿಗಳನ್ನು ತಯಾರಿ­ಸುವ ಕಾರ್ಖಾನೆ ಅಲ್ಲ. ಇದರ ಹೊರತಾಗಿ ಮನಸ್ಸುಗಳನ್ನು ಕಟ್ಟುವ, ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗುತ್ತದೆ. ಜನ­ಸಾಮಾನ್ಯ­ರಿಂದ ದೂರ ಇರುವ ಶಿಕ್ಷಣ ಸಂಸ್ಥೆಯು ಅತಿ ಅಪಾಯಕಾರಿ ಎಂದರು.

ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಟಿ.ಎನ್‌.­ಪ್ರಭಾ­ಕರ್‌ ಮಾತನಾಡಿದರು. ಡಾ.ಎ.ಎಂ.­ನರಹರಿ, ಪ್ರೊ.ಸಿ.ಎಚ್‌.­ಮುರಿ­ಗೇಂದ್ರಪ್ಪ, ಪ್ರೊ.ಕೆ.ಎಂ.­ನಾಗರಾಜು, ಪ್ರೊ.­ಟಿ.ಎಂ.ಮಂಜುನಾಥ್‌, ಪ್ರೊ.ಟಿ.­ಗಂಗಾಧರಯ್ಯ, ಡಾ.ಎಂ.ಪಿ.­ಶಂಕರಪ್ಪ, ಪ್ರೊ.ಎಚ್‌.ವಿ.ವೇಣುಗೋಪಾಲ್‌ ಇತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT