ಶಿವಮೊಗ್ಗ: ಸಾಮಾಜಿಕ ಬಾಂಧವ್ಯ ವೃದ್ಧಿಗೆ ಕಾನೂನು ಸಾಕ್ಷರತೆಯ ಅರಿವಿನ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶರಶ್ಚಂದ್ರ ಬಿ. ಅಂಗಡಿ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ವಾರ್ತಾ ಇಲಾಖೆ ಸಂಯುಕ್ತವಾಗಿ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕಾನೂನು ಸಾಕ್ಷರತಾ ರಥಯಾತ್ರೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಪರಸ್ಪರ ಬಾಂಧವ್ಯಗಳು ಸುಮಧುರವಾಗಿರಬೇಕು, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ವ್ಯಾಜ್ಯಗಳು ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಕಾನೂನು ಸಾಕ್ಷರತೆಯ ಜ್ಞಾನ ಹೆಚ್ಚಾದಂತೆ ಬಾಂಧವ್ಯ ವೃದ್ಧಿಸಲಿವೆ ಎಂದರು.
ಸಾರ್ವಜನಿಕರಿಗೆ ಸಣ್ಣ-ಪುಟ್ಟ ವ್ಯಾಜ್ಯಗಳ ವಿಲೇವಾರಿ ಹಾಗೂ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸಾಕ್ಷರತಾ ರಥ ಸಾರ್ವಜನಿಕರ ಪ್ರದೇಶಗಳಲ್ಲಿಯೇ ಸಂಚರಿಸಿ, ಜಾಗೃತಿ ಮೂಡಿಸಲಿದೆ. ಈ ರಥದಲ್ಲಿ ಒಬ್ಬ ನ್ಯಾಯಾಧೀಶರು, ಇಬ್ಬರು ವಕೀಲರನ್ನು ನಿಯೋಜಿಸಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸಣ್ಣ-ಪುಟ್ಟ ವ್ಯಾಜ್ಯಗಳನ್ನು ರಥಯಾತ್ರೆ ಸಂದರ್ಭದಲ್ಲಿಯೇ ಬಗೆಹರಿಸಲು ಸಾಧ್ಯವಾದಲ್ಲಿ ಮಧ್ಯಸ್ಥಿಕೆಯಿಂದ ಇತ್ಯರ್ಥಗೊಳಿಸಲಾಗುವುದು. ಇಲ್ಲವೇ ಕಾನೂನಿನ ಅರಿವು ಮೂಡಿಸಲಾಗುವುದು ಎಂದರು.
ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಎಂ. ನಂಜುಂಡಸ್ವಾಮಿ ಮಾತನಾಡಿ, ಸಾಕ್ಷರತೆಯ ಕೊರತೆಯಿರುವ ದೇಶದಲ್ಲಿ ಕಾನೂನಿನ ಅರಿವು ಹೆಚ್ಚಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕಾನೂನಿನ ಸಾಕ್ಷರತೆಯನ್ನು ಹೊಂದಬೇಕೆಂಬ ಉದ್ದೇಶದಿಂದ ಸಾರ್ವಜನಿಕರ ಮನೆ ಬಾಗಿಲಿಗೆ ಕಾನೂನು ರಥಯಾತ್ರೆ ಸಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ.ಭಟ್, ನ್ಯಾಯಾಧೀಶ ವೈ.ವಿಜಯ್ಕುಮಾರ್, ವಾರ್ತಾಧಿಕಾರಿ ಜಿ.ಹಿಮಂತರಾಜು ಮತ್ತಿತರರು ಉಪಸ್ಥಿತರಿದ್ದರು.