ಕಳಸ: ಅರಣ್ಯ ಭೂಮಿಯ ಸಮೀಕ್ಷೆಗೆಂದು ತೆರಳಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಗ್ರಾಮಸ್ಥರು ತಡೆದು ದಿಗ್ಬಂಧನ ಹಾಕಿದ ಘಟನೆ ಬಲಿಗೆಯಲ್ಲಿ ಬುಧವಾರ ನಡೆದಿದೆ.
ಇನಾಂ ಭೂಮಿಯ ಆಸುಪಾಸಿನ ಅರಣ್ಯ ಭೂಮಿಯನ್ನು ಗುರುತಿಸಿ ನಕಾಶೆ ಸಿದ್ಧಪಡಿಸಲು ಉಪ ವಲಯ ಅರಣ್ಯಾಧಿಕಾರಿ ಸುಂದರೇಶ್, ಇಲಾಖಾ ಸರ್ವೇಯರ್ ಮತ್ತಿತರ ಸಿಬ್ಬಂದಿ ಬುಧವಾರ ಬಲಿಗೆಗೆ ತೆರಳಿದ್ದರು.
ಈ ವಿಷಯ ಅರಿತ ಬಲಿಗೆಯ ಗ್ರಾಮಸ್ಥರು ಬಲಿಗೆ ಕಡಿವೆಯ ಬಳಿ ಒಗ್ಗೂಡಿ ಅರಣ್ಯ ಸಿಬ್ಬಂದಿಯ ಸಮೀಕ್ಷೆ ಕಾರ್ಯ ತಡೆಯುವ ಯತ್ನ ಮಾಡಿದರು.
ಆದರೆ ಅರಣ್ಯ ಸಿಬ್ಬಂದಿ ಇದನ್ನು ಲೆಕ್ಕಿಸದೆ ತಮ್ಮ ಕರ್ತವ್ಯ ಮುಂದುವರಿಸಲು ಸಜ್ಜಾದಾಗ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ದಿಗ್ಬಂಧನ ಹಾಕಿದರು. ಯಾವುದೇ ಕಾರಣಕ್ಕೂ ಅರಣ್ಯ ಸಿಬ್ಬಂದಿಯನ್ನು ಸ್ಥಳದಿಂದ ತೆರಳಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಅರಣ್ಯ ಇಲಾಖೆಯ ತಪ್ಪು ಸಮೀಕ್ಷೆಯಿಂದಾಗಿಯೇ ಇನಾಂ ವಿವಾದ ಬಡ ಕೃಷಿಕರನ್ನೂ ಒಕ್ಕಲೆಬ್ಬಿಸುವ ಮಟ್ಟಕ್ಕೆ ಬೆಳೆದಿದೆ. ಆದ್ದರಿಂದ ಅರಣ್ಯ ಸಿಬ್ಬಂದಿಯನ್ನು ಇಲ್ಲಿಂದ ಕದಲಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ‘ಬಲಿಗೆಯಲ್ಲಿ ಒತ್ತುವರಿ ಗುರುತು ಮಾಡುವ ಮೊದಲು ಕಂದಾಯ ಮತ್ತು ಅರಣ್ಯ ಭೂಮಿಯನ್ನು ಸ್ಪಷ್ಟವಾಗಿ ಗುರುತು ಮಾಡಬೇಕು. ನಾವು ಅನಾದಿಕಾಲದಿಂದ ಕೃಷಿ ಮಾಡಿದ ಭೂಮಿಯನ್ನು ಅರಣ್ಯ ಎಂದರೆ ಒಪ್ಪಿಕೊಳ್ಳಲಾಗದು’ ಎಂದು ಗ್ರಾಮಸ್ಥರು ಕಿಡಿ ಕಾರಿದರು.
ಕೃಷಿ ಭೂಮಿ ತೆರವು ಮಾಡಿಸಲು ಅರಣ್ಯ ಸಿಬ್ಬಂದಿ ಬಲಿಗೆಗೆ ಬಂದರೆ ರಕ್ತಪಾತ ಆಗುತ್ತದೆ ಎಂದೂ ಗ್ರಾಮಸ್ಥರು ಎಚ್ಚರಿಸಿದರು. ಇನಾಂ ಸಂತ್ರಸ್ತ ರೈತರ ಪರವಾಗಿ ಧರಣೇಂದ್ರ, ಸವಿಂಜಯ, ಕೆ.ಎಲ್.ವಾಸು ಮಾತನಾಡಿದರು.ಕಳಸ ಠಾಣಾಧಿಕಾರಿ ಸಂತೋಷ್ ಶೆಟ್ಟಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ಅರಣ್ಯ ಸಿಬ್ಬಂದಿ ಕಳಸಕ್ಕೆ ಮರಳಿದರು.