ನವದೆಹಲಿ: ‘ನಾನು ಕಾಂಗ್ರೆಸ್ ತೊರೆದು, ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಪಕ್ಷದ ಮುಖಂಡ ಸಿ.ಎಂ. ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
‘ಕೆಲವರು ನಾನು ಬಿಜೆಪಿ ಸೇರುತ್ತೇನೆಂದು ಸುದ್ದಿ ಹರಡುತ್ತಿದ್ದಾರೆ. ಈ ರೀತಿ ಪ್ರಚಾರ ಮಾಡುವವರನ್ನು ತಡೆಯಲು ಸಾಧ್ಯವೇ?’ ಎಂದು ಅವರು ಮಾಧ್ಯಮ ಪ್ರತಿನಿಧಿಗಳನ್ನು ಮಂಗಳವಾರ ಪ್ರಶ್ನಿಸಿದರು.
‘ಎಲ್ಲ ಪಕ್ಷಗಳಲ್ಲೂ ನನಗೆ ಗೆಳೆಯರಿದ್ದಾರೆ. ಅವರ ಜತೆ ಮಾತನಾಡಿದ ತಕ್ಷಣ ಪಕ್ಷ ಬಿಡುತ್ತಾರೆಂದು ಗುಲ್ಲೆಬ್ಬಿಸುವುದು ಸರಿಯಲ್ಲ.
ಮಾಜಿ ಪ್ರಧಾನಿ ದೇವೇಗೌಡರನ್ನು ಈಚೆಗೆ ಹೊಗಳಿದ್ದರ ಹಿಂದೆ ಯಾವ ಉದ್ದೇಶವೂ ಇಲ್ಲ. ಅವರಲ್ಲಿರುವ ಒಳ್ಳೆ ಗುಣಗಳ ಕುರಿತು ಮಾತನಾಡುವುದರಲ್ಲಿ ತಪ್ಪೇನಿದೆ?’ ಎಂದು ಇಬ್ರಾಹಿಂ ಕೇಳಿದರು.
‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದೆ. ಅವರೊಂದಿಗೆ ರಾಜ್ಯ ರಾಜಕೀಯ ವಿಚಾರಗಳನ್ನು ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ ಮೇಡಂಗೆ ಒಳ್ಳೆಯ ಅಭಿಪ್ರಾಯವಿದೆ. ಸರ್ಕಾರದ ಯೋಜನೆಗಳ ಬಗ್ಗೆಯೂ ಸಮಾಧಾನವಿದೆ. ಈ ಯೋಜನೆಗಳನ್ನು ಎಲ್ಲ ಜಾತಿ ಬಡವರಿಗೂ ವಿಸ್ತರಿಸುವಂತೆ ಕಾಂಗ್ರೆಸ್ ಅಧ್ಯಕ್ಷರು ಸಲಹೆ ಮಾಡಿದ್ದಾರೆ. ಅವರ ಸಲಹೆಯನ್ನು ಮುಖ್ಯಮಂತ್ರಿಗೆ ತಲುಪಿಸುತ್ತೇನೆ’ ಎಂದು ಅವರು ಹೇಳಿದರು.