ಬೆಂಗಳೂರು: ಕೈಗಾರಿಕೆಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಪಡೆದ ಭೂಮಿಯನ್ನು ಏಳು ವರ್ಷಗಳೊಳಗೆ ಆಯಾ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದಿದ್ದರೆ ಅದನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯುವ ಮಸೂದೆಗೆ ವಿಧಾನಸಭೆ ಶುಕ್ರವಾರ ಒಪ್ಪಿಗೆ ನೀಡಿತು.
‘ಕರ್ನಾಟಕ ಭೂ ಸುಧಾರಣೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ–2014’ ಕುರಿತು ವಿವರಣೆ ನೀಡಿದ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ‘ಅನುಮೋದಿತ ಉದ್ದೇಶಕ್ಕೆ ನೀಡಲಾದ ಭೂಮಿಯನ್ನು ನಿಯಮಿತ ಅವಧಿಯೊಳಗೆ (ಗರಿಷ್ಠ 7 ವರ್ಷ) ಬಳಕೆ ಮಾಡದಿದ್ದರೆ, ಅದನ್ನು ಸರ್ಕಾರದ ಭೂ ಬ್ಯಾಂಕ್ಗೆ ಬಿಟ್ಟುಕೊಡಬೇಕು ಎಂಬ ಷರತ್ತು ಹಾಕಲಾಗಿದೆ’ ಎಂದು ಹೇಳಿದರು.
‘ಅವಧಿ ಮೀರಿದರೂ ಭೂ ಬ್ಯಾಂಕ್ಗೆ ಭೂಮಿ ಒಪ್ಪಿಸದಿದ್ದರೆ ಆ ಯೋಜನೆಗೆ ನೀಡಲಾದ ಸೆಕ್ಷನ್ 109ರ ವಿನಾಯ್ತಿ ರದ್ದುಗೊಳಿಸಿ, ಯಾವುದೇ ಪರಿಹಾರ ನೀಡದೆ ಭೂಮಿಯನ್ನು ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
‘ಯಾವುದೇ ಸಂಸ್ಥೆ, ಕಾಯ್ದೆಯ 109ನೇ ಸೆಕ್ಷನ್ನಿಂದ ವಿನಾಯ್ತಿ ಪಡೆದ ದಿನಾಂಕದಿಂದ ಹತ್ತು ವರ್ಷಗಳ ಒಳಗೆ ಯೋಜನೆ ವಿಸ್ತರಣೆ, ಆರ್ಥಿಕ ಮುಗ್ಗಟ್ಟು ನಿರ್ವಹಣೆ ಇಲ್ಲವೆ ಭೂಮಿ ಬಳಕೆ ಬದಲಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ಅದರ ವಾಸ್ತವ ಸ್ಥಿತಿ ಪರಿಶೀಲಿಸಿ ನಿರ್ಧರಿಸಲಿದೆ’ ಎಂದು ಮಾಹಿತಿ ನೀಡಿದರು. ‘ಕಾಯ್ದೆಯಲ್ಲಿ ಮಾಡಲಾದ ತಿದ್ದುಪಡಿಯಿಂದ ಕೃಷಿ ಭೂಮಿಯಿಂದ ಕೃಷಿಯೇತರ ಪರಿವರ್ತನೆಗೆ ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪಲಿದೆ’ ಎಂದರು.
‘ಕರ್ನಾಟಕ ಭೂ ಸುಧಾರಣೆಗಳ ಕಾಯ್ದೆ 1961ರ 109ನೇ ಸೆಕ್ಷನ್ ಅಡಿಯಲ್ಲಿ ಒಮ್ಮೆ ಅನುಮತಿ ಪಡೆದುಕೊಂಡರೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 95ನೇ ಸೆಕ್ಷನ್ ಅಡಿಯಲ್ಲೂ ಅನುಮತಿ ಪಡೆದಂತೆ ಎಂಬ ಉಪಬಂಧವನ್ನು ಸಹ ಸೇರ್ಪಡೆ ಮಾಡಲಾಗಿದೆ’ ಎಂದು ವಿವರಿಸಿದರು.
ಡಿ.ಸಿಗಳಿಗೆ ಅಧಿಕಾರ: ‘ಸೆಕ್ಷನ್ 63, 79ಎ, 79ಬಿ ಇಲ್ಲವೆ 80ರ ಪ್ರಕಾರ ಎಷ್ಟೇ ಪ್ರಮಾಣದ ಭೂಮಿಗೂ ಮಂಜೂರಾತಿ ನೀಡಲು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಗರಿಷ್ಠ ಅರ್ಧ ಹೆಕ್ಟೇರ್ ಭೂಮಿ ಮಂಜೂರಾತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದರು.
ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಸೂದೆಯನ್ನು ಸ್ವಾಗತಿಸಿದರೆ, ಬಿಜೆಪಿಯ ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿದರು. ‘ಸಿಮೆಂಟ್ ಕೈಗಾರಿಕೆ ಸ್ಥಾಪನೆಗೆ ಸಾವಿರಾರು ಎಕರೆ ಭೂಮಿ ಹಂಚಿಕೆ ಮಾಡಿಸಿಕೊಂಡು ಬಳಿಕ ಅವನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಳಸಿಕೊಂಡ ಉದಾಹರಣೆ ನಮ್ಮ ಮುಂದೆ ಸಾಕಷ್ಟಿವೆ’ ಎಂದು ಹೇಳಿದರು. ‘ಭೂಪರಿವರ್ತನೆ ಮೇಲೆ ವಲಯವಾರು ನಿರ್ಬಂಧ ಹೇರಬೇಕು’ ಎಂದು ಒತ್ತಾಯಿಸಿದರು.
‘ಭೂ ಸುಧಾರಣೆ ಕಾಯ್ದೆಯಂತಹ ದೊಡ್ಡ ಕೊಡುಗೆಯನ್ನು ರಾಜ್ಯಕ್ಕೆ ಕೊಟ್ಟ ಕಾಂಗ್ರೆಸ್ ಪಕ್ಷವೇ ಆ ಕಾಯ್ದೆಯನ್ನು ಸಮಾಧಿ ಮಾಡಲು ಹೊರಟಿದೆ’ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯ ಜಗದೀಶ ಕುಮಾರ್, ‘ಯಾವುದೇ ಪರಿಶೀಲನೆ ನಡೆಸದೆ ಕೈಗಾರಿಕೆಗಳು ಕೇಳಿದಷ್ಟು ಭೂಮಿಯನ್ನು ಸರ್ಕಾರ ಮಂಜೂರು ಮಾಡುತ್ತಿದೆ.
ಜಪಾನ್ನಲ್ಲಿ 50 ಎಕರೆ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸುವ ಸಂಸ್ಥೆ, ಇಲ್ಲಿ 5,000 ಎಕರೆ ಭೂಮಿ ಕೇಳುತ್ತದೆ’ ಎಂದು ಹೇಳಿದರು. ‘ಕೃಷಿಗೂ ಭೂಮಿ ಮೀಸಲಿಡಬೇಕು. ಅದರ ಭೂಬಳಕೆಯನ್ನು ಯಾವ ಕಾರಣಕ್ಕೂ ಪರಿವರ್ತನೆ ಮಾಡಬಾರದು’ ಎಂದು ಆಗ್ರಹಿಸಿದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ, ‘ಭೂಮಿ ಮಂಜೂರು ಮಾಡುವ ಮುನ್ನ ಭೂ ಲೆಕ್ಕ ತಪಾಸಣೆ ನಡೆಸಲಾಗುತ್ತದೆ’ ಎಂದು ಹೇಳಿದರು. ‘ಬಂಡವಾಳ ಆಕರ್ಷಿಸಲು ಕಾಯ್ದೆಗೆ ಸಣ್ಣ ಬದಲಾವಣೆ ಮಾಡಲಾಗಿದೆ’ ಎಂದು ಕಂದಾಯ ಸಚಿವರು ಸ್ಪಷ್ಟನೆ ನೀಡಿದರು. ಕೊನೆಗೆ ಸದನ ಮಸೂದೆಗೆ ಒಪ್ಪಿಗೆ ಸೂಚಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.