ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (ಬಿಬಿಪಿ) ಚಿರತೆ ಸಫಾರಿಗೆ ಅವಕಾಶ ನೀಡಲು ಉದ್ಯಾನದ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಸಂಬಂಧ ಬಿಬಿಪಿ ಅಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ರಾಜ್ಯ ಮೃಗಾಲಯ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕಿದೆ.
‘ಚಿರತೆ ಸಫಾರಿಯ ರೂಪುರೇಷೆ ಸಿದ್ಧಗೊಂಡಿದ್ದು, ಯೋಜನೆಗೆ ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತದೆ. ಸಿಂಹ ಮತ್ತು ಹುಲಿ ಸಫಾರಿ ಪ್ರದೇಶದ ಪಕ್ಕದಲ್ಲೇ ಯೋಜನೆಗೆ 25 ಎಕರೆ ಜಾಗ ಗುರುತಿಸಲಾಗಿದೆ. ಯೋಜನೆಯ ವೆಚ್ಚ ಸುಮಾರು ರೂ3 ಕೋಟಿ ಎಂದು ಅಂದಾಜಿಸಲಾಗಿದೆ’ ಎಂದು ಉದ್ಯಾನದ ನಿರ್ದೇಶಕ ರಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಯೋಜನೆಗೆ ಅನುದಾನದ ಕೊರತೆ ಇರುವುದರಿಂದ ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್ಆರ್) ಕಾರ್ಯಕ್ರಮದಡಿ ಕಾರ್ಪೊರೇಟ್ ಸಂಸ್ಥೆಗಳಿಂದ ಹಣಕಾಸು ನೆರವು ಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉದ್ಯಾನದಲ್ಲಿ ಪ್ರಸ್ತುತ 24 ಚಿರತೆಗಳಿವೆ. ಅವುಗಳಲ್ಲಿ ಏಳು ಚಿರತೆಗಳನ್ನು ಮೊದಲ ಹಂತದಲ್ಲಿ ಸಫಾರಿಗೆ ಬಳಸಿಕೊಳ್ಳಲಾಗುತ್ತದೆ ಎಂದು ರಂಗೇಗೌಡ ಮಾಹಿತಿ ನೀಡಿದ್ದಾರೆ.