ಗುಲ್ಬರ್ಗ ಸರ್ಕಾರಿ ವೀಕ್ಷಣಾಲಯದಿಂದ ಆರು ಬಾಲಕರು ಭಾನುವಾರ ಪರಾರಿಯಾಗಿರುವ ವರದಿಯಲ್ಲಿ ಅಚ್ಚರಿಯೇನಿಲ್ಲ. ವೀಕ್ಷಣಾಲಯದ ಕಾವಲುಗಾರನ ಮೇಲೆ ಖಾರದ ಪುಡಿ ಎರಚಿ ಬಾಗಿಲು ಮುರಿದು ಓಡಿ ಹೋಗಿರುವುದು ಗುಲ್ಬರ್ಗದಲ್ಲಿ ಈ ಹಿಂದೆಯೂ ನಡೆದಿದೆ. ಬಾಲಕರ ಹೆಚ್ಚುತ್ತಿರುವ ಅಪರಾಧಗಳ ಕುರಿತು ತೀವ್ರ ಕಳವಳವಿದ್ದರೂ ಅವರ ಪುನರ್ವಸತಿ ಬಗೆಗೆ ಎಲ್ಲಿಯೂ ಕಿಂಚಿತ್ತೂ ಕಾಳಜಿ ಇಲ್ಲ.
ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಬಾಲಕರು ಭಾಗಿಯಾಗುತ್ತಿದ್ದಾರೆನ್ನುವ ಬಗ್ಗೆ ಎಲ್ಲೆಡೆ ಕೂಗಾಟವಿದೆ. ಆದರೆ ಆರೋಪಿಗಳನ್ನು ಮತ್ತೆ ಸರಿದಾರಿಗೆ ತರುವಂತಹ ವ್ಯವಸ್ಥೆ ದುರ್ಬಲವಿರುವುದನ್ನು ಏಕೆ ಯಾರೂ ಗಮನಿಸುವುದಿಲ್ಲ? ಅಪರಾಧ ಮಾಡಿ ವೀಕ್ಷಣಾಲಯಕ್ಕೆ ದಾಖಲಾಗುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ವ್ಯವಸ್ಥೆಯು ನಿರ್ಲಕ್ಷ್ಯಕ್ಕೊಳಗಾಗಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಈ ಕ್ಷೇತ್ರದಲ್ಲಿ ಯಾವುದೇ ಆಸಕ್ತಿ ಇಲ್ಲ.
ಬಾಲಾರೋಪಿಗಳ ಪುನರ್ವಸತಿಗಾಗಿ ವೀಕ್ಷಣಾಲಯಗಳು ಪ್ರತಿ ಜಿಲ್ಲೆಯಲ್ಲೂ ಇರಬೇಕೆಂದಿದೆ. ಕರ್ನಾಟಕದಲ್ಲಿ ಪ್ರಸ್ತುತ ೧೬ ಜಿಲ್ಲೆಗಳಲ್ಲಿ ವೀಕ್ಷಣಾಲಯಗಳು ಇವೆ. ಉಳಿದೆಡೆಯಿಂದ ಬಾಲಾರೋಪಿಗಳನ್ನು ವೀಕ್ಷಣಾಲಯ ಇರುವಂತಹ ಜಿಲ್ಲೆಗೆ ವರ್ಗಾಯಿಸಲಾಗುತ್ತದೆ. ಸ್ವಂತ ಕಟ್ಟಡಗಳು ಹೊಂದಿರುವ ವೀಕ್ಷಣಾಲಯಗಳು ಕೇವಲ ೧೧ ಇವೆ. ಉಳಿದವು ಬಾಡಿಗೆ ಕಟ್ಟಡಗಳಲ್ಲಿ ಕನಿಷ್ಠ ಸೌಕರ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಎಲ್ಲ ವೀಕ್ಷಣಾಲಯಗಳೂ ಸಿಬ್ಬಂದಿ ಕೊರತೆಯಿಂದ ನರಳುತ್ತಿವೆ. ಹೊರಗುತ್ತಿಗೆ ಆಧಾರದ ಮೇಲೆ ಕಾವಲುಗಾರರನ್ನು ನೇಮಿಸಲಾಗುತ್ತಿದೆ. ಸೆಕ್ಯೂರಿಟಿ ಏಜೆನ್ಸಿಗಳಿಂದ ಬರುವ ಇವರಿಗೆ ಮಕ್ಕಳ ಮನಶಾಸ್ತ್ರದ ಬಗ್ಗೆ ಯಾವುದೇ ತಿಳಿವಳಿಕೆಯೂ ಇರುವುದಿಲ್ಲ. ಬಹುತೇಕ ಸಂಸ್ಥೆಗಳಿಗೆ ಏಜೆನ್ಸಿಗಳು ವೃದ್ಧಾಪ್ಯದಲ್ಲಿರುವವರನ್ನೇ ಕಳುಹಿಸುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗಿನ ಒಪ್ಪಂದದ ಮೇರೆಗೆ ಕಾವಲುಗಾರರನ್ನು ನಿಯೋಜಿಸಲಾಗುತ್ತದೆ.
ಪ್ರತಿಯೊಂದು ವೀಕ್ಷಣಾಲಯದಲ್ಲಿ ಅಧೀಕ್ಷಕರು, ಹೌಸ್ ಫಾದರ್, ಆಪ್ತಸಮಾಲೋಚಕರು, ಕಾವಲುಗಾರರು, ಅಡುಗೆಯವರು ಸಿಬ್ಬಂದಿ ಕಡ್ಡಾಯ. ಪ್ರತಿ ಜಿಲ್ಲೆಯಲ್ಲಿ ವೀಕ್ಷಣಾಲಯದ ಕಾರ್ಯಚಟುವಟಿಕೆಗಳನ್ನು ಮೇಲುಸ್ತುವಾರಿ ಮಾಡಲು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಬಾಲನ್ಯಾಯ ಮಂಡಳಿಗಳು ಇವೆ. ಇದಲ್ಲದೆ, ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಮೇಲುಸ್ತುವಾರಿಗಾಗಿ ಉಚ್ಚನ್ಯಾಯಾಲಯದಿಂದ ನಿಯೋಜಿಸಬೇಕು. ಅವರು ವೀಕ್ಷಣಾಲಯಕ್ಕೆ ನಿಯಮಿತವಾಗಿ ಭೇಟಿ ಕೊಟ್ಟು ವರದಿ ಸಲ್ಲಿಸಬೇಕೆಂದಿದೆ. ಬಾಲನ್ಯಾಯ ಕಾಯ್ದೆಯ ಸಮರ್ಪಕ ಜಾರಿಗೆ ನ್ಯಾಯಮೂರ್ತಿ ಹುಲುವಾಡಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ಕೂಡಾ ರಚನೆಯಾಗಿದೆ.
ಬಾಲನ್ಯಾಯ ಕಾಯ್ದೆಯ ಸಮರ್ಪಕ ಜಾರಿಗಾಗಿ ಹಣದ ಕೊರತೆ ಇಲ್ಲ. ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಪಿಎಸ್) ಅಡಿಯಲ್ಲಿ ಕೋಟ್ಯಂತರ ಹಣ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬಿಡುಗಡೆಯಾಗಿದೆ. ೨೦೧೦ರಲ್ಲಿ ಪ್ರಾರಂಭವಾದ ಈ ಯೋಜನೆ ಬಹಳ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಪ್ರತಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಘಟಕಗಳು ರಚನೆಯಾಗಿವೆ. ಈ ಘಟಕದ ಸಿಬ್ಬಂದಿಗಳು ವೀಕ್ಷಣಾಲಯಕ್ಕೆ ಭೇಟಿ ಮಾಡಿ ಮಕ್ಕಳ ಸ್ಥಿತಿಗತಿ ಕುರಿತು ಅಧ್ಯಯನ ಮಾಡಬೇಕು; ಅವರಿಗೆ ಆಪ್ತಸಮಾಲೋಚನೆ ಮಾಡಿ, ಅಗತ್ಯವಾದ ಮಾರ್ಗದರ್ಶನ ನೀಡಬೇಕು. ಬಾಲಕರ ಬಿಡುಗಡೆಯ ನಂತರ ಮನೆಗೆ ಭೇಟಿ ನೀಡಿ ಅನುಸರಣೆ ಮಾಡಬೇಕೆಂದಿದೆ. ಆದರೆ, ಇಷ್ಟೆಲ್ಲಾ ವ್ಯವಸ್ಥೆಗಳು ಇದ್ದರೂ ಸಮರ್ಪಕ ಜಾರಿಯ ಬಗ್ಗೆ ಅನೇಕ ಅನುಮಾನಗಳಿವೆ .
ಮಕ್ಕಳು ಓಡಿಹೋಗುವುದು ಸಹಜ. ಪಂಜರದೊಳಗೆ ಅದೆಷ್ಟು ಕಾಲ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ? ಆರು ತಿಂಗಳೊಳಗೆ ಬಾಲಕರ ಮೇಲಿನ ಪ್ರಕರಣಗಳು ಇತ್ಯರ್ಥಗೊಳಿಸಬೇಕೆಂಬುದು ಬಾಲನ್ಯಾಯ ಕಾಯ್ದೆಯ ನಿಯಮ. ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ವೀಕ್ಷಣಾಲಯದಲ್ಲಿ ಅವರನ್ನು ಇಟ್ಟುಕೊಳ್ಳಬಾರದು. ಆದರೆ, ಗುಲ್ಬರ್ಗದ ಬಾಲಕರು ಕಳೆದ ೬ ತಿಂಗಳುಗಳಿಂದ ಅಲ್ಲೇ ಇದ್ದರು. ಅವರಿಗೆ ಜಾಮೀನು ನೀಡುವುದಾಗಲಿ ಸೂಕ್ತ ಪುನರ್ವಸತಿ ಕಲ್ಪಿಸುವುದಾಗಲಿ ಮಾಡಲಿಲ್ಲವೇಕೆ? ಕನಿಷ್ಠ ಸೌಕರ್ಯಗಳಿಲ್ಲದೆ ಪ್ರೀತಿಯಿಂದ ಮಾತನಾಡುವವರೇ ಇಲ್ಲದೆ ಅದೆಷ್ಟು ಕಾಲ ವೀಕ್ಷಣಾಲಯದ ಕೋಣೆಯಲ್ಲಿ ಉಳಿಯಲು ಸಾಧ್ಯ? ಮಕ್ಕಳು ಚಟುವಟಿಕೆ ಇಲ್ಲದೆ ಇರಲಾರರು; ಅದರಲ್ಲೂ ೧೫ರಿಂದ ೧೮ರ ಹರೆಯದವರನ್ನು ಹಿಡಿದಿಟ್ಟುಕೊಳ್ಳಲು ಇನ್ನೂ ಕಷ್ಟ. ಅವರ ‘ಎಸ್ಕೇಪ್’ ನಲ್ಲಿ ಅಚ್ಚರಿಯೇನಿದೆ?
ವೀಕ್ಷಣಾಲಯಗಳಲ್ಲಿ ದಾಖಲಾಗುವ ಮಕ್ಕಳನ್ನು ಅವರ ವಯೋಮಾನ ಮತ್ತು ಅಪರಾಧಕ್ಕೆ ತಕ್ಕಂತೆ ವರ್ಗೀಕರಿಸಿ ಪ್ರತ್ಯೇಕವಾಗಿ ಇರಿಸಬೇಕೆನ್ನುವ ಮಾರ್ಗಸೂಚಿ ಇದೆ. ಆದರೆ, ಸೌಕರ್ಯಗಳ ಕೊರತೆಯಿಂದ ಎಲ್ಲ ಮಕ್ಕಳನ್ನೂ ಒಟ್ಟಿಗೆ ಒಂದೆಡೆ ಕೂಡಿಹಾಕುವ ವ್ಯವಸ್ಥೆಯನ್ನೇ ಅನುಸರಿಸಲಾಗುತ್ತಿದೆ. ಇದರಿಂದ, ಗಂಭೀರೇತರ ಅಪರಾಧ ಮಾಡಿದವರು ಗಂಭೀರ ಅಪರಾಧ ಮಾಡಿದವರ ಸಂಪರ್ಕಕ್ಕೆ ಒಳಗಾಗುತ್ತಾರೆ. ಹಿರಿಯ ಬಾಲಕರ ಮಾತುಗಳು ಮತ್ತು ಚಟುವಟಿಕೆಗಳಿಗೆ ಉಳಿದವರು ಪ್ರಭಾವಕ್ಕೊಳಗಾಗುವ ಸಾಧ್ಯತೆಯೂ ಹೆಚ್ಚು. ಇದಲ್ಲದೆ, ಕಿರಿಯ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತಹ ಪ್ರಸಂಗಗಳೂ ಇವೆ.
ರಾಜ್ಯದ ಬಹುತೇಕ ವೀಕ್ಷಣಾಲಯಗಳಲ್ಲಿ ಕಾಯಂ ಅಧೀಕ್ಷಕರೇ ಇಲ್ಲದಿರುವುದರಿಂದ ವೀಕ್ಷಣಾಲಯದ ಕಾರ್ಯಚಟುವಟಿಕೆಗಳು ಕುಂಠಿತಗೊಂಡಿವೆ. ಇರುವ ಸಿಬ್ಬಂದಿ ವರ್ಗಕ್ಕೆ ಬಾಲನ್ಯಾಯ ಕಾಯ್ದೆ ಮತ್ತು ಮಕ್ಕಳ ಮನಶಾಸ್ತ್ರದ ಬಗ್ಗೆ ಸರಿಯಾದ ತರಬೇತಿ ಇಲ್ಲ. ಆಟದ ಮೈದಾನವಿರುವ ವೀಕ್ಷಣಾಲಯಗಳೇ ಅಪರೂಪ. ದಾಖಲಾಗುವ ಮಕ್ಕಳನ್ನು ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿ ವೀಕ್ಷಣಾಲಯದಲ್ಲೂ ಜಾಗವಿರಬೇಕು.
ಆದರೆ, ಬಾಲಾರೋಪಿಗಳ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾಯಂ ಸಿಬ್ಬಂದಿಗೆ ಆಸಕ್ತಿ ವಿರಳ.
ವೀಕ್ಷಣಾಲಯಕ್ಕೆ ದಾಖಲಾಗುವ ಮಕ್ಕಳೆಂದರೆ ಹದಿಹರೆಯದವರು. ಬಹುತೇಕರು ಶಾಲೆ ಬಿಟ್ಟವರು. ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡದವರೇ ಹೆಚ್ಚಿನವರು. ಅನೇಕ ಮಕ್ಕಳಿಗೆ ಪಾಲಕರಾಗಿ ತಾಯಿ ಮಾತ್ರ ಇರುತ್ತಾರೆ. ಹದಿಹರೆಯದ ಇಂತಹ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ತಾಯಿಯಿಂದ ಸಾಧ್ಯವಿಲ್ಲ. ಸೂಕ್ತ ಪುನರ್ವಸತಿ ಮತ್ತು ಶಿಕ್ಷಣ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತಲುಪಿಸಬೇಕಾದ ಪ್ರಜಾಪ್ರಭುತ್ವ ಸರ್ಕಾರವು ಕಣ್ಮುಚಿ ಕುಳಿತಿದೆ. ಇವರಿಂದ ಸಹಿಸಲಾರದ ಅಪರಾಧವಾದಾಗ ಎಚ್ಚೆತ್ತುಕೊಂಡು ಗೂಂಡಾ ಕಾಯ್ದೆಯಂತಹ ಕರಾಳ ಕಾಯ್ದೆ ಘೋಷಿಸಿ ತೃಪ್ತಿಪಡುತ್ತದೆ.
ಅಪರಾಧದೆಡೆಗೆ ಹದಿಹರೆಯದವರನ್ನು ದೂಡುವ ವಾತಾವರಣ ನಮ್ಮ ಮನೆಯೊಳಗೆ, ಸುತ್ತಮುತ್ತ ಇನ್ನೂ ಜೀವಂತವಾಗಿದೆ. ಪ್ರಜ್ಞಾವಂತರು ಮತ್ತು ಜನಪರ ಸರ್ಕಾರ ಇದನ್ನು ಗಮನಿಸಿ ತುರ್ತು ಕಾರ್ಯಕ್ರಮಗಳನ್ನು ಜಾರಿಮಾಡಬೇಕಿದೆ. ಅಪರಾಧ ತಡೆಗೆ ನೆರವಾಗುವ ವೀಕ್ಷಣಾಲಯದಂತಹ ಸಂಸ್ಥೆಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ಬಲಿಷ್ಠಗೊಳಿಸಿದರೆ ನಮ್ಮ ನವಯುವಕರ ಭವಿಷ್ಯ ಉತ್ತಮವಾದೀತು!
(ಲೇಖಕರು ವಕೀಲರು ಮತ್ತು ಮೈಸೂರು ಬಾಲನ್ಯಾಯ ಮಂಡಳಿ ಸದಸ್ಯರಾಗಿದ್ದರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.