ನವದೆಹಲಿ: ನಕಲಿ ದಾಖಲೆಗಳನ್ನು ನೀಡಿ ಉದ್ಯೋಗಕ್ಕೆ ಸೇರಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಚಾಲಕನನ್ನು ಸೇವೆಯಿಂದ ವಜಾ ಮಾಡಿದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಬಿಎಂಟಿಸಿ ಚಾಲಕ ಕೆ.ವಿ.ಎಸ್ ರಾಮ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ. ಗೋಪಾಲಗೌಡ ಹಾಗೂ ನ್ಯಾ.ಆರ್. ಬಾನುಮತಿ ಅವರನ್ನೊಳಗೊಂಡ ನ್ಯಾಯಪೀಠವು ಕರ್ನಾಟಕ ನ್ಯಾಯಮಂಡಳಿ ತೀರ್ಪನ್ನು ಎತ್ತಿಹಿಡಿಯಿತು.
ಇಂತಹದೇ ಪ್ರಕರಣದಲ್ಲಿ ಭಾಗಿಯಾದ ಕೆಲವು ಸಿಬ್ಬಂದಿಗೆ ಕಡಿಮೆ ಶಿಕ್ಷೆ ಕೊಡಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ಅನಗತ್ಯ ವಿಳಂಬ ಮಾಡಲಾಗಿದೆ ಎಂದು ಕೆಎಟಿ ಹೇಳಿತ್ತು. ಅದನ್ನು ಸರ್ವೋಚ್ಚ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ.
ರಾಮ್ ವಿರುದ್ಧ 12 ವರ್ಷಗಳ ಬಳಿಕ ಏಕೆ ವಿಚಾರಣೆ ವರದಿ ಸಲ್ಲಿಸಲಾಗಿದೆ. 14 ವರ್ಷಗಳವರೆಗೆ ಅವರಿಗೆ ಕೆಲಸ ಮಾಡಲು ಏಕೆ ಅವಕಾಶ ನೀಡಲಾಯಿತು ಎಂಬ ಬಗ್ಗೆ ಬಿಎಂಟಿಸಿ ಯಾವುದೇ ವಿವರಣೆ ನೀಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಚಾಲಕನ ವಿರುದ್ಧ ವಿಚಾರಣೆ ಪೂರ್ಣಗೊಳಿಸಲು ವಿಳಂಬ ಮಾಡಲಾಗಿದೆ. ಇಂತಹದೇ ಕೆಲವು ಪ್ರಕರಣಗಳಲ್ಲಿ ನೌಕರರನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನೌಕರನ ವಯಸ್ಸು ಪರಿಗಣಿಸಿ ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್ 11ಎ ಕೊಡಮಾಡಿರುವ ವಿವೇಚನಾ ಅಧಿಕಾರವನ್ನು ಬಳಸಿ ಈ ತೀರ್ಪು ನೀಡಲಾಗಿದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
ರಾಂ 1985ರ ಸೆಪ್ಟೆಂಬರ್ 3ರಂದು ಬಿಎಂಟಿಸಿ ಚಾಲಕರಾಗಿ ನೇಮಕಗೊಂಡಿದ್ದರು. ಅವರನ್ನು 2004ರ ಅಕ್ಟೋಬರ್ 1ರಂದು ಕೆಲಸದಿಂದ ವಜಾ ಮಾಡಲಾಗಿತ್ತು. ವಜಾ ಆದೇಶವನ್ನು ಹೈಕೋರ್ಟ್ 2012ರ ಸೆಪ್ಟೆಂಬರ್ 3ರಂದು ಎತ್ತಿ ಹಿಡಿದಿತ್ತು. ಈ ತೀರ್ಪನ್ನು ರಾಂ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಕೆಎಟಿ ರಾಂ ಅವರನ್ನು ನೌಕರಿಯಿಂದ ವಜಾ ಮಾಡಿದ್ದನ್ನು ರದ್ದುಪಡಿಸಿತ್ತು. ಅವರ ಕೆಲವು ಇನ್ಕ್ರಿಮೆಂಟ್ ಕಡಿತ ಮಾಡಲು ಸೂಚಿಸಿತ್ತು.