ನವದೆಹಲಿ (ಪಿಟಿಐ): ಭಾರತದಲ್ಲಿ ಪ್ರತಿ 10 ಜನರಲ್ಲಿ ಮೂವರು ಬಡವರು ಎಂಬ ತಮ್ಮ ಲೆಕ್ಕಚಾರವನ್ನು ಸಮರ್ಥಿಸಿಕೊಂಡಿರುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಪಿಎಂಎಸಿ) ಮಾಜಿ ಅಧ್ಯಕ್ಷ ಸಿ.ರಂಗರಾಜನ್, ಜಾಗತಿಕ ಮಾನದಂಡಗಳ ಅನುಸಾರ ತಾವು ಬಡತನ ಮಟ್ಟವನ್ನು ಅಂದಾಜು ಮಾಡಿರುವುದಾಗಿ ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ಪ್ರತಿನಿತ್ಯ 47 ಮತ್ತು ಗ್ರಾಮೀಣ ಭಾಗದಲ್ಲಿ 32ಕ್ಕಿಂತ ಹೆಚ್ಚಿಗೆ ಹಣ ಖರ್ಚು ಮಾಡುವವರು ಬಡವರಲ್ಲ ಎಂದು ತೀರ್ಮಾನಿಸಬಹುದು ಎಂದು ರಂಗರಾಜನ್ ಸಮಿತಿ ಹೇಳಿದೆ. ಇದಕ್ಕೆ ವ್ಯಕ್ತವಾದ ಟೀಕೆಗಳ ಬಗ್ಗೆ
ಪ್ರತಿಕ್ರಿಯಿಸಿದ ಅವರು, ‘ಈ ಅಂದಾಜು ತರ್ಕ-ಬದ್ಧವಾಗಿದೆ. ಯಾವುದೇ ಒತ್ತಡದಿಂದ ಈ ಲೆಕ್ಕಾಚಾರ ಮಾಡಿಲ್ಲ, ಮುಕ್ತವಾಗಿಯೇ ಮಾಡಿದ್ದೇವೆ’ ಎಂದಿದ್ದಾರೆ.
‘ವಿಶ್ವಬ್ಯಾಂಕ್ ಪ್ರಕಾರ ಪ್ರತಿದಿನ ಕನಿಷ್ಠ ಎರಡು ಡಾಲರ್ ವೆಚ್ಚ ಮಾಡುವವರು ಬಡವರು. ನಾವು ಅಂದಾಜು ಮಾಡಿರುವಂತೆ ಈ ಪ್ರಮಾಣ 2.4 ಡಾಲರ್ಗಳಿಷ್ಟಿದೆ. ಆದ್ದರಿಂದ ನಮ್ಮ ಲೆಕ್ಕಾಚಾರ ಬಡತನದ ಮಟ್ಟ ಅಳೆಯುವ ಜಾಗತಿಕ ಮಾನದಂಡದಂತೆಯೇ ಇದೆ’ ಎಂದು ಅವರು ವಿವರಿಸಿದ್ದಾರೆ.