ಅಯೋಧ್ಯೆ, ಉತ್ತರ ಪ್ರದೇಶ(ಪಿಟಿಐ): ಬಾಬರಿ ಮಸೀದಿ–ರಾಮ ಜನ್ಮಭೂಮಿ ಪ್ರಕರಣದ ಹಿರಿಯ ಅರ್ಜಿದಾರ ಹಶಿಮ್ ಅನ್ಸಾರಿ ಬುಧವಾರ ನಿಧನರಾದರು.
95 ವರ್ಷದ ಅನ್ಸಾರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಂದೆಯವರು ಸ್ವಗೃಹದಲ್ಲೇ ಕೊನೆಯುಸಿರೆಳೆದರು ಎಂದು ಪುತ್ರ ಇಕ್ಬಾಲ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಜನಿಸಿದ ಅನ್ಸಾರಿ ಬಾಬರಿ ಮಸೀದಿ– ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಲಯದ ಮೆಟ್ಟಿಲೇರಿದವರಲ್ಲಿ ಮೊದಲಿಗರು. ಈ ಕುರಿತು ಅವರು 1949ರಲ್ಲಿ ಫೈಜಾಬಾದ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅಯೋಧ್ಯೆ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಫೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರಿನಲ್ಲಿ ಹೆಸರಿಸಲಾಗಿದ್ದ ಪ್ರಮುಖ ಆರು ಪ್ರತಿವಾದಿಗಳಲ್ಲಿ ಅನ್ಸಾರಿ ಒಬ್ಬರಾಗಿದ್ದರು.