ಗುಡಿಬಂಡೆ: ಬಡವರಿಗೆ ನಿವೇಶನ ನೀಡಲು 2 ಎಕರೆ ಸರ್ಕಾರಿ ಜಾಗ ಕಾದಿರಿಸುವ ಮತ್ತು ಲಭ್ಯವಿಲ್ಲದ ಕಡೆಗಳಲ್ಲಿ ಖಾಸಗಿ ಜಮೀನು ಪ್ರತಿ ಎಕರೆಗೆ ₹6ಲಕ್ಷಕ್ಕೆ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಹಂಪಸಂದ್ರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಿ.ಎಸ್. ಬಾಲಕೃಷ್ಣಾರೆಡ್ಡಿ ತಿಳಿಸಿದರು. ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿ ಆವರಣದಲ್ಲಿ ಶನಿವಾರ ನಡೆದ ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು.
ಬಡವರಿಗೆ ಮನೆ, ನಿವೇಶನ ಹಂಚಿಕೆ ಕಾರ್ಯ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಶೀಘ್ರ ಕಮಕಗೊಳ್ಳಬೇಕು ಎಂದರು.
ಎಲ್ಲ ಕುಟುಂಬಗಳು ಶೌಚಾಲಯ ಹೊಂದಬೇಕು: ಸ್ವಚ್ಛ ಗ್ರಾಮ ಪಂಚಾಯತಿಯನ್ನಾಗಿ ಮಾಡುವ ಉದ್ದೇಶದಿಂದ ಹಂಪಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ 21 ಜನ ಪ್ರತಿನಿಧಿಗಳು ಹಾಗೂ ತಾಲ್ಲೂಕಿನ ಅಧಿಕಾರಿಗಳನ್ನೊಳಗೊಂಡು ಪ್ರತಿ ಗ್ರಾಮದಲ್ಲೂ ಸ್ವಚ್ಛತೆ ಅಭಿಯಾನ ಮತ್ತು ವೈಯಕ್ತಿಕ ಶೌಚಾಲಯ ನಿರ್ಮಿಸುವ ಕುರಿತು ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಗ್ರಾಮದಲ್ಲಿ ಇರುವ ಎಲ್ಲ ಕುಟುಂಬಗಳು ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡು ಬಳಕೆ ಮಾಡಬೇಕು ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಣೀಂದ್ರ ಮಾತನಾಡಿ, ಸರ್ಕಾರದ ಸವಲತ್ತುಗಳು ಏನಿದೆ, ಯಾವ ರೀತಿ ಪಡೆಯಬೇಕೆಂಬುದನ್ನು ತಿಳಿಸಿಕೊಡಲು ಗ್ರಾಮದಲ್ಲಿ ವಾರ್ಡ್ ಸಭೆ ಮಾಡಲಾಗುತ್ತಿದೆ. ನರೇಗಾ, 14ನೇ ಹಣಕಾಸು ಯೋಜನೆ ಕ್ರಿಯಾಯೋಜನೆಗಳನ್ನು ತಯಾರಿಸಲು, ನೂತನ ಶೌಚಾಲಯಗಳ ನಿರ್ಮಾಣ, ರಸ್ತೆ, ಚರಂಡಿ, ವಿಚಾರಗಳನ್ನು ಗ್ರಾಮ ಸಭೆ ಮತ್ತು ವಾರ್ಡ್ ಸಭೆಯಲ್ಲಿ ತಿಳಿಸಿ ಅವುಗಳನ್ನು ರೆಕಾರ್ಡ್ ಮಾಡಲಾಗುವುದು. ಪಂಚಾಯತಿಯಲ್ಲಿ ಒಟ್ಟು 350 ಶೌಚಾಲಯ ನಿರ್ಮಾಣವಾಗಿದೆ. ಇನ್ನು 1300 ಶೌಚಾಲಯ ನಿರ್ಮಾಣ ಬಾಕಿಯಿದ್ದು, ಎಲ್ಲರೂ ಕಡ್ಡಾಯ ಶೌಚಾಲಯ ಮಾಡಿಕೊಳ್ಳಬೇಕು. ಪ್ರಸಕ್ತ ಸಾಲಿಗೆ 350 ಗುರಿ ನಿಗದಿಪಡಿಸಲಾಗಿದೆ ಎಂದರು.
150 ಅರ್ಜಿಗಳು: ಮನೆ, ನಿವೇಶನ, ಶೌಚಾಲಯ, ರಸ್ತೆ, ಚರಂಡಿ, ಗೋಕುಂಟೆ, ಕುಡಿಯುವ ನೀರು, ವಾಲ್ಮೀಕಿ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒಟ್ಟು 150 ಅರ್ಜಿಗಳು ಬಂದಿರುವುದಾಗಿ ತಿಳಿಸಿದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಅಮಲಾ, ಗ್ರಾಮ ಪಂಚಾಯತಿ ಅಧ್ಯಕ್ಷೆ ವೆಂಕಟಮ್ಮ, ಸದಸ್ಯರಾದ ಆನಂದಪ್ಪ, ಶ್ರೀನಿವಾಸರೆಡ್ಡಿ, ಪಾಪಮ್ಮ, ಸೌಭಾಗ್ಯಾ, ಜಿ.ನಾರಾಯಣಸ್ವಾಮಿ, ಎ.ವಿ.ಮಂಜುಳಾ, ಡಿ.ನಾಗರತ್ನಮ್ಮ, ಡಿ.ಎನ್.ಮಾಲತಿ, ಅಂಜಿನಮ್ಮ, ನಾಗಮಣಿ, ಆದಿನಾರಾಯಣಪ್ಪ, ವೆಂಕಟೇಶಪ್ಪ, ಕೆ.ಎನ್.ನರಸಿಂಹಪ್ಪ, ಕೆ.ವಿ.ರತ್ನಮ್ಮ, ವೈ.ಎಸ್.ರಮೇಶ, ಕಲ್ಪನಾ, ನರಸಿಂಹರೆಡ್ಡಿ, ಎಚ್.ಎನ್.ಶಿವಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.