‘ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನೆರೆ ರಾಷ್ಟ್ರವನ್ನಲ್ಲ’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಹೇಳಿದ್ದರು. ರಾಷ್ಟ್ರದ ವಿದೇಶಾಂಗ ನೀತಿಯ ರಚನೆಗೆ ಈ ಮಾತು ದಿಕ್ಸೂಚಿ. ಹೀಗಾಗಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿದ್ದಂತಹ ನರೇಂದ್ರ ಮೋದಿ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಆಯ್ದುಕೊಂಡ ರಾಷ್ಟ್ರ ಭೂತಾನ್.
ಭೂತಾನ್ ಜೊತೆಗೆ ಭಾರತದ ಸಂಬಂಧ ಸದಾ ಸೌಹಾರ್ದದ ನೆಲೆಯಲ್ಲಿದೆ. ಹಿಮಾಲಯದ ತಪ್ಪಲಲ್ಲಿರುವ ಈ ಚಿಕ್ಕ ನೆರೆ ರಾಷ್ಟ್ರದ ಅಭಿವೃದ್ಧಿಗೆ 1961ರಿಂದ ಭಾರತ ಹಣಕಾಸು ನೆರವು ನೀಡುತ್ತಲೇ ಬಂದಿದೆ. ಈಗ ಮತ್ತೆ 2018ರವರೆಗೆ ₨4500 ಕೋಟಿ ಹಣಕಾಸು ನೆರವು ನೀಡಲು ಭಾರತ ಬದ್ಧವಾಗಿದೆ. ಭೂತಾನ್ ಜತೆಗಿನ ಈ ಹಳೆಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮೋದಿಯವರ ಭೇಟಿ ನೆರವಾಗಿದೆ. ಜೊತೆಗೆ ಹೊಸ ವಲಯಗಳಲ್ಲಿ ಬಾಂಧವ್ಯ ವೃದ್ಧಿಗೂ ಅವಕಾಶಗಳ ಬಾಗಿಲು ತೆರೆದಂತಾಗಿದೆ. ಭೂತಾನ್ ಜತೆಗಿನ ಮೈತ್ರಿಗೆ ಚೀನಾ ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಮೋದಿಯವರ ಈ ಭೇಟಿ ಮಹತ್ವದ್ದು.
ದಕ್ಷಿಣ ಏಷ್ಯಾ ವಲಯದಲ್ಲಿ ಭಾರತ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಚೀನೀಯರಿಂದ ಹಣಕಾಸು ನೆರವು ಪಡೆದುಕೊಂಡು ನಿರ್ಮಿಸಲಾದ ಬಂದರುಗಳು ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಲ್ಲಿ ತಲೆ ಎತ್ತುತ್ತಿವೆ. ಅನೇಕ ಹಣಹೂಡಿಕೆ ಪ್ರಸ್ತಾವಗಳೊಂದಿಗೆ ಭೂತಾನ್ ಅನ್ನು ಒಲಿಸಿಕೊಳ್ಳಲೂ ಚೀನಾ ಯತ್ನಿಸುತ್ತಿದೆ. ಈ ಎಲ್ಲಾ ವಿಚಾರಗಳನ್ನು ಜತೆಗಿಟ್ಟು ಕೊಂಡೇ ಭೂತಾನ್ಗೆ ಮೋದಿ ಭೇಟಿಯನ್ನು ನಾವು ವಿಶ್ಲೇಷಿಸಬೇಕಾಗುತ್ತದೆ. ಆರ್ಥಿಕ ವ್ಯವಹಾರಗಳಷ್ಟೇ ಅಲ್ಲ ಆಯಕಟ್ಟಿನ ಬಲದ ವಿಚಾರವೂ ಇಲ್ಲಿ ಮುಖ್ಯ.
ಹಿಮಾಲಯ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾವ, ಭೂತಾನ್ ಹಾಗೂ ಭಾರತದ ಈಶಾನ್ಯ ರಾಜ್ಯಗಳ ಮಧ್ಯೆ ಜಂಟಿ ಕ್ರೀಡಾ ಕೂಟಗಳ ಏರ್ಪಾಡು ಹಾಗೂ ಭೂತಾನ್ನ ವಿವಿಧ ಜಿಲ್ಲೆಗಳಲ್ಲಿ ಇ–ಲೈಬ್ರರಿಗಳನ್ನು ಸ್ಥಾಪಿಸುವ ವಿಚಾರ ದೀರ್ಘಾವಧಿಯಲ್ಲಿ ಪ್ರಮುಖ ಪ್ರಭಾವ ಬೀರುವಂತಹ ಸೌಮ್ಯಶಕ್ತಿಯ (ಸಾಫ್ಟ್ ಪವರ್) ರಾಜತಾಂತ್ರಿಕತೆಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮೋದಿ ಭೇಟಿಗೆ ಭೂತಾನ್ ಸಹ ದೊಡ್ಡ ಸ್ವಾಗತವನ್ನೇ ಕೋರಿದೆ.
ಭೂತಾನ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವಂತಹ ಅಪರೂಪದ ಗೌರವವೂ ಮೋದಿಗೆ ಸಂದಿದೆ. ಭೂತಾನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ಭಾರತ ನೀಡಿಕೊಂಡು ಬಂದಿದೆ. ಇದು ಬರೀ ಒಂದಿಷ್ಟು ಹಣಕಾಸಿನ ನೆರವಿನ ಮಾತಲ್ಲ.
ಇದರ ಮೌಲಿಕತೆಯನ್ನು ನಾವು ಗ್ರಹಿಸಬೇಕು. ಹಾಗೆಯೇ ಮೋದಿ ಭೇಟಿ ಸಂದರ್ಭದಲ್ಲೇ ಹೊಸ ಸುಪ್ರೀಂಕೋರ್ಟ್ ಸಮುಚ್ಚಯ ಲೋಕಾರ್ಪಣೆ ಮಾಡಿದುದರ ಮಹತ್ವವೂ ದೊಡ್ಡದು. ಅವರ ‘ಬಿ4ಬಿ’ ಎಂದರೆ ‘ಭೂತಾನ್ಗಾಗಿ ಭಾರತ, ಭಾರತಕ್ಕಾಗಿ ಭೂತಾನ್’ ಎಂಬ ಘೋಷವಾಕ್ಯಕ್ಕೆ ಸಕಾರಾತ್ಮಕ ಸ್ಪಂದನ ದೊರೆತಿದೆ. ಜಲ ವಿದ್ಯುತ್ ಉತ್ಪಾದನೆಗೆ ಭೂತಾನ್ ಹೆಸರಾದುದು. ಈ ಕ್ಷೇತ್ರದಲ್ಲಿ ಸಹಕಾರ ವೃದ್ಧಿಗೆ ಇರುವ ಅಪಾರ ಅವಕಾಶಗಳನ್ನು ಭಾರತ ಬಳಸಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.