ಬೆಂಗಳೂರು: ಜಾಹೀರಾತು ತೆರಿಗೆಬಾಕಿ ಉಳಿಸಿಕೊಂಡ ಸಂಸ್ಥೆಗಳ ಜತೆ ‘ನಮ್ಮ ಬೆಂಗಳೂರು ನನ್ನ ಕೊಡುಗೆ’ ಯೋಜನೆ ಮೂಲಕ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡ ವಿಷಯ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಪ್ರಸ್ತಾವಗೊಂಡು ಆಡಳಿತ ಪಕ್ಷವೇ ತೀವ್ರ ಮುಜುಗರ ಅನುಭವಿಸಬೇಕಾಯಿತು.
ಬಿಜೆಪಿಯವರೇ ಆದ ಡಾ. ರಾಜ್ಕುಮಾರ್ ವಾರ್ಡ್ನ ಗಂಗಬೈರಯ್ಯ, ‘ಕೋಟ್ಯಂತರ ರೂಪಾಯಿ ಜಾಹೀರಾತು ಶುಲ್ಕ ನೀಡದೆ ಬಿಬಿಎಂಪಿ ದೃಷ್ಟಿಯಲ್ಲಿ ಅಪರಾಧಿ ಸ್ಥಾನದಲ್ಲಿ ಇರುವ ಜಗದೀಶ್ ಟ್ರಾವೆಲ್ ಏಜೆನ್ಸಿ ಜತೆ ಒಪ್ಪಂದ ಮಾಡಿಕೊಂಡಿದ್ದೇಕೆ; ತೆರಿಗೆ ಬಾಕಿ ನೀಡುವಂತೆ ಆ ಸಂಸ್ಥೆಯ ಕಚೇರಿ ಮುಂದೆ ತಮಟೆ ಬಾರಿಸಿದ್ದು ಮರೆತು ಹೋಯಿತೇ’ ಎಂದು ಪ್ರಶ್ನಿಸಿದರು.
‘ಬೆಂಗಳೂರು ದಕ್ಷಿಣ ಹಾಗೂ ಮಹದೇವಪುರ ವಲಯದಲ್ಲಿ ಒಪ್ಪಂದ ಮಾಡಿಕೊಳ್ಳುವಾಗ ಹೆಚ್ಚಿನ ಲೋಪಗಳು ಆಗಿವೆ. ಬಿಬಿಎಂಪಿಗೆ ದೊಡ್ಡ ಮೊತ್ತದ ಬಾಕಿ ಉಳಿಸಿಕೊಂಡ ಸಂಸ್ಥೆಗಳೇ ಈಗ ಉದ್ಯಾನ, ರಸ್ತೆ ವಿಭಜಕ ಹಾಗೂ ಸ್ಕೈವಾಕ್ಗಳ ನಿರ್ವಹಣೆ ನೆಪದಲ್ಲಿ ಅವುಗಳ ಮೇಲೆ ಬಿಟ್ಟಿಯಾಗಿ ಜಾಹೀರಾತು ಫಲಕ ಹಾಕಿಕೊಳ್ಳುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.