ನವದೆಹಲಿ(ಪಿಟಿಐ): ಬಲಿಷ್ಠ ಜನಲೋಕಪಾಲ ಮಸೂದೆ ಜಾರಿ, ನ್ಯಾಯಾಲಯದ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಚುನಾವಣೆಗೆ ಸ್ಪರ್ಧಿಸುವ ಅರ್ಹ ವಯಸ್ಸನ್ನು 25 ರಿಂದ 21 ಕ್ಕೆ ಇಳಿಸುವಿಕೆ...
-ಇವು ಆಮ್ ಆದ್ಮಿ ಪಕ್ಷ ಗುರುವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತ ನಾಡಿದ ಅರವಿಂದ ಕೇಜ್ರಿವಾಲ್, ಅಧಿಕಾರ ವಿಕೇಂದ್ರಿಕರಣ, ಉತ್ತಮ ಸರ್ಕಾರ ಮತ್ತು ಸೇವೆಯನ್ನು ಸರಿಯಾದ ಸಮಯದಲ್ಲಿ ಒದಗಿಸುವುದು ಪಕ್ಷದ ಆದ್ಯತೆಗಳು ಎಂದು ಹೇಳಿದರು.
ದೇಶದ ಸಮಗ್ರ ಅಭಿವೃದ್ಧಿಗೆ ಸಂಪತ್ತು ವೃದ್ಧಿ ಅಗತ್ಯವಾಗಿರುವುದರಿಂದ ತಮ್ಮ ಪಕ್ಷವು ಕೈಗಾರಿಕಾ ಸ್ನೇಹಿಯಾಗಿದೆ ಎಂದು ಘೋಷಿಸಿದ ಕೇಜ್ರಿವಾಲ್, ಬಂಡವಾಳಶಾಹಿಗಳ ವಿರುದ್ಧ ಧೋರಣೆ ಹೊಂದಿದ್ದೇವೆ ಎಂಬುದನ್ನೂ ತಿಳಿಸಿದರು.
ನ್ಯಾಯಾಂಗ ಉತ್ತರದಾಯಿತ್ವದ ಬಗ್ಗೆ ಒತ್ತಿಹೇಳಿರುವ ಆಮ್ ಆದ್ಮಿ, ಮುಂದಿನ ಐದು ವರ್ಷಗಳಲ್ಲಿ ದೇಶದಾದ್ಯಂತ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದೆ.
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು, ಹಾಗೆಯೇ ವಿಚಾರಣಾ ಕೊಠಡಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು, ಪೊಲೀಸ್ ಇಲಾಖೆಯಲ್ಲಿ ತನಿಖೆ, ಕಾನೂನು ಮತ್ತು ಆದೇಶ ವಿಭಾಗವನ್ನು ಪ್ರತ್ಯೇಕಿಸಲಾಗುವುದು ಎಂದು ಅರವಿಂದ ಕೇಜ್ರಿವಾಲ್ ಅವರು ಹೇಳಿದರು.