ಬೆಂಗಳೂರು: ಹತ್ತು ಜಿಲ್ಲೆಗಳ 35 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು ₨ 3,589 ಕೋಟಿ ನಷ್ಟ ಉಂಟಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಮೊದಲು ಒಂಬತ್ತು ಜಿಲ್ಲೆಗಳ 34 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕನ್ನು ಈ ಪಟ್ಟಿಗೆ ಸೇರಿಸಲು ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಒಪ್ಪಿಕೊಂಡಿದ್ದು, ಬರಪೀಡಿತ ತಾಲ್ಲೂಕುಗಳ ಸಂಖ್ಯೆ 35ಕ್ಕೆ ಏರಿದೆ’ ಎಂದರು.
ಬರಪೀಡಿತ ಪ್ರದೇಶಗಳಲ್ಲಿನ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ನಾಲ್ಕು ತಂಡಗಳನ್ನು ಕಳುಹಿಸಿದೆ. ಶನಿವಾರ ಈ ತಂಡವು ತಮ್ಮನ್ನು ಭೇಟಿ ಮಾಡಲಿದೆ. ಆಗ ₨ 3,589 ಕೋಟಿ ಹಾನಿಯ ವರದಿಯನ್ನು ಸಲ್ಲಿಸಲಾಗುವುದು. ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್ಡಿಆರ್ಎಫ್) ₨ 779 ಕೋಟಿ ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದರು.
2013–14ರಲ್ಲಿ ಬರ ಪರಿಹಾರಕ್ಕಾಗಿ ₨ 1,014.15 ಕೋಟಿ ನೆರವು ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ₨ 169 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ₨ 610 ಕೋಟಿ ನೆರವು ಕೇಳಿದರೆ, ಕೇಂದ್ರದಿಂದ ₨ 73.53 ಕೋಟಿ ಅನುದಾನ ದೊರಕಿತ್ತು.
2014–1ರಲ್ಲಿ ಆಲಿಕಲ್ಲು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ₨ 963.44 ಕೋಟಿ ನೆರವು ಕೋರಲಾಗಿತ್ತು. ₨ 82.77 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ವರ್ಷ ಅತಿವೃಷ್ಟಿಯಿಂದ ಹಾನಿಗೀಡಾದ ಐದು ಜಿಲ್ಲೆಗಳಿಗೆ ₨ 320 ಕೋಟಿ ನೆರವು ಕೇಳಿದ್ದು, ಇನ್ನೂ ಪ್ರತಿಕ್ರಿಯೆ ದೊರಕಿಲ್ಲ ಎಂದು ವಿವರ ನೀಡಿದರು.