ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಹಾಕಿಕೊಂಡು ಸಿಬ್ಬಂದಿ ಕಾರ್ಯನಿರ್ವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ಪಾಲಿಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಬೀಗ ತೆಗೆಯಲಾಯಿತು.
ಕೊಠಡಿಗೆ ಬೀಗ ಹಾಕಿ ಕಾರ್ಯನಿರ್ವಹಿಸುತ್ತಿದ್ದ ಸಂಗತಿ ತಿಳಿದ ಕೂಡಲೇ ಬಿಬಿಎಂಪಿ ಸದಸ್ಯರಾದ ಶ್ರೀನಿವಾಸ್, ಪ್ರಕಾಶ್, ಹನುಮಂತೇಗೌಡ, ಗೋವಿಂದೇಗೌಡ ಕಚೇರಿಗೆ ಧಾವಿಸಿದರು. ‘ಬೀಗ ಹಾಕಿ ಕಾರ್ಯನಿರ್ವಹಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.
‘ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಲಾಗುತ್ತಿದೆ’ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು. ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಬೀಗ ತೆರೆಯಲಾಗಿದೆ.
‘ಪ್ರಾಧಿಕಾರದಲ್ಲಿ ನಿತ್ಯ ಹಗರಣಗಳು ನಡೆಯುತ್ತಿವೆ. ಅರ್ಕಾವತಿ ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದ ಕಡತಗಳು ಬಿಡಿಎನಲ್ಲಿ ಇವೆ. ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಕಡತಗಳನ್ನು ಇನ್ನೂ ನೀಡಿಲ್ಲ. ಕೊಠಡಿಗೆ ಬೀಗ ಹಾಕಿಕೊಂಡು ಪ್ರಮುಖ ಕಡತಗಳನ್ನು ತಿದ್ದಿರುವ ಶಂಕೆ ಮೂಡಿದೆ’ ಎಂದು ಬಿಬಿಎಂಪಿ ಸದಸ್ಯ ಪ್ರಕಾಶ್ ಆರೋಪಿಸಿದರು.
‘ಕೊಠಡಿಯಲ್ಲಿ ಪ್ರಮುಖ ಕಡತಗಳು ಇದ್ದ ಕಾರಣ ಸಿಸಿಟವಿ ಅಳವ-ಡಿಸಲಾಗಿದೆ ಜಾಗೂ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಊಟಕ್ಕೆ ಹೋಗುವಾಗ ಪೊಲೀಸ್ ಸಿಬ್ಬಂದಿ ಬೀಗ ಹಾಕಿ ಹೋಗಿದ್ದಾರೆ. ಅವರ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ. ನನ್ನ ಗಮನಕ್ಕೆ ಬಂದ ಕೂಡಲೇ ಬೀಗ ತೆರೆಸಲಾಗಿದೆ’ ಎಂದು ಬಿಡಿಎ ಆಯುಕ್ತ ಶ್ಯಾಮ್ ಭಟ್ ಸ್ಪಷ್ಟನೆ ನೀಡಿದರು.