ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳೂ ತಮ್ಮ ಭಾಷಾನೀತಿಯಲ್ಲಿ ಯಾವುದೇ ಪದವಿ ಹಂತದಲ್ಲಿ ನಾಲ್ಕು ಸೆಮಿಸ್ಟರ್ಗಳಿಗೆ ಅವಶ್ಯಕ ಭಾಷಾ ವಿಷಯದ ಕಲಿಕೆಯನ್ನು ಕಡ್ಡಾಯಗೊಳಿಸಿ ಬಿ.ಎ., ಬಿ.ಕಾಂ., ಬಿ.ಎಸ್ಸಿ ತರಗತಿಗಳಿಗೆ ಕನ್ನಡ ಅವಶ್ಯಕವನ್ನು ಅಳವಡಿಸಿ ತಮ್ಮ ಭಾಷಾ ಪ್ರೇಮವನ್ನು ಮೆರೆದಿವೆ.
ಆದರೆ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ಎರಡನೇ ವರ್ಷದ ಬಿ.ಕಾಂ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಅಳವಡಿಸದೇ ಕನ್ನಡ ವಿರೋಧಿ ನಿಲುವನ್ನು ಪ್ರಕಟಿಸುತ್ತಾ ಬಂದಿದೆ.
ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ಯಶಸ್ವಿಯಾಗಿ ಆಡಳಿತದಲ್ಲಿ ಜಾರಿಗೆ ತರಬೇಕಾದರೆ ಉನ್ನತ ಶಿಕ್ಷಣದ ಎಲ್ಲ ಸ್ತರಗಳಲ್ಲಿ ಕನ್ನಡ ಅಧ್ಯಯನಕ್ಕೆ ಮಹತ್ವದ ಸ್ಥಾನ ಸಿಗಲೇಬೇಕು.
ಬ್ಯಾಂಕಿಂಗ್ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡವನ್ನು ಜಾರಿಗೆ ತರುವ ಸರ್ಕಾರದ ಸಂಕಲ್ಪಕ್ಕೆ ಬಿ.ಕಾಂ. ಪದವಿಯಲ್ಲಿ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸುವುದು ಅನಿವಾರ್ಯ. ಗಮನಿಸಬೇಕಾದ ಅಂಶವೆಂದರೆ ಇದೇ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಎರಡನೇ ವರ್ಷದ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ಆದರೆ ಬಿ.ಕಾಂ. ಎರಡನೇ ವರ್ಷದ ತರಗತಿಗೆ ಅಳವಡಿಸದಂತೆ ತಡೆಯಲಾಗಿದೆ.
ಭಾಷಾಕೌಶಲ, ಸಂವಹನ ಕೌಶಲ, ಸಾಹಿತ್ಯ-–ಸಂಸ್ಕೃತಿಗಳ ಜ್ಞಾನವನ್ನು ಪಡೆಯುವುದು ವರ್ತಮಾನದ ಅಗತ್ಯವಾಗಿದೆ. ಹಿಂದಿನಿಂದಲೂ ಸಮಸ್ಯೆಯಾಗಿರುವ ಈ ವಿಷಯವನ್ನು ಕುಲಪತಿ ಡಾ. ಎಚ್.ಬಿ. ವಾಲೀಕಾರ ಅವರ ಗಮನಕ್ಕೆ ತಂದಾಗ ಕನ್ನಡ ಅಧ್ಯಾಪಕರ ಪರಿಷತ್ತಿನ ಸಮಾವೇಶದಲ್ಲಿ ೨೦೧೩–-೧೪ನೇ ಸಾಲಿನಿಂದಲೇ ಬಿ.ಕಾಂ. ಎರಡನೇ ವರ್ಷದ ತರಗತಿಗೆ ಕನ್ನಡವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು. ಘೋಷಣೆ ಮಾಡಿ ಒಂದೂವರೆ ವರ್ಷ ಕಳೆದಿದೆ. ಕನ್ನಡ ಪರವಾದ ಈ ಕೆಲಸವನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸುವಂತಾಗಲಿ.
– ಡಾ. ಜಿ.ಎಂ. ಹೆಗಡೆ, ಡಾ.ಡಿ.ಎಂ.ಹಿರೇಮಠ, ಶಂಕರ ಹಲಗತ್ತಿ, ಡಾ.ಎಂ.ಡಿ.ಒಕ್ಕುಂದ, ಡಾ. ಜಿನದತ್ತ ಹಡಗಲಿ, ಡಾ. ಬಿ.ಜಿ. ಬಿರಾದಾರ, ಡಾ. ಎಸ್.ವಿ. ಮನಗುಂಡಿ, ಡಾ. ವಿನಯಾ ಒಕ್ಕುಂದ, ಡಾ. ವಿಜಯಶ್ರೀ ಹಿರೇಮಠ, ಡಾ. ರೇಖಾ ಜೋಗುಳ, ಡಾ. ಮಾಲತಿ ಪೂಜಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.