ಬೆಂಗಳೂರು: ಮನೆಗೆ ಹೋಗುವ ಬಸ್ ತಪ್ಪಿಸಿಕೊಂಡು ವಿಲ್ಸನ್ಗಾರ್ಡನ್ ಬಳಿಯ ಲಕ್ಕಸಂದ್ರದ ಬಾಲಮಂದಿರ ಸೇರಿದ್ದ 14 ವರ್ಷದ ಬಾಲಕನನ್ನು ಶೌಚಾಲಯ ಸ್ವಚ್ಛಗೊಳಿಸಲು ನಿರಾಕರಿಸಿದ ಕಾರಣಕ್ಕೆ ಅಲ್ಲಿನ ಸಿಬ್ಬಂದಿ ಅಮಾನವೀಯವಾಗಿ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬಾಲಮಂದಿರದ ಸಿಬ್ಬಂದಿ ರಮೇಶ್ ಎಂಬಾತನನ್ನು ವಿಲ್ಸನ್ಗಾರ್ಡನ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ದೊಡ್ಡಬೊಮ್ಮಸಂದ್ರದ ಬಾಲಕ ಯಶವಂತಪುರದ ಆದರ್ಶ ಬಾಲಕರ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ.
ಆಗಸ್ಟ್ 19ರಂದು ಶಾಲೆ ಮುಗಿಸಿಕೊಂಡು ಸಂಜೆ ಮನೆಗೆ ಹೋಗುವಾಗ ಬಸ್ ತಪ್ಪಿಸಿಕೊಂಡು ಬೇರೆ ಬಸ್ ಹತ್ತಿ ಮೆಜೆಸ್ಟಿಕ್ಗೆ ಹೋಗಿದ್ದಾನೆ. ಆಗ ಡಾನ್ ಬಾಸ್ಕೊ ಸಂಸ್ಥೆಯ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಬಾಲಕನನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಮೇಶ್, ಬಾಲಕನಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ. ಬಾಲಕ ಅದಕ್ಕೆ ನಿರಾಕರಿಸಿದ್ದರಿಂದ ಬೆಲ್ಟ್ ಮತ್ತು ಪಿವಿಸಿ ಪೈಪ್ನಿಂದ ಆತನ ಮೊಣಕಾಲು, ಬೆನ್ನು, ತೊಡೆ ಮತ್ತಿತರ ಕಡೆ ಥಳಿಸಿದ್ದಾನೆ. ನಂತರ ಬಾಲಕನಿಗೆ ಊಟ ನೀಡದೆ ಶೌಚಾಲಯದಲ್ಲಿ ಕೆಲ ಕಾಲ ಕೂಡಿ ಹಾಕಲಾಗಿದೆ. ಘಟನೆಯಲ್ಲಿ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಆಪ್ತ ಸಮಾಲೋಚನೆಗಾಗಿ ಹಾಜರುಪಡಿಸಿದಾಗ ಬಾಲಕನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ
ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮಿತಿಯ ಸದಸ್ಯರು ಬಾಲಕನ ತಾಯಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಕೂಡಲೇ ಬಾಲಕನ ತಾಯಿ ಆತನನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಸೇರಿಸಿದ್ದಾರೆ. ಆತನ ತಾಯಿ ನೀಡಿದ ದೂರು ಆಧರಿಸಿ ರಮೇಶ್ನನ್ನು ಬಂಧಿಸಲಾಯಿತು. ನಂತರ ಸಂಜೆ ವೇಳೆಗೆ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮದ ಮೇಲೆ ದೂರು: ಬಾಲಕನಿಗೆ ಚಿಕಿತ್ಸೆ ನೀಡಿದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕಿ ಡಾ.ಪ್ರೇಮಲತಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಬಾಲಕನನ್ನು ಆತನ ತಾಯಿ, ಬಾಲಮಂದಿರದ ಸಿಬ್ಬಂದಿ ಬುಧವಾರ (ಆ. 20) ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನಿಗೆ ಪಿವಿಸಿ ಪೈಪ್ನಿಂದ ಬೆನ್ನು, ತೊಡೆ, ಭುಜದ ಮೇಲೆ ಹೊಡೆಯಲಾಗಿದೆ. ಬಾಲಕನು ತೀವ್ರ ನೋವಿನಿಂದ ಬಳಲುತ್ತಿದ್ದ’ ಎಂದು ತಿಳಿಸಿದರು.
‘ಬಾಲಕನಿಗೆ ಚಿಕಿತ್ಸೆಯ ಜತೆಗೆ ಆಪ್ತಸಮಾಲೋಚನೆಯ ಅಗತ್ಯವಿತ್ತು. ಆತ ಮಾನಸಿಕವಾಗಿ ಬಹಳ ಕುಗ್ಗಿದ್ದ. ದೇಹದ ವಿವಿಧ ಭಾಗಗಳಲ್ಲಿ ಗಾಯವಾಗಿದ್ದರಿಂದ ನೋವು ಅನುಭವಿಸುತ್ತಿದ್ದ’ ಎಂದರು. ‘ಸುವರ್ಣ ಮಾಧ್ಯಮ’ದವರು ಆಸ್ಪತ್ರೆಯ ಅನುಮತಿ ಪಡೆಯದೆ, ಬಾಲಕ ಮತ್ತು ಆತನ ತಾಯಿಯನ್ನು ಸ್ಟುಡಿಯೊಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ, ಕೆಲಸಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಆ ವಾಹಿನಿಯ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ’ ಎಂದು ಅವರು ಹೇಳಿದರು.
ಇತರ ಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ
‘ಬಾಲಮಂದಿರದಲ್ಲಿ ಇತರ ಮಕ್ಕಳ ಮೇಲೂ ಅಲ್ಲಿನ ಸಿಬ್ಬಂದಿಯಿಂದ ಹಲ್ಲೆ ನಡೆಯುತ್ತಿದೆ. ಮಾತು ಕೇಳದ ಮಕ್ಕಳನ್ನು ಸಿಬ್ಬಂದಿ ಅಮಾನುಷವಾಗಿ ಥಳಿಸುತ್ತಾರೆ. ಆದರೆ, ಭಯದಿಂದ ಆ ಮಕ್ಕಳು ಹೇಳುತ್ತಿಲ್ಲ’
–ಥಳಿತಕ್ಕೊಳಗಾದ ಬಾಲಕ
ಸಿಬ್ಬಂದಿಗೆ ಶಿಕ್ಷೆ ಆಗಬೇಕು
‘ಬಾಲಮಂದಿರದ ಸಿಬ್ಬಂದಿ ತಾವು ಹೇಳಿದ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಬಾಲಕನ್ನು ಅಮಾನವೀಯವಾಗಿ ಥಳಿಸಿದ್ದಾರೆ. ತಮ್ಮ ಮಕ್ಕಳಾಗಿದ್ದರೆ ಅವರು ಹೀಗೆಯೆ ಮಾಡುತ್ತಿದ್ದರೇ ? ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’
–ವಿಲೋಟ್ ಹಜಲ್, ಬಾಲಕನ ತಾಯಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.