ನವದೆಹಲಿ: ಬಾರ್ನಲ್ಲಿ ನರ್ತಕಿಯರು ಕಾನೂನಿನ ಅಡಿಯಲ್ಲಿ ಏಕೆ ತಮ್ಮ ವೃತ್ತಿಯನ್ನು ಮುಂದುವರಿಸಬಾರದು ಎಂಬುದರ ಬಗ್ಗೆ ವಿವರಣೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ತನ್ನ ಹಿಂದಿನ ಆದೇಶವನ್ನು ಅನುಷ್ಠಾನಗೊಳಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
‘ವ್ಯಕ್ತಿ ಸ್ವಾತಂತ್ರ್ಯದ ಆಚರಣೆಯು ಆತ ಅಥವಾ ಆಕೆ ತನ್ನ ವೃತ್ತಿಯನ್ನು ಮುಂದುವರಿಸುವ ಸ್ವಾಭಾವಿಕ ಹಕ್ಕು. ಅದು ಯಾವುದೇ ಕಾನೂನಿಗೆ ವಿರುದ್ಧವಾಗಿದ್ದರೆ ಅಥವಾ ಯಾವುದೇ ಕಾನೂನಿಗೆ ಹಾನಿ ಉಂಟು ಮಾಡುವಂತಿದ್ದರೆ ಮಾತ್ರ ಪ್ರಶ್ನಾರ್ಹ. ಅನೇಕ ವಿಧಗಳಲ್ಲಿ ನೃತ್ಯವು ಗೌರವಯುತ ವೃತ್ತಿಯಾಗಿದೆ’ ಎಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಫ್ರಫುಲ್ಲ ಸಿ. ಪಂತ್ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿತು.
ಅಕ್ಟೋಬರ್ 15ರಂದು ತಾನು ನೀಡಿದ ಆದೇಶವನ್ನು ಎರಡು ವಾರದಲ್ಲಿ ಜಾರಿಗೆ ತರಲು ಮತ್ತು ಡಾನ್ಸ್ ಬಾರ್ಗಳನ್ನು ತೆರಯಲು ಬಾಕಿ ಉಳಿದಿರುವ 60ಕ್ಕೂ ಹೆಚ್ಚು ಪರವಾನಗಿ ಅರ್ಜಿಗಳ ಕುರಿತು ನಿರ್ಧರಿಸುವಂತೆ ಪೀಠ ಸರ್ಕಾರಕ್ಕೆ ಸೂಚಿಸಿತು.
ಡಾನ್ಸ್ಬಾರ್ಗಳು ಕೆಡಕನ್ನು ಉಂಟುಮಾಡುತ್ತಿವೆ. ಯುವಜನತೆ ಇಂತಹ ಬಾರ್ಗಳಿಗೆ ಬಂದು ಕುಡಿದು ನರ್ತಿಸುತ್ತಾರೆ. ಇದರಿಂದ ಅವರ ವರ್ತನೆಯಲ್ಲಿಯೂ ಬದಲಾವಣೆ ಆಗುತ್ತದೆ ಎಂದು ವಾದಿಸಿದ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ, ಸರ್ಕಾರದ ನಿಲುವನ್ನು ತಿಳಿಸಿ, ಹೊಸ ಅರ್ಜಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದರು.
ಪರಿಸ್ಥಿತಿ ವಿವರಿಸಲು ಸಮಗ್ರ ವಿಚಾರಣೆ ನಡೆಸುವ ಅಗತ್ಯವಿದೆ ಎಂದ ಸಾಳ್ವೆ, ಇಂತಹ ಬಾರ್ಗಳಲ್ಲಿ ಇದ್ದ 75 ಸಾವಿರ ನೃತ್ಯಗಾರ್ತಿಯರಿಗೆ ಏನಾಯಿತು ಎಂಬುದರ ಮಾಹಿತಿಯನ್ನು ಸರ್ಕಾರ ನ್ಯಾಯಾಲಯದ ಮುಂದೆ ಇರಿಸಲಿದೆ ಎಂದರು.