ಬದಾಯೂಂ/ಲಖನೌ (ಪಿಟಿಐ): ಬದಾಯೂಂ ಜಿಲ್ಲೆಯಲ್ಲಿ ಸೋದರ ಸಂಬಂಧಿ ದಲಿತ ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರಿಂದ ಒತ್ತಡಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಶನಿವಾರ ನಿರ್ಧರಿಸಿದೆ.
‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಸಂತ್ರಸ್ತ ಕುಟುಂಬಗಳ ಒತ್ತಾಯಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸ್ಪಂದಿಸಿದ್ದಾರೆ. ಪ್ರರಕಣವನ್ನು ಸಿಬಿಐಗೆ ಹಸ್ತಾಂತರಿಸುವ ರಿವಾಜನ್ನು ಶೀಘ್ರದಲ್ಲೇ ಪೂರ್ಣಗೊಳಿಸ-ಲಾಗುವುದು’ ಎಂದು ರಾಜ್ಯ ಸರ್ಕಾರದ ಹೇಳಿಕೆ ತಿಳಿಸಿದೆ.
ಕೊಲೆ ಮಾಡುವುದಕ್ಕೂ ಮೊದಲು ಬಾಲಕಿಯರ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಖಚಿತ ಪಡಿಸಿದೆ.
‘ಸಾರ್ವಜನಿವಾಗಿ ನೇಣಿಗೇರಿಸಿ’: ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿಯರ ಕುಟುಂಬಗಳು ರಾಜ್ಯ ಸರ್ಕಾರ ಘೋಷಿಸಿರುವ ₨ 5 ಲಕ್ಷ ಮೊತ್ತದ ಪರಿಹಾರ ತಿರಸ್ಕರಿಸಿವೆ.
‘ಹಣದಿಂದ ನಮ್ಮ ಮಕ್ಕಳು ವಾಪಸು ಬರುವುದಿಲ್ಲ. ಅವರಿಗೆ ಆದ ಅವಮಾನ ಸರಿಪಡಿಸಲು ಆಗುವುದಿಲ್ಲ. ದುರುಳರು ನಮ್ಮ ಮಕ್ಕಳನ್ನು ಮರಕ್ಕೆ ನೇಣುಹಾಕಿದಂತೆಯೇ ಆ ದುರುಳರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು’ ಎಂದು ಬಾಲಕಿಯರ ಕುಟುಂಬಗಳು ಒತ್ತಾಯಿಸಿವೆ. ಈ ಮಧ್ಯೆ, ಕಟರಾ ಗ್ರಾಮದಲ್ಲಿನ ಬಾಲಕಿಯರ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಸಂತ್ರಸ್ತ ಕುಟುಂಬಗಳ ಒತ್ತಾಯವನ್ನು ಬೆಂಬಲಿಸಿದರು.
ಇನ್ನಿಬ್ಬರು ಆರೋಪಿಗಳ ಬಂಧನ: ತಲೆತಪ್ಪಿಸಿಕೊಂಡಿದ್ದ ಉರ್ವೇಶ್ ಯಾದವ್, ಸೇವೆಯಿಂದ ವಜಾಗೊಂಡಿರುವ ಕಾನ್ಸ್ಟೆಬಲ್ ಛತ್ರಪಾಲ್ ಯಾದವ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇದರೊಂದಿಗೆ ಎಲ್ಲ ಆರೋಪಿಗಳನ್ನು ಬಂಧಿಸಿದಂತಾಗಿದೆ.ಕಟರಾ ಸಾದತ್ಗಂಜ್ ಪೊಲೀಸ್ ಹೊರಠಾಣೆಯ ಮುಖ್ಯಸ್ಥ ರಾಂ ವಿಲಾಸ್ಯಾದವ್ ಅವರನ್ನು ಅಮಾನತು ಮಾಡಲಾಗಿದೆ.
ದಲಿತ ಬಾಲಕಿಯರ ಮೇಲೆ ಹೇಯವಾಗಿ ಎಸಗಿದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಮಾಜವಾದಿ ಪಕ್ಷದ ಸರ್ಕಾರ ನಿರ್ವಹಿಸಿದ ರೀತಿಯನ್ನು ವಿವಿಧ ರಾಜಕೀಯ ಪಕ್ಷಗಳು ಮತ್ತು ಅನೇಕ ಸಂಘಟನೆಗಳು ಅತ್ಯುಗ್ರವಾಗಿ ಟೀಕಿಸಿವೆ.
ಉತ್ತರಪ್ರದೇಶದ ಪ್ರಮುಖ ವಿರೋಧ ಪಕ್ಷ ಬಿಎಸ್ಪಿ, ಸರ್ಕಾರವನ್ನು ಹಿಗ್ಗಾಮಗ್ಗಾ ಟೀಕಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದೂ ಒತ್ತಾಯಿಸಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.
ಬಾಲಕಿ ಮೇಲೆ ಅತ್ಯಾಚಾರ: ಲಖೀಂಪುರ ಖೀರೀ (ಉತ್ತರಪ್ರದೇಶ): ಮೂರು ವರ್ಷದ ಹಸುಳೆಯ ಮೇಲೆ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಜಿಲ್ಲೆಯ ತಾವರ್ಗಂಜ್ನಲ್ಲಿ ನಡೆದಿದೆ.
ಮುಖ್ಯ ಕಾರ್ಯದರ್ಶಿ ಬದಲು ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಜಾವೇದ್ ಉಸ್ಮಾನಿ ಅವರನ್ನು ಬದಲಿಸಲಾಗಿದೆ. ಅವರ ಸ್ಥಾನಕ್ಕೆ ಅಲೋಕ್ ರಂಜನ್ ನೇಮಕಗೊಂಡಿದ್ದಾರೆ.
ವಿಶ್ವಸಂಸ್ಥೆ ಖಂಡನೆ
ವಿಶ್ವಸಂಸ್ಥೆ (ಪಿಟಿಐ): ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ದಲಿತ ಸಮುದಾಯದ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ವಿಶ್ವಸಂಸ್ಥೆ ಖಂಡಿಸಿದ್ದು, ‘ಇದೊಂದು ಘೋರ ಅಪರಾಧ’ ಎಂದು ಹೇಳಿದೆ. ಎಲ್ಲ ನಾಗರಿಕರನ್ನು ಕಾನೂನಿನ ಮೂಲಕ ರಕ್ಷಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.