ನವದೆಹಲಿ (ಪಿಟಿಐ): ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಮದನ ಮೋಹನ ಮಾಳವೀಯ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕರು ಕೂಡ. ಸ್ವಾತಂತ್ರ್ಯ ಆಂದೋಲನದಲ್ಲಿ ಸೌಮ್ಯವಾದಿ ಹಾಗೂ ತೀವ್ರವಾದಿ ಬಣಗಳ ನಡುವಣ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ ಬಹುಮುಖಿ ವ್ಯಕ್ತಿತ್ವದ ಮುತ್ಸದ್ದಿ ಅವರು.
ಹಿಂದೂ ರಾಷ್ಟ್ರೀಯತೆಯ ಕಟ್ಟಾ ಪ್ರತಿಪಾದಕರಾದ ಮಾಳವೀಯ ಅವರು ಹಿಂದೂ ಮಹಾಸಭಾದ ಆರಂಭ ಕಾಲದ ಮುಖಂಡರೂ ಹೌದು. ಉತ್ತಮ ಸಂಸದೀಯ ಪಟುವಾಗಿದ್ದರಲ್ಲದೆ ಸಾಮಾಜಿಕ ಸುಧಾರಕರಾಗಿಯೂ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ನಲ್ಲಿ ಅರ್ಧ ಶತಮಾನ ಕಾಲ ಸೇವೆ ಸಲ್ಲಿಸಿದ್ದ ಅವರು, 1909 ರಿಂದ 1932ರ ನಡುವೆ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.
1930ರಲ್ಲಿ ಮೋಹನದಾಸ್ ಕರಮಚಂದ್ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹ ಹಾಗೂ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡು ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಪ್ರಯಾಗ್ನಲ್ಲಿ (ಅಲಹಾಬಾದ್) 1861ರಲ್ಲಿ ಸುಶಿಕ್ಷಿತ ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿದ ಅವರು ಅಲಹಾಬಾದ್ ಜಿಲ್ಲಾ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿಜೀವನ ಆರಂಭಿಸಿದರು.
ಶಿಕ್ಷಕ ವೃತ್ತಿಯೊಟ್ಟಿಗೆ ವ್ಯಾಸಂಗವನ್ನೂ ಮುಂದುವರಿಸಿ ಎಲ್ಎಲ್ಬಿ ಪದವಿ ಪಡೆದರು. ನಂತರ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸಿದರು. ವೃತ್ತಿಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇದ್ದ ಸಂದರ್ಭದಲ್ಲೇ ತಮ್ಮ 50ನೇ ಹುಟ್ಟಿದ ದಿನದಂದು ವಕೀಲಿಕೆಯನ್ನು ಕೈಬಿಟ್ಟು ದೇಶಸೇವೆಯಲ್ಲಿ ತೊಡಗಲು ನಿರ್ಧರಿಸಿದ್ದರು.
1909ರಲ್ಲಿ ಆರಂಭವಾಗಿ ಅಲಹಾಬಾದ್ನಿಂದ ಪ್ರಕಟವಾಗುತ್ತಿದ್ದ ಅತ್ಯಂತ ಪ್ರಭಾವಿ ಇಂಗ್ಲಿಷ್ ದೈನಿಕ ‘ದಿ ಲೀಡರ್’ನ ಸ್ಥಾಪಕರೆಂಬುದು ಅವರ ಮತ್ತೊಂದು ಅಗ್ಗಳಿಕೆ. 1937ರಲ್ಲಿ ಸಕ್ರಿಯ ರಾಜಕಾರಣ ತೊರೆದ ಅವರು ನಂತರ ತಮ್ಮನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯಗಳಿಗಾಗಿ ಅರ್ಪಿಸಿಕೊಂಡರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹದ ಬೆಂಬಲಿಗರಾಗಿದ್ದ ಅವರು ಬಾಲ್ಯ ವಿವಾಹದ ವಿರೋಧಿಯಾಗಿದ್ದರು. 1946ರಲ್ಲಿ ಕೊನೆಯುಸಿರೆಳೆದರು.
ಬಾಳಾ ಠಾಕ್ರೆಗೆ ‘ಭಾರತ ರತ್ನ’: ಶಿವಸೇನಾ ಆಗ್ರಹ
ಮುಂಬೈ (ಪಿಟಿಐ): ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರಿಗೆ ‘ಭಾರತ ರತ್ನ’ ನೀಡಬೇಕು ಎಂದು ಪಕ್ಷವು ಬುಧವಾರ ಆಗ್ರಹಿಸಿದೆ. ‘ವಾಜಪೇಯಿ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಖುಷಿಯ ವಿಷಯ. ಆದರೆ ಬಾಳಾ ಠಾಕ್ರೆ ಕೂಡ ಇದಕ್ಕೆ ಅರ್ಹರು’ ಎಂದು ಸೇನಾದ ಹಿರಿಯ ನಾಯಕ ಮನೋಹರ್್ ಜೋಷಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.