ಬೆಂಗಳೂರು: ಹೆಚ್ಚುತ್ತಿರುವ ಬಿಎಂಟಿಸಿ ಬಸ್ಗಳ ಅಪಘಾತವನ್ನು ನಿಯಂತ್ರಿಸಲು ಬಸ್ ಚಾಲಕರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಹಾಗೂ ಸುರಕ್ಷಾ ಚಾಲನಾ ಕೌಶಲ ನೀಡಲು ಸಂಸ್ಥೆ ಮುಂದಾಗಿದೆ.
ಅಪಘಾತ ರಹಿತ ಚಾಲನಾ ಕೌಶಲ ಅಳವಡಿಸಿಕೊಂಡ ಚಾಲಕರಿಗೆ ಚಿನ್ನ, ಬೆಳ್ಳಿಯ ಪದಕ ಹಾಗೂ ನಗದು ಬಹುಮಾನ ನೀಡಲಾಗುತ್ತಿದೆ. ಇದಲ್ಲದೇ ಚಾಲಕರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ತರಬೇತುದಾರರನ್ನು ಮೂಲಕ ತರಬೇತಿ ನೀಡಲು ಮುಂದಾಗಿದೆ. ಚಾಲಕರಿಗೆ ಸುರಕ್ಷಾ ಚಾಲನಾ ಕೌಶಲವನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ನಿಯಮಿತವಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಅಪಘಾತ ಪ್ರಕರಣಗಳಲ್ಲಿ ಭಾಗಿಯಾಗುವ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ. ಮಾನಸಿಕ ಒತ್ತಡ ನಿಯಂತ್ರಣದ ಜತೆಗೆ ಜವಾಬ್ದಾರಿಯನ್ನು ಕೂಡ ಪ್ರದರ್ಶಿಸಬೇಕಿದೆ ಎಂದು ತಿಳಿಸಿದರು.