ನವದೆಹಲಿ (ಪಿಟಿಐ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಯ ಮೂಲಕ ಧರ್ಮದ ಹೆಸರಿನಲ್ಲಿ ಮತ ಯಾಚಿಸುವ ಚುನಾವಣಾ ಪ್ರಣಾಳಿಕೆಯನ್ನು ಮತದಾನದ ದಿನದಂದೇ ಬಿಡುಗಡೆ ಮಾಡಿ ಬಿಜೆಪಿ ಕಾನೂನನ್ನು ಉಲ್ಲಂಘಿಸಿದೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿದೆ.
ಮತದಾನದ ದಿನದಂದೇ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಜನ ಪ್ರಾತಿನಿಧ್ಯ ಕಾಯ್ದೆಯನ್ನು ಮತ್ತು ಆಯೋಗದ ಸೂಚನೆಯನ್ನು ಉಲ್ಲಂಘಿಸಿರುವುದರಿಂದ ಸೂಕ್ತ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದೆ.
ಪ್ರಣಾಳಿಕೆಯಲ್ಲಿ ರಾಮ ಮಮದಿರ ನಿರ್ಮಾಣ ಮಾಡುವ ಪ್ರಸ್ತಾವದ ಮೂಲಕ ದೇಶದ ಜಾತ್ಯತೀತ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ. ಧರ್ಮ ಮತ್ತು ಧಾರ್ಮಿಕ ಸ್ಥಳಗಳ ಹೆಸರನ್ನು ಬಳಸಿ ಮತ ಯಾಚಿಸಬಾರದು ಎಂದು ಚುನಾವಣೆ ಆಯೋಗದ ನೀತಿ ಸಂಹಿತೆಯಲ್ಲಿ ಹೇಳಲಾಗಿದ್ದರೂ ಅದನ್ನು ಬಿಜೆಪಿ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ದೂರಿದೆ.