ಲಖನೌ (ಪಿಟಿಐ): ದಲಿತ ಬಾಲಕಿಯರಿಬ್ಬರು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬದಾಯೂಂ ಜಿಲ್ಲೆಯ ಕತ್ರ ಶಹದತ್ಗಂಜ್್ ಗ್ರಾಮದ ಪ್ರತಿಯೊಂದು ಮನೆಗೂ ಶೌಚಾಲಯ ಕಟ್ಟಿಸಲು ಸುಲಭ್ ಇಂಟರ್ನ್ಯಾಷನ್ ನಿರ್ಧರಿಸಿದೆ.
‘ನೈರ್ಮಲ್ಯ ಕಾರ್ಯಕರ್ತರು ಹಾಗೂ ಎಂಜಿನಿಯರುಗಳ ತಂಡ ಈ ಗ್ರಾಮಕ್ಕೆ ಭೇಟಿ ನೀಡಿ ಶೀಘ್ರವೇ ಕೆಲಸ ಶುರುಮಾಡಲಿದೆ. ಶೌಚಾಲಯ ಇಲ್ಲದ ಕಾರಣ ಈ ಇಬ್ಬರು ಹೆಣ್ಣುಮಕ್ಕಳು ಇಂಥದ್ದೊಂದು ಘೋರ ದುರಂತಕ್ಕೆ ಬಲಿಯಾಗಿದ್ದಾರೆ’ ಎಂದು ಸುಲಭ್್ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಹೇಳಿದ್ದಾರೆ.
‘ಮೊದಲು ಶೌಚಾಲಯ, ಆಮೇಲೆ ದೇಗುಲ’ ಎನ್ನುವ ಮೋದಿ ಅವರ ಘೋಷವಾಕ್ಯವನ್ನು ಶ್ಲಾಘಿಸಿದ ಅವರು, ಪ್ರತಿ ಮನೆಗೂ ಶೌಚಾಲಯದ ವ್ಯವಸ್ಥೆ ಮಾಡಿಕೊಡಲು ಸರ್ಕಾರದ ಜತೆ ಕೆಲಸ ಮಾಡಲು ನಾವು ಬಯಸುತ್ತೇವೆ’ ಎಂದಿದ್ದಾರೆ.
‘ಈ ವಿಷಯವಾಗಿ ನಾನು ಪ್ರಧಾನಿಯವರಿಗೆ ಪತ್ರ ಬರೆಯುತ್ತಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ದೇಶದಲ್ಲಿ ಸುಮಾರು ಶೇ 65ರಷ್ಟು ಮಂದಿ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಬಯಲು ಶೌಚ ಪದ್ಧತಿ ಕೊನೆಗಾಣಿಸುವುದಕ್ಕೆ ಕನಿಷ್ಠ ಒಂದು ಹಳ್ಳಿಯನ್ನಾದರೂ ದತ್ತು ತೆಗೆದು ಕೊಳ್ಳುವಂತೆ ಪ್ರಮುಖ ಉದ್ಯಮ ಸಂಸ್ಥೆಗಳಿಗೆ ಸುಲಭ್್ ಸಂಸ್ಥೆ ಮನವಿ ಮಾಡಿಕೊಂಡಿದೆ.