ತರಕಾರಿ, ಆಹಾರ ಧಾನ್ಯ ಮತ್ತು ತೈಲೋತ್ಪನ್ನಗಳು ಅಗ್ಗವಾಗಿರುವುದರಿಂದ ಐದೂವರೆ ವರ್ಷದಲ್ಲಿ ಇದೇ ಮೊದಲ ಬಾರಿಗೆ ಹಣದುಬ್ಬರವು ಶೂನ್ಯಮಟ್ಟಕ್ಕೆ ಇಳಿದಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಸಗಟು ಬೆಲೆ ಸೂಚ್ಯಂಕಗಳೆರಡೂ (ಡಬ್ಲ್ಯುಪಿಐ) ಕುಸಿತ ದಾಖಲಿಸಿ ಅಚ್ಚರಿ ಮೂಡಿಸಿವೆ. ಅರ್ಥ ವ್ಯವಸ್ಥೆಯಲ್ಲಿ ಹಣದಿಳಿತದ ಪ್ರವೃತ್ತಿ ಕ್ರಮೇಣ ಬಲಗೊಳ್ಳುತ್ತಿರುವುದೂ ಇದರಿಂದ ಸ್ಪಷ್ಟಗೊಳ್ಳುತ್ತದೆ. ಸಿಪಿಐ ಆಧಾರಿತ ಹಣದುಬ್ಬರವು ಕಳೆದ ವರ್ಷದ ನವೆಂಬರ್ಗೆ (ಶೇ 11) ಹೋಲಿಸಿದರೆ ಈಗ ಶೇ 4.4ಕ್ಕೆ ಇಳಿದಿದ್ದರೆ, ಡಬ್ಲ್ಯುಪಿಐ ಆಧಾರಿತ ಹಣದುಬ್ಬರವು ಶೇ 7.5ರಿಂದ ಶೂನ್ಯ ಮಟ್ಟಕ್ಕೆ ಕುಸಿದಿರುವುದು ಅರ್ಥ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಲಿದೆ.
ಹಣದುಬ್ಬರ ಶೂನ್ಯಮಟ್ಟಕ್ಕೆ ಇಳಿದಿದೆ ಎಂದರೆ ಬೆಲೆಗಳು ಏರುಗತಿಯಲ್ಲಿ ಇರುವುದಿಲ್ಲ ಎಂದೇ ಅರ್ಥ. ಈ ಎರಡೂ ಬೆಲೆ ಸೂಚ್ಯಂಕಗಳು ಗಮನಾರ್ಹ ಮಟ್ಟದಲ್ಲಿ ಕುಸಿತ ದಾಖಲಿಸಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯು ಅಗ್ಗವಾಗಿರುವುದೇ ಮುಖ್ಯ ಕಾರಣವಾಗಿದೆ. ಇಂಧನ ಬೆಲೆಗಳು ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ 5ರಷ್ಟು ಕಡಿಮೆಯಾಗಿವೆ. ಹಲವು ವರ್ಷಗಳಿಂದ ಏರುಗತಿಯೇ ಇರುವ ಆಹಾರ ಹಣದುಬ್ಬರವೂ ಈಗ ಇಳಿಕೆ ಪ್ರವೃತ್ತಿ ತೋರಿಸುತ್ತಿದೆ. ಹಿಂದಿನ ವರ್ಷದ ನವೆಂಬರ್ನಲ್ಲಿ ಶೇ 15ರಷ್ಟಿದ್ದ ಇದು, ಈಗ ಶೇ 3ರಷ್ಟಕ್ಕೆ ಇಳಿದಿದೆ. ಸಗಟು ಮಾರಾಟ ಬೆಲೆ ಮತ್ತು ತರಕಾರಿ ಬೆಲೆ ಅಗ್ಗವಾಗಿರುವುದೇ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ.
ಬೆಲೆಗಳ ಇಳಿಕೆಯು ಇನ್ನೂ ಜನಸಾಮಾನ್ಯರ ನೇರ ಅನುಭವಕ್ಕೆ ಬರಬೇಕಾಗಿದೆ. ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ನೀತಿ ಮತ್ತು ಉತ್ತಮ ಆಡಳಿತ ಕಾರಣ ಎಂದು ಬಿಜೆಪಿಯು ರಾಜಕೀಯ ಲಾಭ ಬಾಚಿಕೊಳ್ಳಲು ಹೊರಟಿದ್ದರೂ, ಕಚ್ಚಾ ತೈಲದ ಬೆಲೆಯ ಪಾತ್ರವೇ ಪ್ರಮುಖವಾಗಿರುವುದನ್ನು ಅಲ್ಲಗಳೆಯಲಿಕ್ಕಾಗದು. ಬ್ಯಾಂಕ್ ಬಡ್ಡಿ ದರ ಇಳಿಯಬೇಕೆಂದು ಕೈಗಾರಿಕಾ ವಲಯದ ಒತ್ತಾಯಕ್ಕೆ ಈಗ ಇನ್ನಷ್ಟು ಬಲ ಬರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಹಣದುಬ್ಬರ ನಿಯಂತ್ರಣ ಗುರಿಯು ಮುಂಚಿತವಾಗಿಯೇ ತಲುಪಿರುವುದರಿಂದ ಬಡ್ಡಿ ದರ ತಗ್ಗಿಸಲು ಸಹಜವಾಗಿಯೇ ಆರ್ಬಿಐ ಮೇಲೆ ಒತ್ತಡ ಹೆಚ್ಚಲಿದೆ.
ಅಕ್ಟೋಬರ್ ತಿಂಗಳಲ್ಲಿನ ಕೈಗಾರಿಕಾ ಉತ್ಪಾದನೆಯು ತೀವ್ರ ಪ್ರಮಾಣದಲ್ಲಿ ಕುಸಿದಿರುವುದು ಕೂಡ ಬಡ್ಡಿ ದರ ಕಡಿತಕ್ಕೆ ಒತ್ತಾಸೆಯಾಗಲಿದೆ. ಅಲ್ಪಾವಧಿ ಬಡ್ಡಿ ದರ-ಗಳನ್ನು ಕಡಿತ ಮಾಡುವುದು ಈಗ ಸುರಕ್ಷಿತವಷ್ಟೇ ಅಲ್ಲ, ಸದ್ಯದ ಅನಿವಾರ್ಯವೂ ಹೌದು. ಅಗತ್ಯ ಬಿದ್ದರೆ ಮಧ್ಯಾಂತರ ಅವಧಿಯಲ್ಲಿ ಬಡ್ಡಿ ದರಗಳನ್ನು ಕಡಿತ ಮಾಡುವುದಾಗಿ ಹೇಳಿದ್ದ ಆರ್ಬಿಐ ಗವರ್ನರ್ ರಘುರಾಂ ರಾಜನ್ ಅವರು, ತಮ್ಮ ವಾಗ್ದಾನ ಈಡೇರಿಸುವ ಅನಿವಾರ್ಯ ಸ್ಥಿತಿ ಉದ್ಭವಿಸಿದೆ.
ಕಡಿಮೆ ಪ್ರಮಾಣದ ಹಣದುಬ್ಬರ ಮಟ್ಟವನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ರಾಜನ್, ಇನ್ನೂ ಕೆಲ ದಿನ ಕಾಯುವ ಸಾಧ್ಯತೆಯೇ ಹೆಚ್ಚು. ಶೂನ್ಯ ಹಣದುಬ್ಬರವು ಆರ್ಥಿಕ ವೃದ್ಧಿ ದರ ಕುಂಠಿತಗೊಳಿಸುವ ಸಾಧ್ಯತೆಯೂ ಇರುವುದರಿಂದ ಶೂನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಇರುವಂತೆ ನೋಡಿಕೊಳ್ಳುವುದೂ ಮುಖ್ಯವಾಗುತ್ತದೆ. ಹಣದುಬ್ಬರ ಇಳಿಕೆ ಪ್ರವೃತ್ತಿ ಸ್ಥಿರಗೊಂಡರೆ ಮಾತ್ರ ಬಡ್ಡಿ ದರಗಳು ಕಡಿಮೆಯಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.