ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿದೆ. ಯಾವುದೇ ಪ್ರಮುಖ ಪಕ್ಷದೊಂದಿಗೆ ಮೈತ್ರಿ ಇಲ್ಲದೆ ಚುನಾವಣೆ ಎದುರಿಸಿದ್ದು ರಾಜಕೀಯವಾಗಿ ಅದಕ್ಕೆ ಒದಗಿಬಂದಿದೆ. ಸಂಖ್ಯೆ ಹೆಚ್ಚಳ ಮತ್ತು ನೆಲೆ ವಿಸ್ತರಣೆ ಈ ಎರಡೂ ನೆಲೆಯಲ್ಲಿ ಲಾಭವಾಗಿದೆ. ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ಗೆ ಆಘಾತವಾಗುವ ಮಟ್ಟಿಗೆ ಹಿನ್ನಡೆ ಆಗಿದೆ. ಆಡಳಿತ ವಿರೋಧಿ ಅಲೆಯೊಂದಿಗೆ ಬದಲಾವಣೆಯ ಬಿರುಗಾಳಿಯೂ ಸೇರಿಕೊಂಡು ಅದನ್ನು ಮೂರನೇ ಸ್ಥಾನಕ್ಕೆ ದೂಡಿದೆ.
ರಾಷ್ಟ್ರೀಯ ಪಕ್ಷವೊಂದಕ್ಕೆ ಇದಕ್ಕಿಂತ ಮುಜುಗರದ ಸ್ಥಿತಿ ಮತ್ತೊಂದು ಇರಲಾರದು. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಪಡೆಯಲು ಬೇಕಾದ ಸಂಖ್ಯಾಬಲವನ್ನೂ ಹೊಂದಿಸಲಾರದಷ್ಟು ಕುಸಿದ ಕಾಂಗ್ರೆಸ್ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಲೇ ಇದೆ. ಆಂಧ್ರಪ್ರದೇಶ ವಿಧಾನಸಭೆಗೆ ಈ ಸಲ ನಡೆದ ಚುನಾವಣೆಯಲ್ಲಿ ಖಾತೆ ತೆರೆಯಲು ಆಗಲಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬಂದ ತೆಲಂಗಾಣದ ಮತದಾರ ಕಾಂಗ್ರೆಸ್ ನಿರೀಕ್ಷೆಗಳನ್ನು ಹುಸಿಗೊಳಿಸಿದ.
ಜನಸಂಖ್ಯೆ, ವಿಸ್ತೀರ್ಣ ಮತ್ತು ಮಹತ್ವದ ದೃಷ್ಟಿಯಿಂದ ಪ್ರಮುಖ ರಾಜ್ಯವಾದ ಮಹಾರಾಷ್ಟ್ರ ಹಾಗೂ ದೆಹಲಿಗೆ ಹೊಂದಿಕೊಂಡೇ ಇರುವ ಹರಿಯಾಣ ಕೂಡ ಈಗ ಕೈಬಿಟ್ಟಿರುವುದು ಕಾಂಗ್ರೆಸ್ಗೆ ದೊಡ್ಡ ನಷ್ಟ. ಇದರ ಹಿಂದೆ ನಾಯಕತ್ವದ ವೈಫಲ್ಯವೂ ಅಡಗಿದೆ. ಈ ಸೋಲಿನ ಕೊಂಡಿ ಕಳಚಿಕೊಳ್ಳಲು ಕಾಂಗ್ರೆಸ್ ವರಿಷ್ಠರು ಈಗಲಾದರೂ ಗಂಭೀರ ಪ್ರಯತ್ನ ಆರಂಭಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಕಂಡ ಹೀನಾಯ ಸೋಲಿನ ನಂತರವೇ ಎಚ್ಚೆತ್ತುಕೊಂಡಿದ್ದರೆ ಕಾಂಗ್ರೆಸ್ಗೆ ಇಂತಹ ದಯನೀಯ ಸೋಲು ಎದುರಾಗುತ್ತಿರಲಿಲ್ಲವೇನೊ? ಆದರೆ ಅಂತಹ ಪ್ರಯತ್ನವನ್ನೇ ಅದರ ಮುಖಂಡರು ಮಾಡಿದಂತೆ ಕಾಣುತ್ತಿಲ್ಲ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಕಾರ್ಯತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಬಿಜೆಪಿಯ ನೆಲೆ ವಿಸ್ತರಣೆಗೆ ವೇಗ ತಂದುಕೊಟ್ಟಿರುವುದು ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಗಳಿಂದ ಸಾಬೀತಾಗಿದೆ. ಶಿವಸೇನಾ ನೆರಳಲ್ಲಿ ಮರಾಠ ನೆಲದಲ್ಲಿ ನೆಲೆ ಕಂಡುಕೊಂಡಿದ್ದ ಬಿಜೆಪಿ, ಈ ಸಲ ಆ ಪಕ್ಷದೊಂದಿಗೆ ಮೈತ್ರಿ ಕಡಿದುಕೊಂಡರೂ ಸರಳ ಬಹುಮತದ ಸನಿಹಕ್ಕೆ ಬಂದಿರುವುದು ಸಾಮಾನ್ಯ ಸಾಧನೆಯೇನಲ್ಲ. ಸೀಟು ಹಂಚಿಕೆ ಮಾತುಕತೆ ಸಂದರ್ಭದಲ್ಲಿ ಬಿಜೆಪಿ ಬೇಡಿಕೆ ಇಟ್ಟಿದ್ದೇ 125ರಿಂದ 130 ಸ್ಥಾನಕ್ಕೆ. ಆದರೆ ಏಕಾಂಗಿಯಾಗಿ ಸ್ಪರ್ಧಿಸಿ 122 ಕ್ಷೇತ್ರಗಳಲ್ಲಿ ಗೆದ್ದು ಶಿವಸೇನಾದ ಬಾಯಿ ಕಟ್ಟುವಂತೆ ಮಾಡಿದೆ.
ಹರಿಯಾಣದಲ್ಲಿ ಸರಳ ಬಹುಮತ ಪಡೆದಿದೆ. ಈ ಎರಡೂ ರಾಜ್ಯಗಳಲ್ಲಿ ಇದೇ ಮೊದಲ ಸಲ ಆಡಳಿತ ಚುಕ್ಕಾಣಿ ಬಿಜೆಪಿ ಕೈಗೆ ಸಿಗಲಿದೆ. ಇಷ್ಟಾಗಿಯೂ ಜಟಿಲ ಸಮಸ್ಯೆಗಳನ್ನು ನಿಭಾಯಿಸುವ ಛಾತಿಯುಳ್ಳ ಅನುಭವಿ ನಾಯಕರ ಕೊರತೆಯನ್ನು ಬಿಜೆಪಿ ಎರಡೂ ರಾಜ್ಯಗಳಲ್ಲಿ ಎದುರಿಸುತ್ತಿದೆ. ಸಣ್ಣ ರಾಜ್ಯಗಳ ಪರ ಒಲವು ಹೊಂದಿರುವ ಬಿಜೆಪಿ, ಪ್ರತ್ಯೇಕ ವಿದರ್ಭ ರಾಜ್ಯದ ಬೇಡಿಕೆಗೆ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲದ ಪ್ರಶ್ನೆ. ವಿದರ್ಭದಲ್ಲಿ ಬಿಜೆಪಿಗೆ ಹೆಚ್ಚಿನ ಜನಬೆಂಬಲವೂ ದೊರೆತಿದೆ. ಜನರು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಅದು ಈಗ ಕೆಲಸ ಮಾಡಿ ತೋರಿಸಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.