ಹುಣಸಗಿ (ಯಾದಗಿರಿ ಜಿಲ್ಲೆ) /ಬೆಳಗಾವಿ/ ಶಿವಮೊಗ್ಗ/ ಶ್ರೀರಂಗಪಟ್ಟಣ: ನಾರಾಯಣಪುರದ ಬಸವಸಾಗರ ಜಲಾಶಯ ಮಂಗಳವಾರ ಬಹುತೇಕ ಭರ್ತಿಯಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ ಕಾಯ್ದುಕೊಂಡು ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 492.252 ಮೀಟರ್. ಮಂಗಳವಾರ ಸಂಜೆ 491.000 ಮೀಟರ್ ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ ಇನ್ನೊಂದು ಮೀಟರ್ ಮಾತ್ರ ಉಳಿದಿದೆ.
ಜಲಾಶಯಕ್ಕೆ 1.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. 25 ಗೇಟ್ಗಳ ಮೂಲಕ 1.06 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿ ತೀರದ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಲಾಶಯದ ವಿಭಾಗೀಯ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ರಂಗರಾಮ್ ತಿಳಿಸಿದ್ದಾರೆ.
ಮಳೆ ಚುರುಕು: ಕೃಷ್ಣಾ ಮತ್ತು ಉಪನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮತ್ತೆ ಹೆಚ್ಚಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣ ಸಹ ಅಧಿಕವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಮತ್ತು ಜತ್ರಾಟ–ಭೀವಶಿ ನಡುವಿನ ಸೇತುವೆಗಳು ಮುಳುಗಡೆಯಾಗಿವೆ.
ತಾಲ್ಲೂಕಿನಲ್ಲಿ ಪ್ರವಾಹದಿಂದ ಮುಳುಗಡೆಯಾಗಿದ್ದ ಆರು ಸೇತುವೆಗಳ ಪೈಕಿ ಕಾರದಗಾ–ಭೋಜ್, ಮಲಿಕವಾಡ–ದತ್ತವಾಡ, ಕುನ್ನೂರ–ಭೋಜವಾಡಿ, ಅಕ್ಕೋಳ–ಸಿದ್ನಾಳ ಮತ್ತು ಜತ್ರಾಟ–ಭೀವಶಿ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ಜತ್ರಾಟ–ಭೀವಶಿ ನಡುವೆ ಹರಿಯುವ ವೇದಗಂಗಾ ನದಿಯ ಕೆಳಮಟ್ಟದ ಸೇತುವೆ ಸೋಮವಾರ ರಾತ್ರಿಯಷ್ಟೇ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ, ರಾತ್ರಿಯಿಂದೀಚೆಗೆ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಮಂಗಳವಾರ ಸಂಜೆ 4 ಗಂಟೆಯಿಂದ ಈ ಸೇತುವೆ ಮತ್ತೇ ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಲ್ಲೋಳ–ಯಡೂರ ಗ್ರಾಮಗಳ ನಡುವಿನ ಸೇತುವೆ 14 ದಿನಗಳಿಂದ ಮುಳುಗಡೆ ಸ್ಥಿತಿಯಲ್ಲಿಯೇ ಇದೆ.
24 ಗಂಟೆ ಅವಧಿಯಲ್ಲಿ ಕೃಷ್ಣೆಯ ಉಗಮಸ್ಥಾನ ಮಹಾಬಳೇಶ್ವರದಲ್ಲಿ 92 ಮಿ.ಮೀ., ಕೊಯ್ನಾ–131 ಮಿ.ಮೀ., ನವಜಾ–143 ಮಿ.ಮೀ ಮಳೆ ಸುರಿದಿದೆ.
ಸಾಧಾರಣ ಮಳೆ: ಖಾನಾಪುರ ತಾಲ್ಲೂಕಿನ ಕಣಕುಂಬಿ, ನಾಗರಗಾಳಿ, ಜಾಂಬೋಟಿ, ಭೀಮಗಡ ಹಾಗೂ ಲೋಂಡಾ ಅರಣ್ಯ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ. ಮಲಪ್ರಭಾ ನದಿಯ ಪಟ್ಟಣದ ಹಳೆಯ ಸೇತುವೆಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ. ಪಶ್ಚಿಮ ಭಾಗದ ಅರಣ್ಯ ಪ್ರದೇಶದಲ್ಲಿ ಹಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವ ಕಾರಣ ಕೆಲವು ಗ್ರಾಮಗಳ ನಡುವೆ ಸಮರ್ಪಕವಾದ ಸೇತುವೆ ಸಂಪರ್ಕ ಇಲ್ಲದ ಕಾರಣ ರಸ್ತೆ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
24 ಗಂಟೆ ಅವಧಿಯಲ್ಲಿ ಕಣಕುಂಬಿ 93.8 ಮಿ.ಮೀ ಹಾಗೂ ಲೋಂಡಾ ರೈಲ್ವೆ ಮಳೆ ಮಾಪನ ಕೇಂದ್ರದಲ್ಲಿ 47 ಮಿ.ಮೀ, ಮಳೆ ದಾಖಲಾಗಿದೆ.
ಜಿಟಿಜಿಟಿ ಮಳೆ: ಬೆಳಗಾವಿ ನಗರದಲ್ಲಿ ಮಂಗಳವಾರ ಜಿಟಿಜಿಟಿ ಮಳೆಯಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಸಂಜೆ ಭರ್ತಿಯಾಗಿದ್ದು, ಹೆಚ್ಚಿನ ನೀರನ್ನು ಮಾರ್ಕಂಡೇಯ ನದಿಗೆ ಬಿಡಲಾಗುತ್ತಿದೆ. ಹುಬ್ಬಳ್ಳಿ–ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.
ಹೆಚ್ಚು ನೀರು ಹೊರಕ್ಕೆ: ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ 1,08,501ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 15 ಕ್ರೆಸ್ಟ್ಗೇಟ್ಗಳಿಂದ 68,500 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ 42,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ 518.80 ಮೀಟರ್ವರೆಗೆ ನೀರು ಸಂಗ್ರಹವಾಗಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಮಂಗಳವಾರವೂ ಮಳೆ ಕ್ಷೀಣಿಸಿದ್ದು, ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ 172.08 ಅಡಿಗೆ ಏರಿದ್ದು, ಒಳ ಹರಿವು 13,987 ಕ್ಯೂಸೆಕ್ ಇದೆ. ಜಲಾಶಯ ಭರ್ತಿಯಾಗಲು ಇನ್ನೂ 13.02 ಅಡಿ ನೀರು ಸಂಗ್ರಹವಾಗಬೇಕಿದೆ.
ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1788.85 ಅಡಿ ಇದ್ದು, ಒಳ ಹರಿವು 22,472 ಕ್ಯೂಸೆಕ್ಗೆ ಕುಸಿದಿದೆ.
ಕೆ.ಆರ್.ಎಸ್: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದಲ್ಲಿ ಮಂಗಳವಾರ ಸಂಜೆ ವೇಳೆಗೆ 35.7 ಟಿಎಂಸಿ ನೀರು ಸಂಗ್ರಹವಾಗಿದೆ.
ಒಟ್ಟು 124.80 ಅಡಿ ಎತ್ತರದ ಜಲಾಶಯದ ಮಟ್ಟ 113.85 ಅಡಿಗೆ ತಲುಪಿದೆ. 49 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಳೆದ 24 ಗಂಟೆಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. 14,413 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, 7,970 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 123.08 ಅಡಿ ನೀರು ಸಂಗ್ರಹವಾಗಿತ್ತು. 53,444 ಕ್ಯೂಸೆಕ್ ಒಳ ಹರಿವು ಹಾಗೂ 38,813 ಕ್ಯೂಸೆಕ್ ಹೊರ ಹರಿವು ದಾಖಲಾಗಿತ್ತು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ, ಶಾಂತಳ್ಳಿ ಹೊರತುಪಡಿಸಿದರೆ ಜಿಲ್ಲೆಯ ಇತರ ಭಾಗಗಳಲ್ಲಿ ಮಂಗಳವಾರ ಮಳೆ ಕಡಿಮೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.