ದೇವನಹಳ್ಳಿ: ರಾಜೀವ್ ಗಾಂಧಿ ನೇತೃತ್ವ ಸರ್ಕಾರದಲ್ಲಿ ಪಂಚಾಯತ್ ರಾಜ್ ಕಾಯ್ದೆ ಜಾರಿಗೊಳಿಸಿ ಅಧಿಕಾರ ವಿಕೇಂದ್ರಕರಣ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ವಿಕೇಂದ್ರೀಕರಣ ವ್ಯವಸ್ಥೆ ವಿರೋಧಿಯಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜ್ ಆರೋಪಿಸಿದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪಂಚಾಯತ್ ಸಮಾವೇಶ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ನಂತರ ಜಾರಿಗೊಂಡ ಪ್ರಜಾಪ್ರಭುತ್ವದ ಸಂವಿಧಾನದ ಅಶಯದಂತೆ ಸಮಾನತೆ ಕಲ್ಪಿಸುವ ಚಿಂತನೆಯಿಂದಾಗಿ ನೂರು ಕೋಟಿ ಜನಸಂಖ್ಯೆ ಹೊಂದಿದ್ದ ವ್ಯವಸ್ಥೆಯಲ್ಲಿ ಪ್ರಬಲರಿಗೆ ಮಾತ್ರ ಅಧಿಕಾರ ದೊರೆಯುತ್ತಿದೆ ಎಂಬುದನ್ನು ಗಮನಿಸಿ ದಿ.ನಜೀರ್ ಸಾಬ್ರಿಂದ ಪ್ರಭಾವಿತರಾಗಿ 1992ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಿ ದಲಿತರಿಗೆ, ಹಿಂದುಳಿದ ವರ್ಗಕ್ಕೆ, ಅಲ್ಪಸಂಖ್ಯಾತರಿಗೆ ಅಧಿಕಾರ ವಿತರಣೆಯಾಗುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಯಿತಿಯ ಮೂರು ಹಂತದ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಲ್ಲಿ ಮಹಿಳೆಯರಿಗೆ ವಿಶೇಷ ಮೀಸಲು ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಯುಪಿಎ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆ ಅರ್ಥಿಕವಾಗಿ ಸಬಲಗೊಳ್ಳಲು ಪಂಚಾಯತ್ ರಾಜ್ಯ ಮಂತ್ರಾಲಯ ಎಂದು ಪ್ರತ್ಯೇಕ ಇಲಾಖೆಯನ್ನು ಅರಂಭಿಸಿತ್ತು, ಪ್ರಸ್ತತ ಮೋದಿ ಸರ್ಕಾರ ಗ್ರಾಮೀಣ ಅಭಿವೃದ್ಧಿ ಇಲಾಖೆಯೊಂದಿಗೆ ಸೇರ್ಪಡೆಗೊಳಿಸಿ ಬಜೆಟ್ನಲ್ಲಿ ₨ 7 ಸಾವಿರ ಕೋಟಿ ಅನುದಾನ ಕಡಿತಗೊಳಿಸಿದೆ. ಜನರ ಬಳಿಗೆ ಅಧಿಕಾರ ಎಂಬುದು ಯುಪಿಎಸರ್ಕಾರ ನಿಲುವಾಗಿತ್ತು ಅ ಕಾಳಜಿ ಕೇಂದ್ರ ಸರ್ಕಾರಕ್ಕಿಲ್ಲ ಎಂದು ದೂರಿದರು.
ಪಂಚಾಯತ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಶಾಲೆಗಳನ್ನು ನಿರ್ಲಕ್ಷ್ಯಸಿ ರಾಜಸ್ಥಾನದಲ್ಲಿ 17 ಸಾವಿರ ಮತ್ತು ಮಧ್ಯ ಪ್ರದೇಶದಲ್ಲಿ 3.5 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಸರ್ವಶಿಕ್ಷಣ ಅಭಿಯಾನ ಯೋಜನೆಯನ್ನೆ ಸ್ಥಗಿತಗೊಳಿಸುವ ಸಂಚು ನಡೆಯುತ್ತಿದೆ. ಇದರಿಂದ ಲಕ್ಷಾಂತರ ಬಡಮಕ್ಕಳಿಗೆ ಶಿಕ್ಷಣ ವಂಚನೆಯಾಗುತ್ತಿದೆ. ದೇಶದಲ್ಲಿ ರಾಜೀವ್ ಗಾಂಧಿ ಕನಸು ನನಸಾಗಬೇಕಾದರೆ ದೇಶದ್ಯಾಂತ ಪಂಚಾಯತ್ ರಾಜ್ ವ್ಯವಸ್ಥೆ ಉಳಿವಿಗಾಗಿ ಜನಾಂದೋಲನ ನಡೆಸಲಾಗುತ್ತಿದೆ. ಇದರ ಮಹತ್ವದ ಬಗ್ಗೆ ಪ್ರತಿಯಬ್ಬರಿಗೂ ಅರ್ಥವಾಗಬೇಕು ಎಂದರು.
ಪಂಚಾಯತ್ ರಾಜ್ ಕಾಯ್ದೆ ತಿದ್ದು ಪಡಿ ಸಮಿತಿ ಸದಸ್ಯ ಡಿ.ಎಸ್.ಪಾಟೀಲ್ ಮಾತನಾಡಿ ಸರಪಂಚ್ ವ್ಯವಸ್ಥೆಯಿಂದ ಮುಕ್ತಗೊಳಿಸಿ ಜನರಕೈಗೆ ಅಧಿಕಾರ ನೀಡುವುದು ಕಾಯ್ದೆ ಉದ್ದೇಶ. 12ನೇ ಶತಮಾನದಲ್ಲಿ ಬಸವಣ್ಣ ಸಮಾನತೆಯಡಿ ಹೋರಾಟ ನಡೆಸಿದ್ದರು. ಅವಕಾಶ ವಂಚಿತರಿಗೆ ಮೀಸಲಾತಿ ಬ್ರಹ್ಮಾಸ್ತ್ರವಿದ್ದಂತೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯತ್ ರಾಜ್ ಕಾಯ್ದೆಯ ಬೇರುಗಳು ಅಳವಾಗಿ ಬೇರೂರಿದೆ ಪಂಚಾಯಿತಿ ಅಧ್ಯಕ್ಷರ ಅಧಿಕಾರಕ್ಕಿಂತ ಪಂಚಯಿತಿ ವ್ಯವಸ್ಥೆಗೆ ಅಧಿಕಾರ ನಿಡಲಾಗಿದೆ ಅದರೂ ಗ್ರಾಮ ಸಭೆ ನಿರ್ಣಯ ಪಂಚಾಯಿತಿ ವ್ಯವಸ್ಥೆಗಿಂತ ಗಟ್ಟಿ ಸಮಾಜದಲ್ಲಿ ಪ್ರತಿಯೊಬ್ಬರು ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕಬೇಕು ತಿದ್ದು ಪಡಿ ಪರಿಪೂರ್ಣ ಕಾನೂನು ಪರಿವರ್ತನೆಯಾದರೆ ದೇಶಕ್ಕೆ ರಾಜ್ಯ ಮಾದರಿಯಾಗಲಿದೆ.
ಬಯಪಾ ಅಧ್ಯಕ್ಷ ಆರ್.ಜಿ.ವೆಂಕಟಾಚಲ ಮಾತನಾಡಿ ಕಾಯ್ದೆ ತಿದ್ದುಪಡಿ ಮಾಡಿ ಹಕ್ಕು ಮತ್ತು ಕರ್ತವ್ಯ ಬಲಗೊಳಿಸಿದರೆ ಸಾಲದು, ಅರ್ಥಿಕವಾಗಿ ಸಂಪನ್ಮೂಲ ನೀಡಬೇಕು. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಬರುವಷ್ಟು ಅನುದಾನ ತಾ.ಪಂ.ಗೆ ಬರುತ್ತಿಲ್ಲ. ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗಳು ಸಂಪೂರ್ಣ ವಿಫಲವಾಗುತ್ತಿವೆ ಎಂದರು.
ಸ್ಥಳಿಯರಿಗೆ ನಿವೇಶನ ಹಕ್ಕು ಪತ್ರನೀಡಲು ಪಂಚಾಯಿತಿಗೆ ಅಧಿಕಾರವಿದೆ. ಅದರೆ ಈಗಿನ ವ್ಯವಸ್ಥೆಯಲ್ಲಿ ರಾಜೀವ್ ಗಾಂಧಿ ವಸತಿ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕು. ನೂತನ ತಿದ್ದು ಪಡಿಯಂತೆ ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಐದು ವರ್ಷ. ಅದರೆ ಅವಿಶ್ವಾಸಕ್ಕೆ 30ತಿಂಗಳು ಕಡ್ಡಾಯ ಉತ್ತಮ ಬೆಳವಣಿಗೆ. ನರೇಗಾ ಯೊಜನೆ ಎಷ್ಟುರ ಮಟ್ಟಿಗೆ ಪ್ರಗತಿಯಾಗಿದೆ, ರಾಜ್ಯಸರ್ಕಾರ ಬಿ.ಪಿ.ಲ್ ವ್ಯವಸ್ಥೆಯಲ್ಲಿ ಒಂದು ರೂಪಾಯಿಗೆ ಒಂದು ಕೆ.ಜಿ.ಅಕ್ಕಿ ವಿತರಣೆ ಪರಿಣಾಮದಿಂದ ಕೂಲಿ ಕೆಲಸಗಾರರನ್ನು ಹುಡುಕಿದರೂ ಸಿಗಲ್ಲ ಎಂದು ಪರೋಕ್ಷ ಅಸಮಾಧಾನ ವ್ಯಕ್ತ ಪಡಿಸಿದರು.
ಕುಂದಾಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ನರೇಗಾ ಯೋಜನೆಯಡಿ ಈಹಿಂದೆ ಸಾಕಷ್ಟು ಅನುದಾನ ಬರುತ್ತಿತ್ತು ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಂಸದ ಸಿ. ನಾರಾಯಣಸ್ವಾಮಿ, ಮಾಜಿ ಶಾಸಕ ವೆಂಕಟಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.