ಯೋಜನೇತರ ವೆಚ್ಚವನ್ನು ಶೇ 10ರಷ್ಟು ಕಡಿಮೆ ಮಾಡಲು ಹಲವಾರು ಮಿತವ್ಯಯ ಕ್ರಮಗಳನ್ನು ಕೇಂದ್ರದ ಎನ್ಡಿಎ ಸರ್ಕಾರ ಪ್ರಕಟಿಸಿದೆ. ಸರ್ಕಾರಿ ಬಾಬುಗಳ ವಿದೇಶ ಪ್ರಯಾಣ, ಪ್ರಥಮ ದರ್ಜೆ ವಿಮಾನ ಪ್ರಯಾಣ ಸೌಲಭ್ಯಕ್ಕೆ ಕತ್ತರಿ, ಪಂಚತಾರಾ ಹೋಟೆಲ್ಗಳಲ್ಲಿ ಸಭೆ ಹಾಗೂ ಹೊಸ ಕಾರುಗಳ ಖರೀದಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಹೊಸ ನೇಮಕಾತಿಗಳಿಗೂ ತಡೆ ಒಡ್ಡಲಾಗಿದೆ. ಪ್ರವಾಸಗಳ ಬದಲು ವಿಡಿಯೊ ಸಂವಾದಗಳಿಗೆ ಪ್ರಾಶಸ್ತ್ಯ ನೀಡಬೇಕೆಂದು ಸೂಚಿಸಲಾಗಿದೆ. ಈ ಕ್ರಮಗಳ ಮೂಲಕ, ವಿತ್ತೀಯ ಕೊರತೆಯನ್ನು ಶೇ 4.1ಕ್ಕೆ ತಗ್ಗಿಸುವ ಗುರಿ ಸರ್ಕಾರದ್ದು. ಆರ್ಥಿಕ ಶಿಸ್ತು ಉತ್ತೇಜನಕ್ಕೂ ಇದು ಸಹಕಾರಿ ಎಂಬುದು ಸರ್ಕಾರದ ಪ್ರತಿಪಾದನೆ.
ವೆಚ್ಚ ಕಡಿತದಿಂದ ₨ 35 ರಿಂದ ₨ 40 ಸಾವಿರ ಕೋಟಿಗಳಷ್ಟು (ಜಿಡಿಪಿಯ ಶೇ 0.3ರಷ್ಟು) ಉಳಿತಾಯ ಸಾಧ್ಯವಾಗಲಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರ ಬದ್ಧವಾಗಿರುವುದನ್ನು ಇದು ಸೂಚಿಸುತ್ತದೆ. ಈ ಕ್ರಮಗಳು, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಮತ್ತು ಲಭ್ಯ ಇರುವ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಒತ್ತು ನೀಡುವ ಆರ್ಥಿಕ ಸಚಿವಾಲಯದ ಆಶಯಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ಆದರೆ, ಅರ್ಥ ವ್ಯವಸ್ಥೆಯ ಪುನಶ್ಚೇತನ ಅದರಲ್ಲೂ ತಯಾರಿಕಾ ರಂಗದಲ್ಲಿನ ಚೇತರಿಕೆಗೆ ಇದು ಅಡ್ಡಿಯಾಗಬಾರದು. ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ಸೌಲಭ್ಯ ಒದಗಿಸುವ, ಸೋರಿಕೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮಿತವ್ಯಯ ಕ್ರಮಗಳು ಉದ್ದೇಶಿತ ಫಲ ನೀಡುತ್ತವೆ.
‘ಯುಪಿಎ–2’ ಸರ್ಕಾರವೂ ವಿತ್ತೀಯ ಬಿಕ್ಕಟ್ಟು ವಿಷಮಿಸಿದ್ದಾಗ 2012ರಲ್ಲಿ ಮಿತವ್ಯಯ ಕ್ರಮಗಳನ್ನು ಪ್ರಕಟಿಸಿತ್ತು. ಒಂದರ್ಥದಲ್ಲಿ ಇಂತಹ ಕ್ರಮಗಳಿಗೆ ಬರೀ ಸಾಂಕೇತಿಕ ಮೌಲ್ಯ ಇರುತ್ತದೆಯಷ್ಟೆ. ಅನೇಕ ನಿರ್ಧಾರಗಳು ಸಮರ್ಪಕವಾಗಿ ಜಾರಿಗೆ ಬರುವುದೇ ಇಲ್ಲ ಅಥವಾ ಜಾರಿಗೆ ಬರುವ ಕಾರ್ಯಕ್ರಮಗಳು ದೀರ್ಘಕಾಲ ಬಾಳುವುದೂ ಇಲ್ಲ. ವೆಚ್ಚ ಕಡಿತಕ್ಕೆ ಪ್ರತಿಯಾಗಿ ರಂಗೋಲಿ ಕೆಳಗೆ ಹೇಗೆ ನುಸುಳುವುದು ಎಂಬುದನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೆ. ಅನಿರೀಕ್ಷಿತ ಸಂದರ್ಭಗಳಲ್ಲಿ ವೆಚ್ಚ ಸರಿದೂಗಿಸಲು ನಿಯಮಾವಳಿಗಳಲ್ಲಿ ಅವಕಾಶ ಇರುವುದನ್ನೂ ಆಡಳಿತಯಂತ್ರ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಲೇ ಇರುತ್ತದೆ. ಹೀಗಾಗಿ ಇಂತಹ ಸದುದ್ದೇಶದ ಕ್ರಮಗಳು ಅನೇಕ ಬಾರಿ ತೋರಿಕೆಯದಾಗಿ ಬಿಡುತ್ತವೆ. ಅಧಿಕಾರಿಗಳಷ್ಟೇ ಅಲ್ಲದೆ ರಾಜಕಾರಣಿಗಳ ಅನಗತ್ಯ ವಿದೇಶ ಪ್ರವಾಸಗಳೂ ಬೊಕ್ಕಸಕ್ಕೆ ಹೊರೆಯಾಗಿರುತ್ತವೆ.
ಸಾರ್ವಜನಿಕ ಹಣದ ದುರುಪಯೋಗ ತಪ್ಪಬೇಕು. ಈ ಮಿತವ್ಯಯದ ಕ್ರಮಗಳು ಸರ್ಕಾರದ ಕಾರ್ಯನಿರ್ವಹಣೆಯ ದಕ್ಷತೆಗೆ ಅಡ್ಡಗಾಲು ಹಾಕದಂತೆಯೂ ಎಚ್ಚರವಹಿಸುವ ಅಗತ್ಯ ಇದೆ. ಅನುತ್ಪಾದಕ ವೆಚ್ಚವನ್ನು ತಗ್ಗಿಸಲು ಸರ್ಕಾರ ಮೊದಲು ಆದ್ಯತೆ ನೀಡಬೇಕು. ಅಗತ್ಯವಿಲ್ಲದ ಹುದ್ದೆಗಳನ್ನು ಕಡಿತಗೊಳಿಸುವುದೂ ಇದರಲ್ಲಿ ಸೇರಿದೆ. ಸದ್ಯದ ಪರಿಸ್ಥಿತಿಯಲ್ಲಿ ವೆಚ್ಚ ಕಡಿತ ಮಾಡುವುದರ ಜತೆಗೆ ಲಭ್ಯ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜಾಣತನ ಪ್ರದರ್ಶಿಸಿದರೆ ಮಿತವ್ಯಯ ಕ್ರಮಗಳ ಉದ್ದೇಶ ಸಾರ್ಥಕವಾದೀತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.