ಬೆಂಗಳೂರು: ‘ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಲು ಹಾಗೂ ರಂಗ ಚಟುವಟಿಕೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಏ.12ರಿಂದ ಮೇ 10 ರವರೆಗೆ ‘ರಂಗ ರುಚಿ’ ಹೆಸರಿನಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಬಾಲಭವನದ ಅಧ್ಯಕ್ಷೆ ಭಾವನಾ ಅವರು ತಿಳಿಸಿದರು.
ಬಾಲಭವನದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಶಿಬಿರದಲ್ಲಿ ಮಕ್ಕಳಿಗೆ ಕಥೆ, ನಾಟಕ, ಸಾಹಿತ್ಯ, ಆಟ-ಪಾಠ, ತಾಳ- ಕುಣಿತ, ಸಂಗೀತ, ಬಣ್ಣ-ಮುಖವಾಡ, ನೃತ್ಯ-ಗೆಜ್ಜೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಕಲಿಸಿ ಅವರಲ್ಲಿ ಅಭಿರುಚಿ ಮೂಡಿಸುವುದು ಶಿಬಿರದ ಉದ್ದೇಶವಾಗಿದೆ’ ಎಂದರು.
‘ರಾಜಾಜಿನಗರ, ಕೋಲ್ಸ್ಪಾರ್ಕ್ ಮತ್ತು ಜಯನಗರದಲ್ಲಿರುವ ಮಿನಿ ಬಾಲಭವನಗಳಲ್ಲಿ ಬೇಸಿಗೆ ಶಿಬಿರಗಳು ನಡೆಯಲಿವೆ. 5ರಿಂದ 7 ವರ್ಷದ ಒಳಗಿನ ಚಿಣ್ಣರಿಗೆ ಶಿಬಿರದಲ್ಲಿ ಯೋಗ, ಚಿತ್ರಕಲೆ ಹಾಗೂ ನೃತ್ಯವನ್ನು ಹೇಳಿ ಕೊಡಲಾಗುವುದು. ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡಯಲಿದೆ’ ಎಂದರು.
‘ಕಬ್ಬನ್ ಉದ್ಯಾನದ ಬಾಲಭವನದಲ್ಲಿ ಈ ಬಾರಿಯ ಬೇಸಿಗೆ ಶಿಬಿರದಲ್ಲಿ ನಗರದ ಹೊರವಲಯದ 300 ಮಕ್ಕಳು ಪಾಲ್ಗೊಳ್ಳಲು ಅವಕಾಶ್ರನೀಡಲಾಗಿದೆ. ಈ ಪೈಕಿ 150 ಬಡ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ. ವಿಶೇಷವಾಗಿ 25 ಮದರಸ ಮಕ್ಕಳನ್ನು ಶಿಬಿರಕ್ಕೆ ಕರೆ ತರಲಾಗುತ್ತಿದೆ. ಇನ್ನುಳಿದ ಮಕ್ಕಳಿಗೆ ₹250 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ’ ಎಂದರು. ‘ನಗರದಲ್ಲಿ ಮಾತ್ರವಲ್ಲದೇ ಈ ಬಾರಿ ಮೈಸೂರು ಮತ್ತು ಶಿವಮೊಗ್ಗ ರಂಗಾಯಣಗಳಲ್ಲಿ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ.
ಶಿಬಿರಕ್ಕೆ 100 ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಈ ಪೈಕಿ 50 ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುವುದು’ ಎಂದರು. ‘ಮೈಸೂರು ರಂಗಾಯಣದಲ್ಲಿ ಏ.10ರಿಂದ ಮೇ 4ರವರೆಗೆ ಹಾಗೂ ಶಿವಮೊಗ್ಗ ರಂಗಾಯಣದಲ್ಲಿ ಏ.10ರಿಂದ ಮೇ 10ರವರೆಗೆ ಬೇಸಿಗೆ ಶಿಬಿರಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು. ‘ಪೋಷಕರು ಮಕ್ಕಳನ್ನು ಶಿಬಿರಕ್ಕೆ ಸೇರಿಸಲು ಮಕ್ಕಳ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದು’ ಎಂದರು.
ಮಾಹಿತಿಗೆ: 22864189, 22861423.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.