ಹೊಸಕೋಟೆ: ಚುನಾವಣಾ ದ್ವೇಷದ ಹಿನ್ನಲೆಯಲ್ಲಿ ತಾಲ್ಲೂಕಿನ ವಾಗಟ ಅಗ್ರಹಾರ ಗ್ರಾಮದ ಡಿ.ಎಂ.ಮಂಜುನಾಥ ಎಂಬುವವರ ಮೇಲೆ ಗುಂಪೊಂದು ಹಲ್ಲೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮಂಜುನಾಥ ವಾಗಟ ಅಗ್ರಹಾರ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿಯಾಗಿದ್ದು ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದು ನಂತರ ಬಿಜೆಪಿ ಸೇರಿದ್ದರು.
ಇದೇ ದ್ವೇಷದ ಹಿನ್ನಲೆಯಲ್ಲಿ ಅದೇ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎನ್ನಲಾದ ವಿ.ಜಿ.ಸೊಣ್ಣೇಗೌಡ, ವರದರಾಜು, ನವೀನ್, ಗೋಪಿ, ಅಶೋಕ್ ಕುಮಾರ್ ಎಂಬುವವರು ಶುಕ್ರವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಮಂಜುನಾಥ ಅವರ ಅಂಗಡಿಗೆ ಬಂದು ಅವರಿಗೆ ಜಾತಿ ನಿಂದನೆ ಮಾಡಿ ಚಪ್ಪಲಿಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿ ಪರಾರಿಯಾದರು. ನಂತರ ಅಲ್ಲಿಗೆ ಬಂದ ಇಸ್ಮಾಯಿಲ್ ಎಂಬಾತ ಮನೆ ಮೇಲೆ ಬಾಂಬ್ ಹಾಕಿ ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಮಂಜುನಾಥ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ತಿರುಮಲಶೆಟ್ಟಹಳ್ಳಿ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.