ಕೋಲ್ಕತ್ತ (ಪಿಟಿಐ): ಶಾರದಾ ಚಿಟ್ ಫಂಡ್ ಹಗರಣದಲ್ಲಿ ತಮ್ಮ ಪಕ್ಷದ ಹೆಸರು ಎಳೆದಿರುವುದಕ್ಕೆ ಕೆಂಡಾಮಂಡಲವಾಗಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ತಮ್ಮ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುವುದಾಗಿ ಬೆದರಿಕೆ ಹಾಕಿದ್ದಾರೆ.
‘ಇನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಅನಿವಾರ್ಯವಾಗಿ ಬೀದಿಗೆ ಬರಬೇಕಾಗಿದೆ. ನಮ್ಮ ವಿರುದ್ಧ ಸುಳ್ಳುಪ್ರಚಾರ ಮಾಡಲಾಗುತ್ತಿದೆ. ಆದರೆ ಬಂಗಾಳದ ಮಣ್ಣಿನ ಗುಣ ಸಾಮಾನ್ಯದ್ದಲ್ಲ. ಇಲ್ಲಿ ಸಸಿ ನೆಟ್ಟರೆ ದೆಹಲಿಯಲ್ಲಿ ಮರ ಬೆಳೆಯುತ್ತದೆ’ ಎಂದು ಮಮತಾ ಗುಡುಗಿದ್ದಾರೆ.
ಹಗರಣಕ್ಕೆ ಸಂಬಂಧಿಸಿ ಸಿಬಿಐ ಜನರಿಗೆ ನೀಡುತ್ತಿದೆ ಎನ್ನಲಾದ ಕಿರುಕುಳವನ್ನು ಪ್ರತಿಭಟಿಸಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
ತಂತ್ರ ನಡೆಯದು |
‘ನೀವು ಬೇರೆಯವರಿಗೆ ಏನು ಮಾಡಿದ್ದೀರಿ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬಂಗಾಳದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ. ನಾವು ರಾಜಕೀಯವಾಗಿ ಹಾಗೂ ಪಜಾಸತ್ತಾತ್ಮಕ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಗರ್ಜಿಸಿದರು.
ಪಿತೂರಿಗೆ ಬಗ್ಗುವುದಿಲ್ಲ...
ಬಹಿರಂಗ ಸಭೆಗೆ ಮುನ್ನ ೨೪ ಪರಗಣ ಜಿಲ್ಲೆಯ ಬಾಂಗಾಂವ್ನಲ್ಲಿ ಮತಾನಾಡಿದ ಮಮತಾ ಬ್ಯಾನರ್ಜಿ , ‘ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಆದರೆ ಯಾವುದೇ ಷಡ್ಯಂತ್ರವೂ ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಲು ಬಿಡುವುದಿಲ್ಲ’ ಎಂದರು.
ಮೋದಿ ಹೆಸರನ್ನು ಪ್ರಸ್ತಾಪಿಸದೆಯೇ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ, ‘ಅಧಿಕಾರಕ್ಕೆ ಬಂದು ಆರು ತಿಂಗಳಿನಲ್ಲಿ ಬಹುತೇಕ ದಿನಗಳನ್ನು ವಿದೇಶದಲ್ಲಿಯೇ ಕಳೆದಿದ್ದಾರೆ. ಅವರಿಗೆ ದೇಶ ಮರೆತು ಹೋಗಿದೆಯೇ? ದೇಶವನ್ನು ಮಾರುವುದಕ್ಕಾಗಿ ಅವರು ವಿದೇಶಕ್ಕೆ ಹೋಗುತ್ತಾರೆಯೇ’ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಚಿಟ್ ಫಂಡ್ಗಳನ್ನು ನಿಯಂತ್ರಿಸುವುದಿಲ್ಲ ಎಂದ ಅವರು, ‘ಇದು ಆರ್ಬಿಐ, ಸೆಬಿ ಅಧೀನದಲ್ಲಿದೆ. ನೀವೇಕೆ ಕ್ರಮ ತೆಗೆದುಕೊಂಡಿಲ್ಲ’ ಎಂದು ಕೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.