ಡೀಸೆಲ್ ದರ ಏರಿಕೆಯಾದ ತಕ್ಷಣ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ದರವೂ ಏರುತ್ತದೆ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ವಿಳಂಬಕ್ಕೆ ಅವಕಾಶವನ್ನೇ ನೀಡುವುದಿಲ್ಲ.
ಆದರೆ ಈಗ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಅದಕ್ಕೆ ತಕ್ಕಂತೆ ದರ ಬದಲಾವಣೆಗೆ ಸರ್ಕಾರ ಏಕೆ ಚಿಂತನೆ ಮಾಡುತ್ತಿಲ್ಲ? ಸರ್ಕಾರ ಈ ಕಡೆ ಗಮನಹರಿಸಿ ಬಸ್ ದರ ಇಳಿಸಲು ಕ್ರಮ ಕೈಗೊಳ್ಳಬೇಕು.
–ಶ್ರೀನಿವಾಸ ರಾಂಪುರ, ಚನ್ನಪಟ್ಟಣ
ವಿ.ವಿ : ಭ್ರಷ್ಟತೆಗೆ ಕಡಿವಾಣ
ಡಿಡಿಪಿಐ, ಬಿಇಒಗೆ ಸ್ವಂತ ಜಿಲ್ಲೆ ಇಲ್ಲ ಎಂಬ ಸುದ್ದಿಗೆ ನನ್ನ ಪ್ರತಿಕ್ರಿಯೆ (ಪ್ರ.ವಾ.ಅ.೨೦). ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ನಿರ್ವಹಿಸಲು ಸ್ವಂತ ಜಿಲ್ಲೆ ಅಥವಾ ಸ್ವಕ್ಷೇತ್ರ ಅಡ್ಡಿಯಾದೀತು ಹಾಗೂ ಭ್ರಷ್ಟಾಚಾರ ತಡೆಯಲು ಸಾಧ್ಯ ವಾಗಲಿಕ್ಕಿಲ್ಲ ಎಂಬ ದೃಷ್ಟಿಯಿಂದ ಈ ಕಾನೂನು... ಎಂದು ಭಾವಿಸಿದ್ದೇನೆ.
ಈ ಚಿಂತನೆ ಸರಿಯಾದದ್ದೇ. ಆದರೆ ಉನ್ನತ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ವಿಚಾರದಲ್ಲೂ ಅವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ.ವಿಯಲ್ಲೇ ಅವರನ್ನು ಕುಲಪತಿಗಳನ್ನಾಗಿ ನೇಮಿಸದೇ ರಾಜ್ಯದ ಬೇರೆ ಬೇರೆ ವಿ.ವಿಗಳಿಗೆ ನೇಮಕ ಮಾಡಿ ದಲ್ಲಿ ಭ್ರಷ್ಟಾಚಾರ ಹಾಗೂ ಜಾತಿ ಲಾಬಿ ತಡೆಯಲು ಸ್ವಲ್ಪ ಮಟ್ಟಿಗೆ ಸಾಧ್ಯವಾದೀತು.
ವಿ.ವಿ.ಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಸೋತಲ್ಲಿ, ಉನ್ನತ ಶಿಕ್ಷಣದ ಬಗ್ಗೆ ಜನರು ನಂಬಿಕೆಯನ್ನೇ ಕಳೆದುಕೊಳ್ಳಬಹುದು.
–ಪ್ರೊ.ಎಸ್.ಪಿ.ಗೌಡರ, ಹಿರೇಕೆರೂರ