ಹಿರಿಯೂರು: ತಾಲ್ಲೂಕಿನ ಮೇಟಿಕುರ್ಕೆ ಸಮೀಪ ಬುಧವಾರ ಬೆಳಗಿನ ಜಾವ ಸಂಭವಿಸಿದ ಖಾಸಗಿ ಬಸ್ ಅವಘಡದಲ್ಲಿ ಗುರುತು ಹಿಡಿಯಲು ಸಾಧ್ಯವಾಗದಷ್ಟು ಕರಕಲಾದವರು ತಮ್ಮ ಸಂಬಂಧಿ ಇರಬಹುದೆಂದು ಐವರ ರಕ್ತ ಸಂಬಂಧಿಗಳು ನೀಡಿರುವ ಡಿಎನ್ಎ ಮಾದರಿಯನ್ನು ಪರೀಕ್ಷೆಗೆಂದು ಬೆಂಗಳೂರಿಗೆ ಕಳುಹಿಸಲಾಗಿದೆ.
ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ರವಿಕುಮಾರ್ ಮತ್ತು ನಾಗರಾಜ್, ದಾವಣಗೆರೆ ನಗರದ ರಫೀಕ್ ಮತ್ತು ನಾಗರಾಜ್, ಬೆಂಗಳೂರು ಶಿವಾಜಿ ನಗರದ ರಾಜೇಶ್ ಕಾಣೆಯಾಗಿದ್ದಾರೆಂದು ಅವರ ಸಂಬಂಧಿಕರು ನಗರ ಠಾಣೆ ಪೊಲೀಸರನ್ನು ಭೇಟಿ ಮಾಡಿದ್ದಾರೆ.
ತಮ್ಮ ಡಿಎನ್ಎ ಮಾದರಿಯನ್ನು ವೈದ್ಯರಿಗೆ ನೀಡಿದ್ದಾರೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್ ತಿಳಿಸಿದ್ದಾರೆ.
ಇನ್ನೊಂದು ಮೃತದೇಹಕ್ಕೆ ಸಂಬಂಧಿಸಿದಂತೆ ಇದು ತಮ್ಮ ಕಡೆಯವರಿರಬಹುದು ಎಂದು ಶಂಕಿಸಿ ಯಾರೂ ಬಂದಿಲ್ಲ. ಆರೂ ಮೃತ ದೇಹಗಳನ್ನು ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಡಲಾಗಿದೆ.
ದಾವಣಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್ ಬುಧವಾರ ಬೆಳಗಿನ ಜಾವ ಬೆಂಕಿಗಾಹುತಿಯಾಗಿ ಆರು ಮಂದಿ ಸಜೀವ ದಹನಗೊಂಡಿದ್ದರು.
ಮೂವರು ಚೇತರಿಕೆ (ದಾವಣಗೆರೆ ವರದಿ): ಬಸ್ ದುರಂತದಲ್ಲಿ ಗಂಭೀರ ಗಾಯಗೊಂಡು ನಗರದ ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರ ಪೈಕಿ ಮೂವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
ಗಂಭೀರ ಗಾಯಗೊಂಡಿರುವ ಪುರೋಹಿತ ಸಂಜಯ ಆಚಾರ್ಯ ಹಾಗೂ ಅವರ ಪತ್ನಿ ಶ್ರೀಪ್ರಿಯಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜತೆಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಮದ್ ಮುಸ್ತಾಫಾ, ಮಹಮದ್ ಸುಹೇಬ್ ಹಾಗೂ ಕಾಶೀನಾಥ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.