ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿಯು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲೂ ರಥಗಳನ್ನು ಬಳಸಲಿದೆ.
ಪಕ್ಷದ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಶಾಸಕ, ಚುನಾವಣಾ ಉಸ್ತುವಾರಿ ಆರ್. ಅಶೋಕ್, ಇದೇ 13, 14ರಂದು ಈ ರಥಗಳನ್ನು ಬಿಡುಗಡೆ ಮಾಡಲಾಗುವುದು. ಡಿಜಿಟಲ್ ತಂತ್ರಜ್ಞಾನ ಅಳವಡಿಸಿರುವ ಈ ರಥಗಳು ಎಲ್ಲ ವಿಧಾನಸಭಾ ಕ್ಷೇತ್ರಗಳ ವಾರ್ಡ್ಗಳಲ್ಲಿ ಸಂಚರಿಸಲಿವೆ ಎಂದರು.
‘ಬಿಬಿಎಂಪಿಯನ್ನು ವಿಭಜಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತೆಗೆದುಕೊಂಡಿದ್ದು, ಚುನಾವಣೆಯಲ್ಲಿ ಇದು ಸಿದ್ದರಾಮಯ್ಯ ಅವರಿಗೆ ಶಾಪವಾಗಲಿದೆ. ಬೆಂಗಳೂರು ಜನ ಸೂಕ್ತ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.
ಬಿಜೆಪಿಗೆ ಸೇರ್ಪಡೆ: ಬಿಬಿಎಂಪಿ ಮಾಜಿ ಸದಸ್ಯೆ ಕಾಂಗ್ರೆಸ್ನ ಎ. ಪೂರ್ಣಿಮಾ, ಅವರ ಪತಿ ಶ್ರೀನಿವಾಸ್ ಹಾಗೂ ರಾಜ್ಯ ಯಾದವ ಸಮಾಜದ ಹಲವು ಮುಖಂಡರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡರು. ಪೂರ್ಣಿಮಾ ಅವರು ಜೆಡಿಎಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎ. ಕೃಷ್ಣಪ್ಪ ಅವರ ಮಗಳು.