ಬಾಳೆ ಎಲೆಗಳು ಒಣಗುವುದಕ್ಕೆ ತೇವಾಂಶದಲ್ಲಿ ವ್ಯತ್ಯಾಸ, ಫಲವತ್ತತೆ ಸಮಸ್ಯೆ, ರೋಗ ಬಾಧೆ ಅಥವಾ ಕೀಟ ಬಾಧೆ ಪ್ರಮುಖ ಕಾರಣ.ಬಾಳೆ ಸಸಿ ರೋಗಮುಕ್ತವಾಗಲು ರೋಗ ರಹಿತ ಸಸಿ ಕಂದು ನೆಡಬೇಕು. ಸುಣ್ಣ – ಬೇವಿನ ಹಿಂಡಿ ಬಗ್ಗಡ ಮಾಡಿ 4 ಗಂಟೆ ಕಾಲ ನೆನೆಸಿ 2 ದಿನ ಬಿಸಿಲಲ್ಲಿ ಒಣಗಿಸಿ ಇದನ್ನು ಹಾಕಿ ಸಸಿ ನೆಡಬೇಕು.
ಬಾಳೆ ತೋಟದಲ್ಲಿ ಕಳೆಗಳ ಕಾಟವಾಗಿದ್ದಲ್ಲಿ ಬಾಳೆ ಮಧ್ಯೆ 30–40 ಸೆಂ. ಮೀ. ಮುಚ್ಚಿಕೆ ಹಾಕಿ. ಸತತವಾಗಿ 2–3 ವರ್ಷ ಹೀಗೆ ಮಾಡಿ.
ಬಾಳೆ ಬೆಳೆಗೆ ಜೌಗು, ತಗ್ಗು ಪ್ರದೇಶ ಸೂಕ್ತವಲ್ಲ. ಮರಳು ಮಿಶ್ರಿತ ಕೆಂಪು ಮಣ್ಣು ಉತ್ತಮ. ಕಪ್ಪು ಮಣ್ಣಿನಲ್ಲಿ ರೋಗದ ಸಮಸ್ಯೆ ಹೆಚ್ಚು.
ಚಿಬ್ಬುರೋಗ ತಡೆ
ಚಿಪ್ಪುಗಳನ್ನು ಕ್ಲೋರಿನ್ ಬೆರೆಸಿದ ದ್ರಾವಣದಲ್ಲಿ ಅದ್ದಿ ತೆಗೆಯಿರಿ. ಶೇ 1ರ ಬೋರ್ಡೋ ದ್ರಾವಣದಲ್ಲಿ ಕಾಯಿಗಳನ್ನು ಅದ್ದುವ ಮೂಲಕ ರೋಗ ಕಡಿಮೆ ಮಾಡಬಹುದು.
ಪನಮಾ ಸೊರಗು ರೋಗ ತಡೆ: ರೋಗಗ್ರಸ್ತ ಗಡ್ಡೆಗಳನ್ನು ನಾಟಿಗೆ ಬಳಸಬಾರದು. ಒಂದು ಲೀಟರ್ ನೀರಿಗೆ ಒಂದು ಗ್ರಾಂ ಕಾರ್ಬನ್ಡೈಜಿಮ್ ಬೆರೆಸಿ ನಾಟಿ ಮಾಡುವ ಗಡ್ಡೆಯನ್ನು ಅದ್ದಿ ತೆಗೆಯಿರಿ. ಕಬ್ಬಿನ ಸೊಪ್ಪು ಮತ್ತು ಯೂರಿಯಾವನ್ನು ಸೇರಿಸುವುದರಿಂದ ಈ ಶಿಲೀಂಧ್ರವನ್ನು ಹತೋಟಿ ಮಾಡಬಹುದು.
3 ಕೆ.ಜಿ ಬೇವಿನ ಹಿಂಡಿ, 2 ಕೆ.ಜಿ ಟ್ರೈಕೋಡರ್ಮ ಬೆರೆಸಿ ಪ್ರತಿ ಗಿಡಕ್ಕೆ ಒಂದು ಕೆ.ಜಿಯಷ್ಟು ಹಾಕಬೇಕು. ಅಣುಜೀವ ನಾಶಕಗಳಾದ ಸುಡೊಮೋನಸ್ ಫ್ಲೋರೆಸ್ಸೆನ್ಸ್ ಅನ್ನು ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿ ಬೆರೆಸಿ ಗಿಡಕ್ಕೆ ಹಾಕಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಶೇ 0.2 ಕಾರ್ಬನ್ಡಜಿಮ್ ದ್ರಾವಣವನ್ನು ಗಿಡದ ಸುತ್ತ ಹಾಕಬೇಕು.
ಸಿಗುಟೋಕ ಎಲೆ ಚುಕ್ಕೆ ರೋಗ ಮಳೆಗಾಲದಲ್ಲಿ ಹೆಚ್ಚಾಗಿ ಬರುವ ರೋಗವಿದು. ರೋಗ ಪೀಡಿತ ಎಲೆಗಳನ್ನು ತೆಗೆದು ಸುಡಬೇಕು. ತೋಟವನ್ನು ಸ್ವಚ್ಛವಾಗಿಡಿ ಮತ್ತು ನೀರು ನಿಲ್ಲದಂತೆ ನೋಡಿಕೊಳ್ಳಿ. ಶೇ1ರ ಬೋರ್ಡೋ ದ್ರಾವಣ ಮತ್ತು ಶೇ 2ರ ಲಿಮ್ ಸಿಡ್ ಅನ್ನು ಸಿಂಪಡಿಸುವುದು ಒಳ್ಳೆಯದು.
ನಿಮ್ಯೆಟೋಡ್ (ಜಂತುಹುಳು) ಬಾಧೆ ಬರದಿರಲು ರೋಗಗ್ರಸ್ತ ಗಡ್ಡೆಗಳನ್ನು ನಾಟಿಗೆ ಬಳಸಬಾರದು. ಪ್ರತಿ ಗಿಡಕ್ಕೆ 600ಗ್ರಾಂ ಬೇವಿನ ಹಿಂಡಿ ಮತ್ತು ನಿಯಮಿತವಾಗಿ ಪೋರಟ್ ಹಾಕಬೇಕು. ಕಾಂಡಕೊರಕ ಹುಳು ಭಾದೆಯನ್ನು ತಪ್ಪಿಸಲು ಹಾನಿಗೀಡಾದ ಗಿಡಗಳನ್ನು ಕಿತ್ತು ಸುಡಬೇಕು.
ಹಸಿ ಕಾಂಡಕ್ಕೆ 350 ಮಿಲಿ ಲೀಟರ್ ಮೊನೊಕ್ರೋಟಪಾಸ್ ದ್ರಾವಣವನ್ನು 150 ಮಿಲಿ ಲೀಟರ್ ನೀರಿಗೆ ಬೆರೆಸಿ ಸಿರಂಜ್ ಮೂಲಕ ಒಳ ಸೇರಿಸಬೇಕು. ಗಿಡ ನೆಡುವ ಮುಂಚೆ ಪ್ರತಿ ಗುಂಡಿಗೆ 20ಗ್ರಾಂ ಪಿರುಡಾನ್ ಅಥವಾ 0.5 ಕೆ.ಜಿ. ಬೇವಿನ ಹಿಂಡಿ ಹಾಕಬೇಕು.
ಒಂದು ಲೀಟರ್ ನೀರಿಗೆ ಒಂದು ಗ್ರಾಂ ಕ್ಲೋರೊಪೆರಿಪಾಸ್ ಬೆರೆಸಿ ನಾಟಿ ಮಾಡುವ ಗಡ್ಡೆಯನ್ನು ಅದ್ದಿ ತೆಗೆಯಿರಿ. ಗಡ್ಡೆ ಕೊರಕ ಮೂತಿಹುಳು ಬಾಧೆಯಾಗದಂತೆ ಗಡ್ಡೆಗಳನ್ನು ಸುಡು ನೀರಿನಲ್ಲಿ 15ರಿಂದ 25 ನಿಮಿಷಗಳವರೆಗೆ ಅದ್ದಿ ನಾಟಿ ಮಾಡಬೇಕು.
ನಾಟಿ ಮಾಡುವ ಮುಂಚೆ ಪ್ರತಿ ಗುಂಡಿಗೆ 20 ಗ್ರಾಂ ಪಿರುಡಾನ್ 3ಜಿ ಮತ್ತು 500ಗ್ರಾಂ ಬೇವಿನ ಹಿಂಡಿ ಹಾಕಬೇಕು. ಒಂದು ಲೀಟರ್ ನೀರಿಗೆ 14 ಮಿಲಿಲೀಟರ್ ಮೊನಿಕ್ರೋಟಪಾಸ್ ಬೆರೆಸಿ 20 ನಿಮಿಷಗಳವರೆಗೆ ಅದ್ದಿ ನಾಟಿ ಮಾಡಬೇಕು.
ಮಾಹಿತಿಗೆ ಜಯಲಕ್ಷ್ಮಿ ಅಗ್ರೋಟೆಕ್ ಕಂಪೆನಿಯ bananakannada ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.